ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಂಗ್ಯವಾಡಿದ ರಮಾನಾಥ್ ರೈ
ಮಂಗಳೂರು, ಸೆಪ್ಟೆಂಬರ್.08: ಪೆಟ್ರೋಲ್, ಡೀಸೆಲ್ ಬೆಲೆ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೇರಳದಲ್ಲಿ ಒಂದೊಂದು ರೀತಿ ಹೇಳಿಕೆ ನೀಡಿದ್ದಾರೆ. ಅವರಿಗೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ವಿಚಾರದಲ್ಲಿ ಕೋಚಿಂಗ್ ನೀಡಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ಕೇರಳದ ಉಸ್ತುವಾರಿ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಸಭೆಗಳಲ್ಲಿ ಪೆಟ್ರೋಲ್, ಡೀಸೆಲ್ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ.
ಅಚ್ಛೆ ದಿನ್ ಬರಲಿದೆ ಎಂದು ಹೇಳಿದ್ದರು. ಆದರೆ ಈಗ ಅವರ ಸುದ್ದಿಯೇ ಇಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದು ಜನರು ಬೇಸತ್ತಿದ್ದಾರೆ. ಇದೇನಾ ಮೋದಿ ಅವರ ಅಚ್ಛೆ ದಿನ್? ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಡವರಿಗೆ ಕಷ್ಟವಾಗುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ವತಿಯಿಂದ ಬಂದ್ ಕರೆ ನೀಡಿದ್ದೇವೆ. ಜನರು ಕಾಂಗ್ರೆಸ್ ಘೋಷಿಸಿದ ಬಂದ್ಗೆ ಬೆಂಬಲ ನೀಡಬೇಕು. ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯದ ಸೆಸ್ ಕಡಿಮೆ ಮಾಡಬೇಕೆನ್ನುವುದು ಸರಿಯಾದ ಮಾತಲ್ಲ ಎಂದು ರಮಾನಾಥ್ ರೈ ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಬಹಳಷ್ಟಿವೆ. ಅಲ್ಲಿ ಯಾಕೆ ಇನ್ನೂ ಸೆಸ್ ಕಡಿಮೆ ಮಾಡೋ ಬಗ್ಗೆ ಚಿಂತನೆ ನಡೆಸುತ್ತಿಲ್ಲ? ಎಂದು ಪ್ರಶ್ನಿಸಿದ ಅವರು ಸೆಪ್ಟೆಂಬರ್ 10 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳು ಸೇರಿ ಎಲ್ಲವನ್ನೂ ಬಂದ್ ಮಾಡಬೇಕೆಂದು ಕರೆ ಕೊಟ್ಟಿದ್ದೇವೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ತೈಲ ಬೆಲೆಯನ್ನು ಸಾಕಷ್ಟು ನಿಯಂತ್ರಣ ಮಾಡಿತ್ತು. ಅದರೆ ಮೋದಿ ಸರಕಾರಕ್ಕೆ ಅದು ಯಾಕೆ ಸಾಧ್ಯವಾಗುತ್ತಿಲ್ಲ. ಅಚ್ಛೆ ದಿನ್ ವಿಚಾರದಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಕಡಿಮೆ ಮಾಡುವ ವಿಷಯವೂ ಇತ್ತು.
ದೇಶದಾದ್ಯಂತ ಬಂದ್ ಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ತೈಲ ಬೆಲೆ ವಿಚಾರದಲ್ಲಿ ಈ ಬಂದ್ ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿದರು.












Click it and Unblock the Notifications