ದತ್ತ ಪೀಠವನ್ನು ಹಿಂದೂಗಳಿಗೆ ಕೊಡಲಿ : ಮುತಾಲಿಕ್
ಮಂಗಳೂರು, ಸೆ.14 : 'ದತ್ತ ಪೀಠ ಪ್ರಕರಣವನ್ನು ರಾಜ್ಯವೇ ಇತ್ಯರ್ಥಗೊಳಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ದತ್ತ ಪೀಠವಿರುವ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಲಿ' ಎಂದು ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ದತ್ತಪೀಠವನ್ನು ಬಾಬಾ ಬುಡನ್ಗಿರಿಯಲ್ಲಿರುವ ದರ್ಗಾಕ್ಕೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅವರಲ್ಲಿ ಜಾಗವಿದ್ದರೂ ದತ್ತಪೀಠದ ಜಾಗ ಕೇಳುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ ಯಾವುದೇ ನಂಬಿಕೆ ಇಲ್ಲ' ಎಂದರು. ['ನೀವೇನು ಪೊಲೀಸರಾ?' ಶ್ರೀರಾಮ ಸೇನೆಗೆ ಸುಪ್ರೀಂ ಪ್ರಶ್ನೆ]

'ಕರ್ನಾಟಕ ಸರ್ಕಾರ ನಿಜವಾಗಿಯೂ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಶಾಂತಿ, ಪ್ರೀತಿ ಬಯಸುವುದಾದರೆ ನಾಗೇನಹಳ್ಳಿಯಲ್ಲಿ ಸರ್ವೇ ನಂಬರ್ 52ರಲ್ಲಿರುವ ಜಾಗವನ್ನು ಮುಸ್ಲಿಂ ಸಮುದಾಯಕ್ಕೆ ಹಾಗೂ ದತ್ತ ಪೀಠವನ್ನು ಹಿಂದೂಗಳಿಗೆ ಕೊಡಲಿ' ಎಂದು ಮುತಾಲಿಕ್ ತಿಳಿಸಿದರು.
'ನ್ಯಾಯ ಹಿಂದೂಗಳ ಪರವಾಗಿ ಬರುವಂತೆ ಸರ್ಕಾರದ ಮೇಲೆ ಒತ್ತಡ ತರಲು ದತ್ತಪೀಠದಲ್ಲಿ ಸುಮಾರು 5,000 ಜನರು ದತ್ತಮಾಲಾಧಾರಿಗಳಾಗಿ ಅಭಿಯಾನ ನಡೆಸಲಿದ್ದಾರೆ. ಈ ಸಂದರ್ಭ ಸುಮಾರು 10ರಿಂದ 15 ನಾಗಾಸಾಧುಗಳು ಹಾಗೂ ಉತ್ತರ ಭಾರತದ ಸುಮಾರು 4 ರಿಂದ 5 ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ' ಎಂದರು.
ಶ್ರೀರಾಮ ಸೇನೆ ಬೆಂಬಲ : 'ಗೋ ಹತ್ಯೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವೇ ಆದೇಶ ಹೊರಡಿಸಲಿ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಯನ್ನು ಶ್ರೀರಾಮ ಸೇನೆ ಬೆಂಬಲಿಸುತ್ತದೆ. ಸರ್ಕಾರಕ್ಕೆ ನಿಜವಾಗಿಯೂ ಗೋವಿನ ಬಗ್ಗೆ ಕಾಳಜಿ ಇದ್ದಲ್ಲಿ ಗೋ ಮಾಂಸ ರಫ್ತಿಗೆ ತಡೆ ನೀಡಲಿ' ಎಂದು ಮುತಾಲಿಕ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪ್ರಮುಖರಾದ ಪ್ರವೀಣ್ ವಾಲ್ಕೆ, ಮಹೇಶ್, ಗಂಗಾಧರ ಕುಲಕರ್ಣಿ, ಜೀವನ್, ಆನಂದ್ ಶೆಟ್ಟಿ, ಕುಮಾರ್ ಮಾಲೆಮಾರ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications