ಮಂಗಳೂರು: ಆರ್ಥಿಕ ಸಂಕಷ್ಟದ ವಿದ್ಯಾರ್ಥಿನಿಯರೇ ಟಾರ್ಗೆಟ್; ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಬಂಧನ
ಮಂಗಳೂರು, ಫೆಬ್ರವರಿ 3: ಕಡಲನಗರಿ ಮಂಗಳೂರಿನಲ್ಲಿ ಆರ್ಥಿಕ ಸಂಕಷ್ಟ ಹೊಂದಿರುವ ವಿದ್ಯಾರ್ಥಿನಿಯರನ್ನೇ ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ.
ಆರ್ಥಿಕವಾಗಿ ಸಂಕಷ್ಟ ಹೊಂದಿರುವ ಮತ್ತು ಹಣದ ಅವಶ್ಯಕತೆ ಹೊಂದಿರುವ ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಇಟ್ಟುಕೊಂಡು ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧನ ಮಾಡಿದ್ದು, ಅಪ್ರಾಪ್ತೆ ಜೊತೆ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಈ ವೇಶ್ಯಾವಾಟಿಕೆ ದಂಧೆಯ ಜಾಲದಲ್ಲಿ ಹಲವರು ಇದ್ದು, ಸಿಸಿಬಿ ಪೊಲೀಸರಿಗೆ ಹೆಚ್ಚಿನ ತನಿಖೆ ಮಾಡಲು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಮಂಗಳೂರು ಎಜುಕೇಶನ್ ಹಬ್. ಇಲ್ಲಿ ರಾಜ್ಯದ ಹಲವು ಭಾಗಗಳಿಂದ, ದೇಶದ ಹಲವು ರಾಜ್ಯಗಳಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಾರೆ. ಮಂಗಳೂರಿನ ದುಬಾರಿ ದುನಿಯಾದಲ್ಲಿ ಬಾಳಬೇಕಾದರೆ ಹಣವೂ ಅಷ್ಟೇ ಪ್ರಮಾಣದಲ್ಲಿ ಬೇಕಾಗುತ್ತದೆ. ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಹಣದ ಸಮಸ್ಯೆಯಾಗುವುದನ್ನು ಅರಿತಿದ್ದ ಮಾಂಸ ದಂಧೆಯ ಜಾಲವೊಂದು ಮಂಗಳೂರು ನಗರ ಭಾಗದಲ್ಲೇ ಕಾಲೇಜು ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ.
ಪಿಯುಸಿ ಓದುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸಂತ್ರಸ್ಥರಿಗೆ ಒತ್ತಾಯಪೂರ್ವಕವಾಗಿ, ಆಮಿಷ, ಬ್ಲ್ಯಾಕ್ಮೇಲ್ ಮಾಡಿ ಆರೋಪಿಗಳು ವೇಶ್ಯವಾಟಿಕೆಗೆ ತಳ್ಳುತ್ತಿದ್ದರು. ಆರೋಪಿ ಶಮೀನಾ ಬಾಡಿಗೆ ಪಡೆದಿರುವ ಪ್ಲ್ಯಾಟ್ ಒಂದಕ್ಕೆ ಸಂತ್ರಸ್ಥರನ್ನು ಕರೆಸಿ ಈ ಕೃತ್ಯ ನಡೆಸುತ್ತಿದ್ದಳು.
ಫ್ಲ್ಯಾಟ್ ಒಳಗೆ ಸಿಸಿಟಿವಿ ಕ್ಯಾಮೆರಾ ಹಾಕಿ ವೇಶ್ಯಾವಾಟಿಕೆ ಚಲನವಲನ ಸೆರೆ ಹಿಡಿಯಲಾಗಿತ್ತು. ಆ ಬಳಿಕ ಇದೇ ದೃಶ್ಯಾವಳಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಸಂತ್ರಸ್ಥ ಬಾಲಕಿಯರು, ಯುವತಿಯರನ್ನು ಮತ್ತೆ ಮತ್ತೆ ವೇಶ್ಯವಾಟಿಕೆಗೆ ಕರೆಸಿಕೊಳ್ಳಲಾಗುತಿತ್ತು. ಸದ್ಯ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಒಟ್ಟು ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಶಮೀನಾ, ಆಕೆಯ ಪತಿ ಸಿದ್ದೀಕ್, ಆಯೀಷಮ್ಮ, ಮಹಮ್ಮದ್ ಸಫ್ವಾನ್ ಎಂದು ಗುರುತಿಸಲಾಗಿದೆ.
