PM Modi Mangaluru Visit : ಸೆ.2 ರಂದು ಮೋದಿ ಮಂಗಳೂರಿಗೆ ಆಗಮನ; ಭರದಿಂದ ಸಾಗಿದ ತಯಾರಿ
ಮಂಗಳೂರು, ಆಗಸ್ಟ್ 25: ರಾಜ್ಯದ ಕಡಲನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಎರಡರಂದು ಆಗಮಿಸುವ ನಿರೀಕ್ಷೆಯಿದೆ. ಪ್ರಧಾನಿ ಕಚೇರಿಯಿಂದ ಮಂಗಳೂರು ಕಾರ್ಯಕ್ರಮದ ಪಟ್ಟಿ ಇನ್ನು ಅಧಿಕೃತವಾಗಬೇಕಿದ್ದು, ಈ ನಡುವೆ ಜಿಲ್ಲಾಡಳಿತ ಪ್ರಧಾನಿ ಕಾರ್ಯಕ್ರಮಕ್ಕೆ ಸಕಲ ತಯಾರಿಯನ್ನು ನಡೆಸುತ್ತಿದೆ.
ಸೆಪ್ಟೆಂಬರ್ ಎರಡರಂದು ಪ್ರಧಾನಿ ನರೇಂದ್ರ ಮೋದಿ ಕೊಚ್ಚಿಗೆ ಆಗಮಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಕೊಚ್ಚಿಯ ಕಾರ್ಯಕ್ರಮ ಮುಗಿಸಿ ಸಂಜೆ 4.30ರ ವೇಳೆಗೆ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಆದರೆ ಪ್ರಧಾನಿ ಕಚೇರಿಯಿಂದ ಮಂಗಳೂರು ಕಾರ್ಯಕ್ರಮದ ಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಆದರೂ ಸಹ ದಕ್ಷಿಣಕನ್ನಡ ಜಿಲ್ಲಾಡಳಿತ ಪ್ರಧಾನಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.
ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ನೇತ್ರತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಎಸ್.ಪಿ ಸೇರಿದಂತೆ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾದ್ದಾರೆ. ನಗರದ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಲಾಗಿದ್ದು, ಈ ಸರಕಾರಿ ಕಾರ್ಯಕ್ರಮಕ್ಕೆ ಕೇಂದ್ರ, ರಾಜ್ಯದ ಯೋಜನೆಗಳ ಫಲಾನುಭವಿಗಳನ್ನು ಕರೆತರುವಂತೆ ಸೂಚಿಸಲಾಯಿತು.

ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ಮಂಗಳೂರು ನಗರ ಹೊರವಲಯದ ಬಂಗ್ರಕೂಳೂರಿನಲ್ಲಿ ಈ ಸಮಾವೇಶ ನಡೆಯಲಿದ್ದು, ಕೇಂದ್ರ ರಾಜ್ಯ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರುವ ನೀರಿಕ್ಷೆಯಿದೆ. ಈ ವೇದಿಕೆಯಿಂದಲೇ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಸುಮಾರು 3,600 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿದ್ದತಾ ಕಾರ್ಯ ನಡೆಯುತ್ತಿದೆ.
ಕಾರ್ಮಿಕರು ಮೈದಾನದ ಹುಲ್ಲು ತೆಗೆದು ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಜೆ.ಸಿ.ಬಿ, ಹಿಟಾಚಿ ಯಂತ್ರ ಬಳಸಿ ಮೈದಾನ ಸಮತಟ್ಟುಗೊಳಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ. ಮೈದಾನದ ಒಳಗೆ ಹೆಲಿಪ್ಯಾಡ್ ನಿರ್ಮಿಸುವುದಕ್ಕೂ ತಯಾರಿ ಮಾಡಲಾಗುತ್ತಿದ್ದು, ಮೋದಿ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿಯನ್ನು ವೇಗದಿಂದ ನಡೆಸಲಾಗುತ್ತಿದೆ. ಮೋದಿ ಕಾರ್ಯಕ್ರಮದ ಕುರಿತಂತೆ ಈವರೆಗೂ ಎಸ್.ಪಿ.ಜಿ ಅಧಿಕಾರಿ ಸಿಬ್ಬಂದಿಗಳು ಜಿಲ್ಲೆಗೆ ಆಗಮಿಸಿಲ್ಲ. ಹೀಗಾಗಿ ಪ್ರಧಾನಿ ಕಚೇರಿಯಿಂದ ಅಧಿಕೃತವಾದ ಬಳಿಕ ಕಾರ್ಯಕ್ರಮವೂ ಅಧಿಕೃತವಾಗಲಿದೆ.
ಇನ್ನು ಕಾರ್ಯಕ್ರಮ ದ ಬಗ್ಗೆ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ದ.ಕ. ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸರಿ ಸುಮಾರು 10 ಲಕ್ಷ ಫಲಾನುಭವಿಗಳಿದ್ದಾರೆ. ಪ್ರಧಾನಿಯವರ ಮಂಗಳೂರು ಭೇಟಿಯ ದಿನ ಆ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹಾಜರಿರುವಂತೆ ವೈಯುಕ್ತಿಕ ಆಮಂತ್ರಣ ಪತ್ರಿಕೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಫಲಾನುಭವಿಗಳ ಪಟ್ಟಿಯನ್ನು ಶೀಘ್ರದಲ್ಲೇ ತಯಾರಿಸಲಾಗುತ್ತದೆ. ಆ ಬಳಿಕ ಯಾವ ತಾಲೂಕುಗಳಿಂದ ಎಷ್ಟು ಫಲಾನುಭವಿಗಳು ಬರಬೇಕೆಂದು ಆ ಬಳಿಕ ನಿಶ್ಚಯಿಸಲಾಗುತ್ತದೆ. ಲಕ್ಷಕ್ಕೂ ಕಡಿಮೆಯಿಲ್ಲದಂತೆ ದೊಡ್ಡ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸೆಪ್ಟೆಂಬರ್ 2ರ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಈಗಾಗಲೇ ಮಾಡಲಾಗಿದೆ. ಸರಕಾರಿ ಕಾರ್ಯಕ್ರಮದಯ ಭಾಗವಹಿಸಲು ಇದೇ ಮೊದಲ ಬಾರಿಗೆ ಪ್ರಧಾನಿಯವರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಸಂಸದರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಾರ್ಯಕರ್ತರೇ ಬಹಿರಂಗವಾಗಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮೇಲೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಬೊಮ್ಮಾಯಿ ಬಂದಾಗಲೂ ಕಾರ್ಯಕರ್ತರು ಅವರ ವಿರುದ್ಧವೇ ಘೋಷಣೆ ಕೂಗಿದ್ದರು. ಆ ಬಳಿಕದ ಬಿಜೆಪಿ ಆಂತರಿಕ ಸಮೀಕ್ಷೆಯಲ್ಲೂ ಬಿಜೆಪಿಗೆ ಸೋಲುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಆಗಮಿಸುತ್ತಿರುವುದು ರಾಜ್ಯ ಬಿಜೆಪಿಗೆ ಬೂಸ್ಟ್ ನೀಡುವಂತಿದೆ.












Click it and Unblock the Notifications