ಜೈಲಿನಲ್ಲಿದ್ದೇ ಚುನಾವಣಾ ತಂತ್ರ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆ ನಾಮಪತ್ರ ಸಲ್ಲಿಕೆ
ಮಂಗಳೂರು, ಏಪ್ರಿಲ್ 19: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ಎಸ್ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಪುತ್ತೂರು ವಿಧಾಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ಎಸ್ಡಿಪಿಐ ಘಟಕ ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪದಲ್ಲಿ ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಶಾಫಿ ಬೆಳ್ಳಾರೆ ತಮ್ಮ ಪಕ್ಷದ ಏಜೆಂಟ್ಗಳ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಎಸ್.ಡಿ.ಪಿ.ಐ ಕಾರ್ಯಕರ್ತರು ಶಾಫಿ ಬೆಳ್ಳಾರೆ ಪರ ಘೋಷಣೆಗಳನ್ನು ಕೂಗಿದ್ದಾರೆ.

ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಮೂವರು ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದರು. ಈ ಪ್ರಕರಣವನ್ನು ರಾಜ್ಯ ಸರಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ ಹಿನ್ನಲೆಯಲ್ಲಿ ತನಿಖಾ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದು, ಶಾಫಿ ಬೆಳ್ಳಾರೆ ಕೂಡಾ ಈ ಬಂಧಿತರಲ್ಲಿ ಓರ್ವ ಆರೋಪಿಯಾಗಿದ್ದಾರೆ.
ಸದ್ಯ ಜೈಲು ಬಂಧಿಯಾಗಿರುವ ಶಾಫಿ ಬೆಳ್ಳಾರೆ ಜೈಲಿನಿಂದಲೇ ಈ ಭಾರಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಎಸ್.ಡಿ.ಪಿ.ಐಗೆ ಸಿಗುವ ಮತಗಳಿಂದ ಶಾಫಿ ಬೆಳ್ಳಾರೆಗೆ ಜನ ಬೆಂಬಲ ಇದೆ ಎನ್ನುವುದನ್ನು ತಿಳಿಸಲು ಪಡಿಸಲು ಈ ತಂತ್ರ ರೂಪಿಸಿದೆ.
ಎಸ್.ಡಿ.ಪಿ.ಐ ಕ್ಷೇತ್ರ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಸಾಗರ್ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎಂ ಸಿದ್ಧೀಕ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಉಪ್ಪಿನಂಗಡಿ,ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟೀನ್,ಪುತ್ತೂರು ಕ್ಷೇತ್ರ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಅವರು ಚುನಾವಣಾ ಅಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರ. ಶಾಫಿ ಬೆಳ್ಳಾರೆಯವರ ನಾಮಪತ್ರದ ಸೂಚಕ ಹಾಗೂ ಎಜೆಂಟ್ ಆಗಿರುವ ಅಬ್ದುಲ್ ರಹೆಮಾನ್ ಶಾಫಿ ಬೆಳ್ಳಾರೆಯ ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್, ಶಾಫಿ ಬೆಳ್ಳಾರೆಯ ಹೋರಾಟ ದ ಧ್ವನಿಯನ್ನು ಅಡಗಿಸಲು ಸರ್ಕಾರ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿ ಜೈಲಿಗೆ ಕಳುಹಿಸಿದೆ. ಆದರೆ ಮುಂದೊಂದು ದಿನ ಸತ್ಯ ಎಲ್ಲವೂ ಬೆಳಕಿಗೆ ಬರಲಿದೆ. ಶಾಫಿ ಬೆಳ್ಳಾರೆಯವರ ಮೇಲಿನ ಸುಳ್ಳು ಪ್ರಕರಣಗಳಿಗೆ ಜನ ಆಕ್ರೋಶಿತಗೊಂಡಿದ್ದಾರೆ. ಜನ ಈ ಬಾರಿ ಮತ ಚಲಾಯಿಸುವ ಮೂಲಕ ಸರ್ಕಾರಕ್ಕೆ ಉತ್ತರ ನೀಡಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ನ ಅಭ್ಯರ್ಥಿ ಗಳೆಲ್ಲರೂ ಸಂಘ ಪರಿವಾರ ಹಿನ್ನಲೆಯಿಂದ ಬಂದವರು ಆಗಿದ್ದಾರೆ. ಈ ಎರಡು ಪಕ್ಷಗಳ ಜಂಡಾಗಳು ಬೇರೆಯಾಗಿದ್ದರೂ ಅಜೆಂಡಾ ಒಂದೇ ಎಂದು ಹೇಳಿದ್ದಾರೆ.












Click it and Unblock the Notifications