ಶಮಿನಾ ಮೊದಲು ಅಪ್ರಾಪ್ತ ಬಾಲಕಿಯನ್ನು ಈ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದು, ಬಳಿಕ ಆಕೆಯ ಸಹಾಯದಿಂದ ಆರ್ಥಿಕವಾಗಿ ಸಂಕಷ್ಟವನ್ನು ಹೊಂದಿರುವ ಇತರೆ ವಿದ್ಯಾರ್ಥಿನಿಯರನ್ನು ಸೆಳೆಯುತ್ತಿದ್ದಳು. ಒಮ್ಮೆ ಈ ಜಾಲಕ್ಕೆ ಬಿದ್ದ ನಂತರ ಫ್ಲ್ಯಾಟ್ನಲ್ಲಿ ಅವರಿದ್ದ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನೇ ಬಳಸಿ ಅವರನ್ನು ಮತ್ತೆ ಮತ್ತೆ ಈ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಾರಂಭದಲ್ಲಿ ವೇಶ್ಯವಾಟಿಕೆಯ ಮಾಹಿತಿ ಕಾಲೇಜಿನ ಮುಖ್ಯಸ್ಥರ ಮೂಲಕ ಚೈಲ್ಡ್ ಹೆಲ್ಪ್ಲೈನ್ ಗಮನಕ್ಕೆ ಬಂದಿತ್ತು. ಆ ಬಳಿಕ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಗಳೂರು ಪೊಲೀಸರು ಒಟ್ಟು ಸೇರಿ ಮಾಂಸ ದಂಧೆ ನಡೆಯುತ್ತಿದ್ದ ಫ್ಲ್ಯಾಟ್ಗೆ ದಾಳಿ ನಡೆಸಿದ್ದಾರೆ. ಸದ್ಯ ಪ್ಲ್ಯಾಟ್ನಲ್ಲಿದ್ದ ಸಿಸಿ ಕ್ಯಾಮೆರಾ ಫೂಟೇಜ್, ಆರೋಪಿಗಳ ಐದು ಮೊಬೈಲ್ ವಶಕ್ಕೆ ಪಡೆದು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ ದಾಖಲೆಯ ಸಂಗ್ರಹ ಮಾಡಲಾಗುತ್ತಿದೆ.
ವೇಶ್ಯಾವಟಿಕೆ ದಂಧೆಯಲ್ಲಿ ಒಳಗಾಗುತ್ತಿದ್ದ ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬರುವಂತೆ ಒತ್ತಡ ಹಾಕುತ್ತಿದ್ದುದು ವಿಚಾರಣೆಯಲ್ಲಿ ಗೊತ್ತಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆ, ಐಟಿಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಮೇಲುಸ್ತುವಾರಿಯಲ್ಲಿ ಸಿಸಿಬಿ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಸುವಂತೆ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಸೂಚಿಸಿದ್ದಾರೆ.
ಈ ವೇಶ್ಯಾವಟಿಕೆ ದಂಧೆಯಲ್ಲಿ ಇನ್ನು ಹಲವು ಆರೋಪಿಗಳು ಇರುವ ಮಾಹಿತಿಯು ಇದೆ. ಆರೋಪಿಗಳು ಇನ್ನಷ್ಟು ಸಂತ್ರಸ್ಥ ವಿದ್ಯಾರ್ಥಿನಿಯರನ್ನು ಈ ದಂಧೆಗೆ ತಳ್ಳಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಈ ರೀತಿ ವೇಶ್ಯವಾಟಿಕೆ ದಂಧೆ ನಡೆಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.