ಮೋದಿ ಆಯುಷ್ಯ, ಶ್ರೇಯೋಭಿವೃದ್ಧಿಗೆ ಕರಾವಳಿ ದೇಗುಲಗಳಲ್ಲಿ ವಿಶೇಷ ಪೂಜೆ
ಮಂಗಳೂರು, ಜೂನ್ 22 : ಕರಾವಳಿಯ ಈ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ. ಮೋದಿ ಅವರ ಆಯುಷ್ಯ ವೃದ್ಧಿಗಾಗಿ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಎಂದು ಪ್ರಾರ್ಥನೆಗಳು ನಡೆಯುತ್ತಿವೆ.
ನಗರದ ವಿ.ಟಿ.ರಸ್ತೆಯಲ್ಲಿರುವ ವಿಠೋಬಾ ರುಕುಮಾಯಿ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಪೂಜಾ ಕಾರ್ಯಗಳು ನಡೆಯುತ್ತಿವೆ. ನರೇಂದ್ರ ಮೋದಿ ಜನ್ಮನಕ್ಷತ್ರ ಅನೂರಾಧ ನಕ್ಷತ್ರವಾಗಿದ್ದು, ಪ್ರತಿ ತಿಂಗಳು ಈ ನಕ್ಷತ್ರದ ದಿನದಂದು ದೇವಾಲಯದಲ್ಲಿ ಪ್ರಧಾನಿ ಮೋದಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಕಳೆದ ಮೇ 29ರಂದು ಈ ವಿಠೋಬಾ ರುಕುಮಾಯಿ ದೇವಾಲಯದಲ್ಲಿ ಮೋದಿ ಅವರಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಲಾಗಿದ್ದು, ಪೂಜೆಯ ಬಳಿಕ ಫಲಾಹಾರ ಪ್ರಸಾದ ಕೂಡ ವಿತರಿಸಲಾಗಿದೆ. ಜೂನ್ 25ರಂದು ರಾತ್ರಿ 8 ಗಂಟೆಗೆ ಮೋದಿ ಅವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜೆ ನಡೆಯಲಿದೆ.

ಇದೇ ರೀತಿ ಉಡುಪಿಯ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿಯೂ ಪ್ರಧಾನಿ ಹೆಸರಿನಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಜೂನ್ 25ರಂದು ಶ್ರೀ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಅವರ ಹೆಸರಿನಲ್ಲಿ ಅನ್ನಸಂತರ್ಪಣೆ ಸೇವೆ ಬುಕ್ ಮಾಡಲಾಗಿದೆ. ಕಟಪಾಡಿಯ ಮೋದಿ ಆಭಿಮಾನಿಗಳು ಮತ್ತು ಸಂಘಪರಿವಾರದ ಕಾರ್ಯಕರ್ತರು ಈ ಸೇವೆ ಬುಕ್ ಮಾಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ದೆಹಲಿ ಕ್ರೈಸ್ತ ಧರ್ಮ ಪ್ರಾಂತ್ಯದ ಚರ್ಚ್ ಗಳಲ್ಲಿ ಮುಂದಿನ 2019 ಚುನಾವಣೆವರೆಗೂ ವಿಶೇಷ ಪ್ರಾರ್ಥನೆ ಹಾಗೂ ವಾರದಲ್ಲಿ ಒಂದು ದಿನ ಉಪವಾಸ ವ್ರತ ನಡೆಸಲು ಫರ್ಮಾನು ಹೊರಡಿಸಲಾಗಿತ್ತು. ಆ ಬಳಿಕ ದೇವಾಲಯಗಳಲ್ಲಿ ಮೋದಿ ಅವರಿಗಾಗಿ ಈ ಪೂಜೆ ಆಭಿಯಾನ ಆರಂಭವಾಗಿದೆ.












Click it and Unblock the Notifications