ದಕ್ಷಿಣ ಕನ್ನಡ: ಹೊಳೆಯಲ್ಲಿ ಕರಗಿದ ಬೆಟ್ಟ-ಗುಡ್ಡ, ಬಡವರ ಬದುಕು ಕಸಿದ ಮೇಘ ಸ್ಫೋಟ
ಮಂಗಳೂರು, ಆಗಸ್ಟ್ 2: ದಕ್ಷಿಣಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ ಭಾರಿ ಅನಾಹುತವನ್ನು ಸೃಷ್ಠಿಸಿದೆ. ಪುಷ್ಪಗಿರಿ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಜನರು ವರುಣ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.
ಕಲ್ಮಕಾರು, ಕಡಮಕಲ್ಲು ಪ್ರದೇಶದಲ್ಲಿ ಬೆಟ್ಟಗಳಲ್ಲಿ ಉಂಟಾದ ಭಾರಿ ಮೇಘಸ್ಪೋಟದಿಂದಾಗಿ ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಭಕ್ತಾದಿಗಳಿಗೆ ಎಚ್ಚರಿಕೆ; ಭಾರಿ ಮಳೆ ಕಾರಣ 2 ದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿಷೇಧ
ದಕ್ಷಿಣಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ರೌದ್ರಾವತಾರದಲ್ಲಿ ಹರಿದ ಪರಿಣಾಮ ನದಿ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಭಾಗಶಃ ಮುಳುಗಿಸಿದೆ. ದರ್ಪಣತೀರ್ಥ ಹೊಳೆಯ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಒಳಗೂ ಹರಿದ ಪರಿಣಾಮ ಲೋಡುಗಟ್ಟಲೆ ಮಣ್ಣಿನ ರಾಶಿ ಕ್ಷೇತ್ರದ ಒಳಗೆ ಸೇರಿಕೊಂಡಿದೆ. ಕ್ಷೇತ್ರದ ಸಿಬ್ಬಂದಿಗಳು ಹಾಗು ಸ್ಥಳೀಯರು ದೇವಸ್ಥಾನದ ಮಣ್ಣನ್ನು ಹೊರ ಹಾಕುವ ಮೂಲಕ ಕ್ಷೇತ್ರವನ್ನು ಶುಚಿಗೊಳಿಸಿದ್ದಾರೆ.
ಮನೆ, ಅಂಗಡಿಗಳು ನದಿಪಾಲು
ಮಂಗಳವಾರ ತಡರಾತ್ರಿ ಸುಮಾರು 1.30 ರ ವೇಳೆಗೆ ಕಲ್ಮಕಾರು, ಕಡಮಕಲ್ಲು ಬೆಟ್ಟದಿಂದ ಹರಿದ ಭಾರಿ ಪ್ರಮಾಣದ ನೀರು ಹರಿಹರಪಳ್ಳತ್ತಡ್ಕ, ಕೊಲ್ಲಮೊಗರು, ಕಲ್ಮಕಾರು ಭಾಗದ ಹಲವು ಮನೆಗಳಿಗೆ ಹಾನಿ ಮಾಡಿದೆ. ಹತ್ತಕ್ಕೂ ಮಿಕ್ಕಿದ ಅಂಗಡಿಗಳು ಸಂಪೂರ್ಣ ನಾಶವಾಗಿದ್ದು, ನೀರಿನ ಈ ರೌದ್ರಾವತಾರದಿಂದ ಹಲವು ಕುಟುಂಬಗಳು ಬೀದಿ ಪಾಲಾಗಿದೆ. ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಪ್ರಕಾಶ್ ಎನ್ನುವವರಿಗೆ ಸೇರಿದ ಕಟ್ಟಡ ಸಂಪೂರ್ಣವಾಗಿ ನದಿ ಪಾಲಾಗಿದೆ. 12 ಗಂಟೆವರೆಗೆ ಇದ್ದ ಹೋಟೆಲ್ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ನಾಮಾವಶೇಷವಾಗಿದೆ. ಹರಿಹರ ಪಳ್ಳತ್ತಡ್ಕ ಹೊಳೆಯ ಪಕ್ಕದಲ್ಲಿರುವ ಹಲವು ಮನೆ ಹಾಗೂ ಅಂಗಡಿಗೆ ನುಗ್ಗಿದ ಪ್ರವಾಹದ ನೀರು ಆ ಭಾಗದ ಎಲ್ಲಾ ಅಂಗಡಿಗಳಿಗೆ ಭಾರಿ ನಷ್ಟ ಉಂಟು ಮಾಡಿದೆ.
