ಮತದಾನದಿಂದ ವಂಚಿತರಾದ ಕುವೈತ್ ನಲ್ಲಿರುವ ಮೋದಿ ಅಭಿಮಾನಿಗಳು
ಮಂಗಳೂರು, ಏಪ್ರಿಲ್ 18: ಮತ ಚಲಾಯಿಸಲು ಕುವೈತ್ ನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮೋದಿ ಅಭಿಮಾನಿಗಳಿಗೆ ಈಗ ಭಾರೀ ನಿರಾಶೆಯಾಗಿದೆ. ಹೌದು, ಇನ್ನೇನು ಫ್ಲೈಟ್ ಹತ್ತಿ, ಮಂಗಳೂರಿಗೆ ಹೋಗಿ ತಮ್ಮ ಹಕ್ಕು ಚಲಾಯಿಸಬಹುದು ಎಂಬ ಖುಷಿಯಲ್ಲಿದ್ದ ಅವರಿಗೆ ಒಂದು ರೀತಿಯಲ್ಲಿ ಅಘಾತವಾಗಿದೆ ಎಂದೇ ಹೇಳಬಹುದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾವು ಚಲಾಯಿಸುವ ಒಂದೊಂದು ವೋಟು ಅತ್ಯಮೂಲ್ಯ. ಆದರೆ ಇಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಸುಮಾರು 60ಕ್ಕೂ ಹೆಚ್ಚು ಮಂದಿ ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಮತದಾನದಿಂದ ವಂಚಿತರಾಗಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಜೊತೆ ಮಾಹಿತಿ ಹಂಚಿಕೊಂಡಿರುವ ಮೋದಿ ಅಭಿಮಾನಿ, ಸದ್ಯ ಕುವೈತ್ ನಲ್ಲಿ ವಾಸವಿರುವ ಮೋಹನ್ ದಾಸ್ ಕಾಮತ್ ಅವರು, "ನಾವು ಏಪ್ರಿಲ್ 18 ರಂದು ಮಂಗಳೂರಿನಲ್ಲಿ ಮತ ಚಲಾಯಿಸಲು ಭಾರೀ ಸಿದ್ಧತೆ ನಡೆಸಿಕೊಂಡಿದ್ದೆವು. ಎಲ್ಲರೂ ರಜೆ ಹಾಕಿ ಕುವೈತ್ ನಿಂದ ಒಟ್ಟಿಗೆ ಹೊರಟ್ಟಿದ್ದೆವು. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. ಆ ಕಾರಣಕ್ಕಾಗಿ ನಮ್ಮೆಲ್ಲ ಕೆಲಸಗಳನ್ನು ಬದಿಗಿಟ್ಟು ಮಂಗಳೂರಿಗೆ ಹೊರಟರೆ ಇಂತಹದೊಂದು ಪರಿಸ್ಥಿತಿ ಎದುರಾಯಿತು" ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಕೊನೆಗೆ ಅವರು ಮಂಗಳೂರಿಗೆ ಬರಲು ಎಷ್ಟೆಲ್ಲಾ ಪ್ರಯತ್ನಪಟ್ಟರೂ ಅದು ಸಾಧ್ಯವಾಗದೆ ಕುವೈತ್ ನಲ್ಲೇ ಉಳಿದಿದ್ದಾರೆ. ದುರಾದೃಷ್ಟ ಎಂದರೆ ಇದೇ ಇರಬೇಕು. ಕೆಲವರಿಗೆ ಮತಗಟ್ಟೆ ಹತ್ತಿರವಿದ್ದರೂ ಮತ ಚಲಾಯಿಸಲು ಆಲಸ್ಯ. ಅಸಮಾಧಾನ. ಆದರೆ ದೂರದೂರಿನಿಂದ ತಮ್ಮ ಹಕ್ಕನ್ನು ಚಲಾಯಿಸಲು ಬರುವವರಿಗೆ ಇಂತಹ ದುಸ್ಥಿತಿ. ಮುಂದೆ ಇಂತಹ ಸ್ಥಿತಿ ಯಾವ ದೂರದ ಪ್ರಜೆಗೂ ಒದಗಬಾರದೆಂದರೆ ಸರ್ಕಾರ ಆನ್ ಲೈನ್ ನಲ್ಲಿ ಮತ ಹಾಕುವ ವ್ಯವಸ್ಥೆಯನ್ನು ಒದಗಿಸಬೇಕೆಂಬುದು ಬಹುತೇಕರ ಅನಿಸಿಕೆ.












Click it and Unblock the Notifications