ಕಲ್ಲಡ್ಕ ಶಾಲೆಯಲ್ಲಿ ಮತೀಯವಾದ ಬೋಧನೆ : ರಮಾನಾಥ್ ರೈ ವಾಗ್ದಾಳಿ
ಮಂಗಳೂರು, ಆಗಸ್ಟ್ 14: "ಕಲ್ಲಡ್ಕದ ಶಾಲೆಗಳಲ್ಲಿ ಮಕ್ಕಳಿಗೆ ಮತೀಯ ವಾದವನ್ನು ಬೋಧಿಸಲಾಗುತ್ತಿದೆ. ಈ ಶಾಲೆಗಳು ಮತೀಯ ಮನಸ್ಸುಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿವೆ," ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಕಿಡಿಕಾರಿದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಊಟದ ವಿಚಾರದಲ್ಲಿ ಮಕ್ಕಳ ಕೈಯಲ್ಲಿ ತಟ್ಟೆ ನೀಡಿ ರಾಜಕೀಯ ಮಾಡಲಾಗುತ್ತಿದೆ," ಎಂದು ಅವರು ಆರೋಪಿಸಿದರು .

"ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದ ಧಾರ್ಮಿಕ ಪರಿಷತ್ ಕಾನೂನಿನ ಪ್ರಕಾರವಾಗಿ ಕಲ್ಲಡ್ಕದ ಶಾಲೆಗಳಿಗೆ ನೆರವನ್ನು ಸ್ಥಗಿತಗೊಳಿಸಿದೆ," ಎಂದು ರಮಾನಾಥ ರೈ ಸರ್ಕಾರದ ಕ್ರಮವನ್ನು ಸಮರ್ಥಿಸಿದರು.
"ದೇವಾಲಯದಿಂದ ಬರುತ್ತಿರುವುದು ಅನುದಾನವಲ್ಲ. ಅದು ಕೇವಲ ನೆರವು ಮಾತ್ರ. ಉಭಯ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಲವಾರು ಶಾಲೆಗಳಿವೆ. ಅವುಗಳಿಗೆ ನೆರವು ನೀಡಲು ಕಾನೂನಿನಲ್ಲಿ ಅವಕಾಶವಿದೆ," ಎಂದು ಅವರು ಹೇಳಿದರು.
"ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಶಾಲೆಯ ಮಕ್ಕಳ ಊಟಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ಶಾಲೆಗಳಿಗಾಗಿ ಹಾಲಿವುಡ್ ಬಾಲಿವುಡ್ ನಟರಿಂದ ಜನಾರ್ದನ ರೆಡ್ಡಿ ಸೇರಿದಂತೆ ಹಲವಾರು ಬಂಡವಾಳಶಾಹಿಗಳಿಂದ ದೇಣಿಗೆ ಪಡೆಯುತ್ತಿದ್ದಾರೆ," ಎಂದು ರೈ ಹೇಳಿದರು .
ದೇವಾಲಯದಿಂದ ಈವರೆಗೆ ಬಂದ ಹಣ ದುರುಪಯೋಗವಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ ಅವರು, "ಕಲ್ಲಡ್ಕ ಪ್ರಭಾಕರ ಭಟ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಧಾರ್ಮಿಕ ವಿಚಾರ ಎರಡನೆಯದ್ದು," ಎಂದು ಅವರು ಆರೋಪಿಸಿದರು .
"ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಮೀಪದಲ್ಲಿ ಸರಕಾರಿ ಶಾಲೆಯಿದೆ. ಪೋಷಕರು ತಮ್ಮ ಮಕ್ಕಳನ್ನು ಅಲ್ಲಿ ಸೇರಿಸಲಿ. ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಯೋಜನೆಯಂತೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ,ಶೂ ,ಹಾಲು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ," ಎಂದು ರಮಾನಾಥ ರೈ ತಿಳಿಸಿದರು.
"ತಮ್ಮ ಶಾಲೆಯ ಮಕ್ಕಳಿಗೆ ಊಟ ನೀಡುವ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ. ನಾನೇ ಸರ್ಕಾರದಲ್ಲಿ ಮಾತನಾಡಿ ಊಟ ಕೊಡಿಸುತ್ತೇನೆ," ಎಂದೂ ಸಚಿವರು ತಿಳಿಸಿದರು.
"ಶಾಲೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಣ ಸಂಗ್ರಹದ ಆಂದೋಲನ ನಡೆಸಲಾಗುತ್ತಿದೆ. ಇದೊಂದು ಹಣ ಮಾಡುವ ದಂಧೆ. ಈ ಮೋಸಕ್ಕೆ ಯಾರು ಬಲಿಯಾಗಬಾರದು," ಎಂಬುದಾಗಿ ರೈ ಕರೆ ನೀಡಿದರು.
"ಬಡವರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮುಖ್ಯಮಂತ್ರಿಯವರು ಮಾಡಿಲ್ಲ. ಈ ಕೆಲಸವನ್ನು ಕೇವಲ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ್ದಾರೆ. ಬಡವರ ನೋವು ಏನೆಂದು ಮುಖ್ಯಮಂತ್ರಿಯವರಿಗೆ ಗೊತ್ತು. ಕಲ್ಲಡ್ಕ ಪ್ರಭಾಕರ ಭಟ್ರಿಗೆ ಬಡವರ ನೋವು ಏನೆಂದು ಗೊತ್ತಿಲ್ಲ. ಮಕ್ಕಳ ಅನ್ನಕ್ಕೆ ಕನ್ನ ಹಾಕಿರುವುದು ರಮಾನಾಥ್ ರೈ ಅಲ್ಲ. ಮಕ್ಕಳ ಅನ್ನವನ್ನು ಕುಸಿದಿರುವುದು ಕಲ್ಲಡ್ಕ ಪ್ರಭಾಕರ ಭಟ್," ಎಂದು ಅವರು ಕಿಡಿಕಾರಿದರು .
ಕಲ್ಲಡ್ಕ ಪ್ರಭಾಕರ ಭಟ್ ರಿಗೆ ಸೇರಿದ ಶಾಲೆಗಳು












Click it and Unblock the Notifications