ದಕ್ಷಿಣ ಕನ್ನಡ: ಜು.1ರಿಂದ ಖಾಸಗಿ ಬಸ್ ಓಡಾಟ; ದರ ಏರಿಕೆ ಬರೆ
ಮಂಗಳೂರು, ಜೂನ್ 30: ಕೋವಿಡ್ ಲಾಕ್ಡೌನ್ ಕಾರಣದಿಂದ ಸಂಚಾರ ನಿಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ (ಜುಲೈ 1)ಯಿಂದ ಖಾಸಗಿ ಬಸ್ ಓಡಾಟ ಆರಂಭಿಸಲಿದೆ.
ಆದರೆ, ಲಾಕ್ಡೌನ್ನಿಂದ ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿ ನಲುಗಿರುವ ಜಿಲ್ಲೆಯ ಜನಸಾಮಾನ್ಯರಿಗೆ ಬಸ್ ದರ ಏರಿಕೆಯ ಬರೆ ಬಿದ್ದಿದೆ.
ರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆ
"ಬಸ್ಗಳಲ್ಲಿ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು ಎಂಬ ಮಾರ್ಗಸೂಚಿ ಜಾರಿಯಲ್ಲಿರುವವರೆಗೆ ಅಥವಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ನಡೆಸಿ ನಿರ್ಧಾರ ಪ್ರಕಟಿಸುವವರೆಗೆ ಪ್ರಯಾಣಿಕರು ಶೇ.20ರಷ್ಟು ಹೆಚ್ಚುವರಿ ದರ ಪಾವತಿಸುವುದು ಅನಿವಾರ್ಯವಾಗಿದೆ. ಗುರುವಾರ ಖಾಸಗಿ ಸಿಟಿ ಬಸ್ಗಳು ಪ್ರಯಾಣ ದರ ಹೆಚ್ಚಳದೊಂದಿಗೆ ರಸ್ತೆಗೆ ಇಳಿಯಲಿವೆ,'' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
"ಈ ಹಿಂದೆ 2020ರ ಜೂ.1ರಂದು ಬಸ್ ದರ ಏರಿಕೆ ಮಾಡಲಾಗಿದ್ದು, ಮೊದಲ ಸ್ಟೇಜ್ ಮತ್ತು ಎರಡನೇ ಸ್ಟೇಜ್ಗೆ 10 ರೂ. ಇದ್ದ ಪ್ರಯಾಣದರ 12 ರೂ.ಗೆ ಏರಿಕೆಯಾಗಿದೆ. ಖಾಯಂ ಆಗಿ ಬಸ್ ದರ ಏರಿಕೆ ಮಾಡಬೇಕು ಎಂದು ಸಿಟಿ ಬಸ್ ಮಾಲಕರು ವಿನಂತಿಸಿದ್ದಾರೆ. ಆದರೆ, ಕೋವಿಡ್ ನಿಯಮಾವಳಿ ಜಾರಿಯಲ್ಲಿ ಇರುವವರೆಗೆ ಮಾತ್ರ ಹೆಚ್ಚುವರಿ ದರ ಪಡೆಯಲು ಅನುಮತಿ ನೀಡಲಾಗಿದೆ,'' ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.