ಕರಾವಳಿಯಲ್ಲಿ ಭಾರಿ ಮಳೆ: ಮರ, ವಿದ್ಯುತ್ ಕಂಬ ಧರೆಗೆ
ಮಂಗಳೂರು, ಜೂ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಮಂಗಳೂರಿನ ಹಲವೆಡೆ ಮರಗಳು ಧರೆಗೆ ಉರುಳಿವೆ.
ಮರಗಳು ಧರೆಗೆ ಉರುಳಿದ ಪರಿಣಾಮ ನಗರದ ಹಲವೆಡೆ ಶುಕ್ರವಾರ ಮಧ್ಯಾಹ್ನದ ವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕಾರ್ಸ್ಟ್ರೀಟ್ ಬಳಿಯ ಪಕ್ಕದ ರಸ್ತೆಯಲ್ಲಿದ್ದ ನೂರು ವರ್ಷ ಹಳೇಯದಾದ ಅಶ್ವತ್ಥ ಮರ ಶುಕ್ರವಾರ ಬೆಳಗ್ಗೆ 4.30ಕ್ಕೆ ಧರೆಗೆ ಉರುಳಿದೆ.
ಮಂಗಳೂರಿನ ಎಲ್ಲೆಲ್ಲಿ ಮರ ಉರುಳಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಸ್ಥಳದಲ್ಲಿ ಎಷ್ಟು ಮಳೆಯಾಗಿದೆ ಮಾಹಿತಿಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಧರೆಗೆ ಅಶ್ವತ್ಥ ಮರ:
ಅಶ್ವತ್ಥ ಮರ ಧರೆಗೆ ಉರುಳಿದ ಪರಿಣಾಮ ಒಂದು ಕಾರು ಮತ್ತು ಒಂದು ಹೂವಿನ ಅಂಗಡಿ ಸಂಪೂರ್ಣ ಜಖಂಗೊಂಡಿದೆ.

ಧರೆಗೆ ಅಶ್ವತ್ಥ ಮರ:
ಬೆಳಗ್ಗೆ 4.30ಕ್ಕೆ ಧರೆಗೆ ಉರುಳಿದರೂ ಮಧ್ಯಾಹ್ನದವರೆಗೂ ಮರ ತೆರವು ಕಾರ್ಯಾಚರಣೆ ನಡೆದಿತ್ತು. ವಿದ್ಯುತ್ ಕಂಬ ಮತ್ತು ಪರಿವರ್ತಕ ನೆಲಕ್ಕೆ ಉರುಳಿದ್ದು ಮೆಸ್ಕಾಂಗೆ 50 ಸಾವಿರ ರೂ ನಷ್ಟವಾಗಿದೆ.

ಧರೆಗೆ ಅಶ್ವತ್ಥ ಮರ:
ಕಾರ್ಸ್ಟ್ರೀಟ್ ರಸ್ತೆ ಜನನಿಬಿಡ ರಸ್ತೆಯಾಗಿದ್ದು ನಸುಕಿನ ಜಾವ ಅಶ್ವತ್ಥ ಮರ ಉರುಳಿದ ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕರಾವಳಿಯಲ್ಲಿ ಭಾರಿ ಗಾಳಿ ಮಳೆ
ನಂದಿಗುಡ್ಡ ಮತ್ತು ಪಾಂಡೇಶ್ವರದಲ್ಲಿ ಮರಗಳು ಧರೆಗೆ ಉರುಳಿವೆ. ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದ ವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು

ಮಂಗಳೂರಿನಲ್ಲಿ ಎಷ್ಟು ಮಳೆ?
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮಂಗಳೂರಿನಲ್ಲಿ 2 ಸೆಂ.ಮೀ ಮಳೆಯಾಗಿದೆ. ಮಳೆ ಬಿದ್ದ ಪ್ರಮಾಣ ಕಡಿಮೆಯಾದರೂ ಗಾಳಿ ಹೆಚ್ಚಿದ್ದರಿಂದ ಹಲವೆಡೆ ಧರೆಗೆ ಮರಗಳು ಉರುಳಿವೆ. ಇನ್ನು ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿ ಎಷ್ಟು ಮಳೆಯಾಗಿದೆ?
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುಳ್ಯದಲ್ಲಿ 7 ಸೆಂ.ಮೀ ಅತ್ಯಧಿಕ ಮಳೆಯಾಗಿದೆ. ಬೆಳ್ತಂಗಡಿ 5 ಸೆಂ.ಮೀ; ಸುಬ್ರಹ್ಮಣ್ಯ 3 ಸೆಂ.ಮೀ; ಬಂಟ್ವಾಳ, ಮಾಣಿ, ಉಪ್ಪಿನಂಗಡಿ 2 ಸೆಂ.ಮೀ ಮಳೆಯಾಗಿದೆ.












Click it and Unblock the Notifications