ಮುನ್ನೂರಕ್ಕೂ ಹೆಚ್ಚು
ಪ್ರವಾಹದ ನೀರಿನ ಜೊತೆಗೆ ಬೃಹತ್ ಗಾತ್ರದ ಮರಗಳೂ ಹರಿದು ಬಂದ ಕಾರಣ ಹಲವಾರು ಸೇತುವೆಗಳು ನಾಶವಾಗಿದೆ. ಹರಿಹರಪಳ್ಳತ್ತಡ್ಕ- ಬಾಳುಗೋಡು ಸಂಪರ್ಕಿಸುವ ಸೇತುವೆ ಹಾಗೂ ರಸ್ತೆ ಕುಸಿತಗೊಂಡಿದ್ದು, ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರಿಸಿದ್ದಲ್ಲಿ ರಸ್ತೆ ಮತ್ತಷ್ಟು ಕುಸಿತವಾಗುವ ಸಾಧ್ಯತೆಗಳಿವೆ.
ಕಲ್ಮಕಾರು, ಕೊಪ್ಪಡ್ಕ, ಶೆಟ್ಟಿಕಟ್ಟ ಮೊದಲಾದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಒಂದು ಭಾಗ ನೀರಿಗೆ ಕೊಚ್ಚಿಹೋದ ಪರಿಣಾಮ ಮುನ್ನೂರಕ್ಕೂ ಮಿಕ್ಕಿದ ಮನೆಗಳ ಸಂಪರ್ಕವೇ ಕಡಿದಂತಾಗಿದೆ. ಕಲ್ಮಕಾರು ಪೇಟೆ ಸಂಪರ್ಕಿಸಲು ಹಾಗು ಇತರ ಭಾಗಗಳಿಗೆ ತೆರಳಲು ಯಾವುದೇ ಇತರ ಪರ್ಯಾಯ ಮಾರ್ಗ ಇಲ್ಲದೆ ಜನ ಪರದಾಡಿದ್ದಾರೆ. ತಮ್ಮ ಮನೆ ಸೇರುವ ಕಾರಣಕ್ಕಾಗಿ ಕೊಚ್ಚಿ ಹೋಗಿ ಉಳಿದಿರುವ ಸೇತುವೆಗೆ ಅಡಿಕೆಯ ಮರದಿಂದ ತಯಾರಿಸಿದ ಕಾಲ್ಸೇತುವೆಯನ್ನು ನಿರ್ಮಿಸಿ ತಮ್ಮ ಅನಿವಾರ್ಯತೆಗಾಗಿ ಇದನ್ನೇ ಉಪಯೋಗಿಸಲಾರಂಭಿಸಿದ್ದಾರೆ.
ಪ್ರವಾಹದಿಂದ ಕೃಷಿ ಭೂಮಿ ನಾಶ
ಪ್ರವಾಹದ ನೀರಿನಿಂದಾಗಿ ನೂರಾರು ಎಕರೆ ಕೃಷಿ ಭೂಮಿಯೂ ನಾಶವಾಗಿದ್ದು, ಅಡಿಕೆ ಹಾಗೂ ತೆಂಗಿನ ಕಾಯಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದಿಂದ ಹೆಚ್ಚಿನ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಸುಳ್ಯ ಶಾಸಕ ಮತ್ತು ಸಚಿವರಾದ ಎಸ್.ಅಂಗಾರ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾನಿಯ ಖುದ್ದು ಪರಿಶೀಲನೆಯನ್ನು ನಡೆಸಿದ್ದು, ಹಾನಿಗೊಳಗಾದ ವರದಿಯನ್ನು ತಕ್ಷಣ ತಯಾರಿಸಿ ತನ್ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಂದ ತಕ್ಷಣವೇ ಸಂತ್ರಸ್ತರಿಗೆ ಪರಿಹಾರವನ್ನು ಯಾವುದೇ ತಡ ಮಾಡದೆ ವಿತರಿಸಲಾಗುವುದು ಅಂತಾ ಹೇಳಿದ್ದಾರೆ..
ನೆರವಿನ ಭರವಸೆ
ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಒದಗಿಸಲು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಲ್ಕು ಗ್ರಾಮಗಳಲ್ಲಿ ಆದ ಈ ನಷ್ಟವನ್ನು ಅಂದಾಜಿಸಿ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ. ಜನತೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಜೊತೆಗಿದೆ. ಅನಿವಾರ್ಯ ಸಂದರ್ಭದಲ್ಲಿ ಅಪಾಯದಲ್ಲಿರುವ ಮನೆ ಮಂದಿಯನ್ನು ಜಿಲ್ಲಾಡಳಿತ ಬೇರೆ ಕಡೆಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಲಿದ್ದು, ಜನತೆ ಅಧಿಕಾರಿಗಳ ಜೊತೆ ಸ್ಪಂದಿಸಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ಮನವಿಯನ್ನೂ ಮಾಡಿದ್ದಾರೆ.
ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಜರಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೂ ಪರಿಹಾರವನ್ನು ತಕ್ಷಣ ನೀಡಲಾಗುವುದು ಎಂದು ಸಚಿವ ಅಂಗಾರ ತಿಳಿಸಿದ್ದಾರೆ. ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.