ರಾಜಕೀಯ ಸಿನಿಮಾ ಹಾಗಲ್ಲ, ಅದು ರಿಯಾಲಿಟಿ ಶೋ: ಜಯಮಾಲಾ
ಮಂಗಳೂರು, ಜುಲೈ 23: ರಾಜಕೀಯ ಎನ್ನುವುದು ನಟನೆ ಅಲ್ಲ. ಅದೇನಿದ್ದರೂ ರಿಯಾಲಿಟಿ ಶೋ ಮಾತ್ರ. ಸರಕಾರದಲ್ಲಿ ನನಗೆ ವಹಿಸಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವುದಷ್ಟೇ ನನ್ನ ಉದ್ದೇಶ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ತಾರತಮ್ಯ ಹೋಗಲಾಡಿಸಬೇಕು ಎನ್ನುವುದು ನನ್ನ ಕನಸು ಎಂದು ಅವರು ಆಭಿಪ್ರಾಯ ಪಟ್ಟರು.
ನಟಿ ಜಯಮಾಲಾಗೆ ಒಲಿದ 'ಮಂತ್ರಿ' ಅದೃಷ್ಟ: ಬೆಲ್ಲ ಸವಿದು ಸಂಭ್ರಮ
ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ರೂಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಸಾಂಸ್ಕೃತಿಕ ನೀತಿ ರೂಪಿಸುವ ಬಗ್ಗೆ ಪರ- ವಿರೋಧ ಅಭಿಪ್ರಾಯಗಳಿವೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಾಂಸ್ಕೃತಿಕ ನೀತಿ ರೂಪಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನಕ್ಕೆ ಬರುವ ಅಕಾಡೆಮಿಗಳಿಗೆ ಈವರೆಗೆ 1 ಕೋಟಿ ರುಪಾಯಿ ಅನುದಾನ ನೀಡಲಾಗುತ್ತಿತ್ತು. ಇದೀಗ ಎಲ್ಲ ಅಕಾಡೆಮಿಗಳ ಅನುದಾನವನ್ನು 10 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಮುಂದೆ ಅಕಾಡೆಮಿಗಳ ಕೆಲಸಗಳ ದಾಖಲು ಮಾಡುವ ಕಾರ್ಯಕ್ಕೂ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿಗಳು ಕಳೆದ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಈ ಸಣ್ಣ ನೋವಿಗೆ ಚಿಂತೆ ಮಾಡಬೇಕಿಲ್ಲ. ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಪಕ್ಷ ತಯಾರಾಗಿದ್ದು, ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಬರಿ ಮಲೆಗೆ ಮಹಿಳೆಯರ ಪ್ರವೇಶದ ಕುರಿತು ಮಾತನಾಡಿದ ಅವರು, ಜಗತ್ತಿನಲ್ಲಿ ಗಂಡಿಗೊಂದು, ಹೆಣ್ಣಿಗೊಂದು ಪ್ರತ್ಯೇಕ ದೇವರು ಸೃಷ್ಟಿಯಾಗಿಲ್ಲ. ಸಂಪ್ರದಾಯದ ಹೆಸರಿನಲ್ಲಿ ದೇವಸ್ಥಾನಕ್ಕೆ ಹೆಣ್ಣುಮಕ್ಕಳು ಹೋಗುವುದನ್ನು ತಡೆದರೆ ದೇಶ ನರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.