ಸರ್ಕಾರದಿಂದ ವಿದ್ಯುತ್ ಪಡೆಯದೇ ಸ್ವಾವಲಂಬಿಯಾದ ಗ್ರಾಮಸ್ಥರು!
ಮಂಗಳೂರು, ಡಿಸೆಂಬರ್ 22; ಬೇಸಿಗೆ ಆರಂಭವಾಯಿತು ಎಂದರೆ ಸಾಕು ವಿದ್ಯುತ್ ಸಮಸ್ಯೆಯೂ ಆರಂಭಗೊಳ್ಳುತ್ತದೆ. ಲೋಡ್ ಶೆಡ್ಡಿಂಗ್ನಿಂದಾಗಿ ಇಡೀ ದಿನದ ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಜನರು ರೋಸಿ ಹೋಗುತ್ತಾರೆ. ನಗರದ ಮಂದಿಗೆ ವಿದ್ಯುತ್ ಇಲ್ಲದೇ ಶೆಖೆಯಲ್ಲಿ ಹೇಗೆ ಇರಬೇಕು ಎಂಬ ಚಿಂತೆಯಾದರೆ ಹಳ್ಳಿಯಲ್ಲಿರುವ ಕೃಷಿಕರಿಗೆ ತೋಟಕ್ಕೆ ನೀರು ಹಾಯಿಸುದು ಹೇಗೆ? ಎಂಬುವುದು ಚಿಂತೆ.
ದಕ್ಷಿಣ ಕನ್ನಡ-ಕೊಡಗು ಗಡಿಭಾಗದ ಈ ಗ್ರಾಮದಲ್ಲಿ ಮಾತ್ರ ವಿದ್ಯುತ್ ಸಮಸ್ಯೆ ಇಂದಿಗೂ ತಲೆದೂರಿಲ್ಲ. ಜನ ಅಯ್ಯೋ ವಿದ್ಯುತ್ ಇಲ್ಲ ಅಂತಾ ಸರ್ಕಾರಕ್ಕೆ ಹಿಡಿಶಾಪ ಹಾಕಿಲ್ಲ. ಯಾಕೆಂದರೆ ಗ್ರಾಮದ ಪ್ರತಿಯೊಂದು ಮನೆಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸರ್ಕಾರದ ವಿದ್ಯುತ್ ಪಡೆಯದೇ ಗ್ರಾಮಸ್ಥರು ಸ್ವಾವಲಂಬಿಯಾಗಿದ್ದಾರೆ.
ವಿದ್ಯುತ್ ದರ ಪರಿಷ್ಕರಣೆಗೆ ಮುಂದಾದ ಬೆಸ್ಕಾಂ
ವಿದ್ಯುತ್ ಸಮಸ್ಯೆಯನ್ನು ಅನುಭವಿಸದ ಗ್ರಾಮ, ಪಟ್ಟಣವನ್ನು ನಮ್ಮ ದೇಶದಲ್ಲಿ ಹುಡುಕುವುದು ಕಷ್ಟಸಾಧ್ಯವೇ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇಂದಿಗೂ ವಿದ್ಯುತ್ ಕಾಣದ ಹಲವು ಪ್ರದೇಶಗಳು ಇಂದಿಗೂ ನಮ್ಮ ಮುಂದಿದೆ.
ದಕ್ಷಿಣ ಕನ್ನಡ: ಬರಡಾದ ಭೂಮಿಯಲ್ಲಿ ಅಂತರ ಗಂಗೆಯನ್ನು ಹರಿಸಿದ ಕೃಷಿಕ
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕೊಡಗಿನ ಚೆಂಬು ಗ್ರಾಮ ಮಾತ್ರ ಇವುಗಳಿಂದ ಸ್ವಲ್ಪ ವಿಭಿನ್ನ. ನೀರಿನ ಮೂಲಕ ತಮಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತಿರುವ ಇಲ್ಲಿನ ಕುಟುಂಬಗಳು ಈ ಗ್ರಾಮವನ್ನು ವಿದ್ಯುತ್ನಲ್ಲಿ ಸ್ವಾವಲಂಬಿ ಗ್ರಾಮವನ್ನಾಗಿ ಮಾಡಿದೆ.
ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ
ಪವರ್ ಕಟ್ ಬಿಸಿ ಈ ಗ್ರಾಮಕ್ಕೆ ತಟ್ಟಿಲ್ಲ
ಚೆಂಬು ಗ್ರಾಮದ ಜನರನ್ನು ಪವರ್ ಕಟ್ ಎನ್ನುವ ಬಾಧೆ ಎಂದಿಗೂ ಬಾಧಿಸಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕೊಡಗು ವ್ಯಾಪ್ತಿಯಲ್ಲಿರುವ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾದ ಚೆಂಬು ಗ್ರಾಮದ ಯಶೋಗಾಥೆ. ಹೆಚ್ಚಾಗಿ ಅರಣ್ಯ ಪ್ರದೇಶವನ್ನೇ ಹೊಂದಿರುವ ಇಲ್ಲಿ ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಹೆಚ್ಚಾಗಿ ದಟ್ಟಾರಣ್ಯವನ್ನೇ ಹೊಂದಿರುವ ಈ ಗ್ರಾಮದ ಕೆಲವು ಕಡೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿದ್ದು, ಇನ್ನು ಕೆಲವು ಕಡೆಗೆ ವಿದ್ಯುತ್ ಕಂಬಗಳನ್ನು ಹಾಕಲು ಅರಣ್ಯ ಇಲಾಖೆಯ ಆಕ್ಷೇಪವಿದೆ. ಈ ಕಾರಣದಿಂದಾಗಿ ಇಲ್ಲಿ ವಿದ್ಯುತ್ ಸಂಪರ್ಕವು ಕಷ್ಟ ಸಾಧ್ಯ ಎಂದು ತಿಳಿದ ಇಲ್ಲಿನ ಕುಟುಂಬಗಳು ಈ ಭಾಗದಲ್ಲಿ ಹೇರಳವಾಗಿ ಹರಿಯುವ ಜಲಧಾರೆಗಳನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ತೊಡಗಿದ್ದಾರೆ. ಪರಿಣಾಮ ಇಲ್ಲಿನ ಶೇಕಡ 80ಕ್ಕೂ ಮಿಕ್ಕಿದ ಮನೆಗಳು ಇಂದು ಜಲವಿದ್ಯುತ್ ಅನ್ನು ವರ್ಷಪೂರ್ತಿ ಬಳಸಿಕೊಂಡು ತಮ್ಮ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡಿವೆ.
ಗ್ರಾಮ ಪಂಚಾಯಿತಿಯ ಸಹಕಾರ
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಚೆಂಬು ಗ್ರಾಮ ಪಂಚಾಯತಿ ಇಲ್ಲಿನ ಬಹುತೇಕ ಮನೆಗಳಿಗೆ ವಿದ್ಯುತ್ ಉತ್ಪಾದಿಸಲು ಬೇಕಾದ ಸಲಕರಣೆಗಳನ್ನು ಕಲ್ಪಿಸುವ ಮೂಲಕ ವಿದ್ಯುತ್ ಸ್ವಾವಲಂಬಿಯನ್ನಾಗಿ ರೂಪಿಸುವಲ್ಲಿ ಸಹಕಾರ ನೀಡಿದೆ. ಬಂಡೆಗಳ ಮಧ್ಯದಿಂದ, ಹಳ್ಳಗಳಿಂದ ನೀರನ್ನು ಪೈಪ್ ಮೂಲಕ ತಮ್ಮ ಜಮೀನಿನಲ್ಲಿ ನಿರ್ಮಿಸಿದ ಟ್ಯಾಂಕ್ ನಲ್ಲಿ ಸಂಗ್ರಹಿಸುವ ಇಲ್ಲಿನ ಗ್ರಾಮಸ್ಥರು, ಸಂಗ್ರಹಿಸಿದ ನೀರನ್ನು ವಿವಿಧ ಆಕಾರದ ಪೈಪ್ ಗಳನ್ನು ಜೋಡಿಸಿ ಟರ್ಬೈನ್ಗೆ ಹಾಯಿಸುತ್ತಾರೆ. ನೀರಿನ ರಭಸಕ್ಕೆ ಟರ್ಬೈನ್ ತಿರುಗಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ. 1 ಕೆ.ವಿ, 2 ಕೆ.ವಿ ಹೀಗೆ ವಿದ್ಯುತ್ ಉತ್ಪಾದಿಸುವ ಇಲ್ಲಿನ ಗ್ರಾಮಸ್ಥರು ದಿನದ 24 ಗಂಟೆಯೂ ಯಾವುದೇ ಅಡಚಣೆಗಳಿಲ್ಲದೆ ವಿದ್ಯುತ್ ಪಡೆಯುತ್ತಿದ್ದಾರೆ.
ಹೆಚ್ಚಾಗಿವೆ ನೀರಿನ ಮೂಲಗಳು
ಈ ಭಾಗದಲ್ಲಿ ಸದಾ ಹರಿಯುವ ಹಲವು ನೀರಿನ ಮೂಲಗಳಿವೆ. ಇವುಗಳನ್ನು ಪ್ಲಾಸ್ಟಿಕ್ ಪೈಪ್ಗಳ ಮೂಲಕ ಶೇಖರಿಸಿ ಅವುಗಳನ್ನು ಟರ್ಬೈನ್ ಮೂಲಕ ಹರಿಸಿ ವಿದ್ಯುತ್ ತಯಾರಿಸಲಾಗುತ್ತಿದೆ. 30 ರಿಂದ 50 ಸಾವಿರ ರೂಪಾಯಿಗಳಿಗೆ ಈ ವ್ಯವಸ್ಥೆಯನ್ನು ಆಳವಡಿಸುವ ಮೂಲಕ ನಿರಂತರ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಸರಕಾರದಿಂದ ಈ ವ್ಯವಸ್ಥೆಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದ್ದು, ಇದರಿಂದಾಗಿ ಇಲ್ಲಿನ ಗ್ರಾಮಸ್ಥರು ಹೆಚ್ಚಿನ ಬಂಡವಾಳ ಹೂಡದೆಯೇ ನಿರಂತರ ವಿದ್ಯುತ್ ಪಡೆಯುತ್ತಿದ್ದಾರೆ.
ಮಳೆಗಾಲದಲ್ಲಿ ನಿರಂತರ ಕರೆಂಟ್ ಪಡೆಯುವ ಇಲ್ಲಿನ ಗ್ರಾಮಸ್ಥರು ಬೇಸಿಗೆಯಲ್ಲಿ ಹಗಲು ಹೊತ್ತು ನೀರನ್ನು ಕೃಷಿತೋಟಗಳಿಗೆ ಬಿಟ್ಟು, ರಾತ್ರಿ ಮಾತ್ರ ಟರ್ಬೈನ್ ಗಳನ್ನು ಬಳಸುತ್ತಾರೆ. ಈ ಮೂಲಕ ಕೃಷಿಗೂ ಹಾಗೂ ಕರೆಂಟಿಗೂ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮನೆಗೆ ಅತೀ ಅಗತ್ಯವಾಗಿ ಬೇಕಾದಂತಹ ಎಲ್ಲಾ ವಿದ್ಯುತ್ ಉಪಕರಣಗಳನ್ನು ಜಲವಿದ್ಯುತ್ ಮೂಲಕವೇ ಉಪಯೋಗಿಸುತ್ತಿದ್ದು, ಯಾವ ಮಳೆ-ಗಾಳಿ ಬಂದರೂ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಸಿಗುತ್ತಿದೆ.
ಅರಣ್ಯ ಇಲಾಖೆ ಬಿಡುತ್ತಿಲ್ಲ
ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥ ಉದಯ ಕುಮಾರ್, "ಸರ್ಕಾರದಿಂದ ವಿದ್ಯುತ್ ನಮ್ಮ ಗ್ರಾಮಕ್ಕೆ ಸಿಗೋದಿಲ್ಲ. ವಿದ್ಯುತ್ ಕಂಬ, ತಂತಿಗಳನ್ನು ಹಾಕಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರೇ ಅವರಿಗೆ ಬೇಕಾದ ವಿದ್ಯುತ್ ಅನ್ನು ತಯಾರು ಮಾಡುತ್ತಾರೆ. ಬೇಸಿಗೆ ಕಾಲದ ತನಕ ಮನೆಗೆ ವಿದ್ಯುತ್ ಬಳಸುತ್ತೇವೆ. ಬೇಸಿಗೆ ಕಾಲದಲ್ಲಿ ಇದೇ ನೀರನ್ನು ಹಗಲು ತೋಟಕ್ಕೆ ನೀರು ಹಾಯಿಸಿ ರಾತ್ರಿ ಮನೆಗೆ ಬಳಸುತ್ತೇವೆ. ಈ ಜಲ ವಿದ್ಯುತ್ಗೆ ಸರ್ಕಾರ ದಿಂದ ಸಬ್ಸಿಡಿ ರೂಪದಲ್ಲಿ ಸಹಕಾರ ಇದೆ"ಎಂದರು.
ಇನ್ನು ಗ್ರಾಮಸ್ಥೆ ರತ್ನಾವತಿ ಮಾತನಾಡಿ,"ಮನೆಗೆ ಬೇಕಾದ ಎಲ್ಲಾ ವಿದ್ಯುತ್ ಈ ಜಲವಿದ್ಯುತ್ನಿಂದ ಸಿಗುತ್ತದೆ. ಮನೆಯ ಟಿವಿ, ರೆಫ್ರಿಜೇಟರ್, ಮಿಕ್ಸಿ ಎಲ್ಲವೂ ಈ ವಿದ್ಯುತ್ ನಿಂದಲೇ ಕೆಲಸ ನಿರ್ವಹಿಸುತ್ತದೆ. ಈವರೆಗೆ ವಿದ್ಯುತ್ ಸಮಸ್ಯೆ ನಮಗೆ ಬಂದಿಲ್ಲ" ಎಂದು ಹೇಳಿದರು.