ಮಂಗಳೂರು : ನವಜಾತ ಶಿಶುವಿಗೆ ಅಮ್ಮನ ಆರೈಕೆಯಿಲ್ಲ
ಮಂಗಳೂರು, ಡಿ.18 : ಅದು ಎರಡು ದಿನದ ನವಜಾತ ಹೆಣ್ಣು ಶಿಶು, ಕಲ್ಲು ಬೆಂಚಿನ ಮೇಲೆ ಮೈಮೇಲೆ ತುಂಡು ಬಟ್ಟೆಯೂ ಇಲ್ಲದೇ ಮಲಗಿತ್ತು, ಜೊತೆಗೆ ಎಡಗೈ ಮೂಳೆ ಮುರಿದು ಹೋಗಿರುವ ನೋವು ಬೇರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಮಗುವನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿವೆ.
ಮಂಗಳೂರಿನ ಪುತ್ತೂರು ಸಮೀಪದ ಕಬಕದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾದ 2.3 ಕೆ.ಜಿ ತೂಕವಿರುವ ಎರಡು ದಿನಗಳ ಹೆಣ್ಣು ಮಗು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಆದರೆ, ಮಗುವಿನ ಪೋಷಕರು ಯಾರು? ಎಂಬುದು ತಿಳಿದುಬಂದಿಲ್ಲ. ಹೆತ್ತ ತಾಯಿಯೇ ಅದನ್ನು ಬಿಟ್ಟು ಹೋಗಿದ್ದಾಳೆ. [ಜನಿಸಿದ್ದೆಲ್ಲಾ ಹೆಣ್ಣು ಮಗು, ತಾಯಿ ಆತ್ಮಹತ್ಯೆ]

ಬುಧವಾರ ಬಟ್ಟೆ ತೊಳೆಯಲು ಹೋಗುತ್ತಿದ್ದ ಗಿರಿಜಾ ಅವರು ಕಲ್ಲುಬೆಂಚಿನ ಮೇಲೆ ಅನಾಥ ಮಗುವನ್ನು ನೋಡಿದ್ದರು. ನಂತರ ಅದನ್ನು ಮನೆಗೆ ಕರೆದುಕೊಂಡು ಹೋಗಿ ಪುತ್ರ ದಿನೇಶ್ಗೆ ಈ ಬಗ್ಗೆ ಮಾಹಿತಿ ನೀಡಿದರು. ದಿನೇಶ್ ತಮ್ಮ ಸ್ನೇಹಿತರ ಸಹಾಯದಿಂದ 108 ಆಂಬ್ಯುಲೆನ್ಸ್ಗೆ ಫೋನ್ ಮಾಡಿ ಮಗುವನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. [ಪೋಷಕರ ಮೂಢ ನಂಬಿಕೆ, ಮಗುವಿನ ಸ್ಥಿತಿ ಗಂಭೀರ]
ಮೊದಲು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಮಗುವಿನ ಎಡಗೈ ಮೂಳೆ ಮುರಿದಿರುವುದನ್ನು ತಿಳಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿದ್ದಾರೆ. ಸದ್ಯ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಗುವಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]
ಗಿರಿಜಾ ಅವರ ಸಮಯ ಪ್ರಜ್ಞೆಯಿಂದಾಗ ಎರಡು ದಿನದ ಮಗು ಪ್ರಾಣಿಗಳ ಪಾಲಾಗದೆ ಆಸ್ಪತ್ರೆ ಸೇರಿದೆ. ಆದರೆ, ಅದರ ತಾಯಿ ಯಾರು? ಎಂಬುದು ಅದಕ್ಕೆ ತಿಳಿದಿಲ್ಲ. ಆಸ್ಪತ್ರೆ ವೈದ್ಯರು ಮಗುವಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.












Click it and Unblock the Notifications