ದಕ್ಷಿಣ ಕನ್ನಡದ ಅಖಾಡ ಹೇಗಿದೆ? ನಳಿನ್, ಮಿಥುನ್ ರೈ ಪ್ಲಸ್-ಮೈನಸ್ ಏನು?
ಮಂಗಳೂರು, ಏಪ್ರಿಲ್ 16:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
ಚುನಾವಣೆ ಬಂತೆಂದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏನಿದ್ದರೂ ಅದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸಜ್ಜಾಗಿದೆ.
ಈ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಗೆಲ್ಲುತ್ತಿದೆ. ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಬಾರಿಯೂ ಸಂಸದ ನಳಿನ್ ಕುಮಾರ್ ಕಟೀಲ್ ಕಣಕ್ಕಿಳಿಸಿದ ಬಿಜೆಪಿ ಮೇರಾ ಪರಿವಾರ ಬಿಜೆಪಿ ಪರಿವಾರ, ಕಮಲ ಜ್ಯೋತಿ ಬೈಕ್ ಯಾತ್ರೆಯ ಮೂಲಕ ಹವಾ ಸೃಷ್ಟಿಸಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬಿಜೆಪಿಯಲ್ಲಿ ಆಂತರಿಕವಾಗಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನವಿದ್ದರೂ ಇತ್ತೀಚೆಗೆ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿ ಅಬ್ಬರಿಸಿ ತೆರಳಿದ್ದಾರೆ. ಮೋದಿ ತೆರಳಿದ ಬಳಿಕ ಬಿಜೆಪಿ ಕಾರ್ಯಕರ್ತರಲ್ಲಿ ಗೆಲುವಿನ ಬಗ್ಗೆ ರಣೋತ್ಸಾಹ ಹೆಚ್ಚಾಗಿದೆ.
ಅದಲ್ಲದೇ ಮೋದಿ ಅಲೆ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಬಿಜೆಪಿ ಜತೆ ಸಂಘ ಪರಿವಾರ ಕಾರ್ಯಪಡೆಯ ಶ್ರಮ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಗೆಲುವಿಗೆ ಸಕಾರಾತ್ಮಕವಾಗಿವೆ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಈ ಬಾರಿ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಿಥುನ್ ರೈ ಪರ ಕ್ಷೇತ್ರದಲ್ಲಿ ಯುವಕರ ಒಲವು ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜಯದ ದಡ ಸೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
ಮಿಥುನ್ ರೈ ಸುಶಿಕ್ಷಿತ, ಕಾರ್ಯಕ್ರಮಗಳ ಸಂಘಟಕ ಎಂದೇ ಕಾಂಗ್ರೆಸ್ ಜನರ ಮುಂದೆ ಹೋಗುತ್ತಿದೆ. ಪಕ್ಷದ ಹಿರಿಯ ಮುಖಂಡರಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ವಿಮರ್ಶಿಸಲಾಗುತ್ತಿದೆ. ಈ ನಡುವೆ ಅಭ್ಯರ್ಥಿ ಘೋಷಣೆ ವಿಳಂಬ ಪ್ರಚಾರಕ್ಕೆ ಕಡಿಮೆ ಸಮಯ ಸಿಕ್ಕಿದ್ದು, ಸ್ವಲ್ಪ ಹಿನ್ನೆಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಿಲ್ಲವ ಮತದಾರ ಮತ ನಿರ್ಣಾಯಕ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಕಂಡುಬರುವುದಿಲ್ಲ. ಈ ಹಿಂದೆಯೂ ಇಲ್ಲಿ ಜಾತಿ ಲೆಕ್ಕಾಚಾರದಿಂದ ಸೋಲು-ಗೆಲುವು ನಿರ್ಧಾರ ಆಗಿಲ್ಲ. ಅತ್ಯಂತ ಕಡಿಮೆ ಜನಸಂಖ್ಯೆಯ ಜೈನ ಸಮುದಾಯದ ವಿ ಧನಂಜಯ ಕುಮಾರ್ ಬಿಜೆಪಿಯಿಂದ ನಿರಂತರ ನಾಲ್ಕು ಬಾರಿ ಗೆದ್ದ ಇತಿಹಾಸ ನಿರ್ಮಿಸಿದ್ದಾರೆ. ಕ್ಷೇತ್ರದಲ್ಲಿ ಬಿಲ್ಲವ ಮತದಾರರೂ ನಿರ್ಣಾಯಕ. ಅತಿಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವರಿದ್ದಾರೆ. ಹಿಂದೆಲ್ಲಾ ಈ ಮತಗಳು ಕಾಂಗ್ರೆಸ್ ಗೆ ಬೀಳುತ್ತಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಸಂಘ ಪರಿವಾರ ಬೇರೂರಿ ಬಿಲ್ಲವರ ಮತ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಶತಾಯಗತಾಯ ಪ್ರಯತ್ನ ನಡೆಯುತ್ತಿದೆ
ಈ ಬಾರಿ ಬಿಲ್ಲವರ ಮತಗಳನ್ನು ಬಾಚಿಕೊಳ್ಳಲು ಎರಡೂ ಪಕ್ಷಗಳಿಂದ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಂ, ಬಂಟ ಸಮುದಾಯದ ಓಲೈಕೆಗೂ ಕಸರತ್ತುಗಳು ನಡೆಯುತ್ತಿವೆ. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ, ಬಂಟ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಈ ಹಿನ್ನೆಲೆಯಲ್ಲಿ ಮತಗಳ ವಿಭಜನೆ ಆಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.2014 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಬಿ ಜನಾರ್ದನ ಪೂಜಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 1. 40 ಲಕ್ಷ ಮತಗಳ ಆಂತರದಿಂದ ಗೆದ್ದಿದ್ದರು. ಮೋದಿ ಅಲೆ ಹಿಂದೂ ಸಮಾಜೋತ್ಸವ ಬಿಜೆಪಿಗೆ ವರವಾಗಿತ್ತು.ಈಗಲೂ ಮೋದಿ ಅಲೆ, ಮೈ ಬೀ ಚೌಕಿದಾರ್ ಅಭಿಯಾನ, ಚೌಕಿದಾರ್ ವೇಷಭೂಷ ಬಿಜೆಪಿ ಪ್ರಚಾರದ ಪ್ರಮುಖವಾಗಿ ಆಯ್ದು ಕೊಂಡಿದೆ.

ಅಲ್ಪಸಂಖ್ಯಾತರ ಒಂದು ವರ್ಗವನ್ನು ಕೆರಳಿಸಿದೆ
ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ಬಿಜೆಪಿಯ ಈ ಹಿಂದಿನ ತಂತ್ರಗಾರಿಕೆಯನ್ನೇ ಕಾಂಗ್ರೆಸ್ ಕೂಡ ಹಿಡಿದಿದೆ.ತನ್ನ ಎಂದಿನ ಸಾಂಪ್ರದಾಯಿಕ ಪ್ರಚಾರ ಬದಲಿಸಿದೆ. ಹಿಂದುತ್ವದ ಆಧಾರದ ಮೇಲೆ ಮತ ಯಾಚಿಸುತ್ತಿದ್ದು, ಕೇಸರಿ ಶಾಲನ್ನು ಕಾಂಗ್ರೆಸ್ ಈ ಚುನಾವಣೆಯಲ್ಲಿ ಬಳಕೆಗೆ ತಂದಿದೆ. ಕಾಂಗ್ರೆಸ್ ತನ್ನ ಪ್ರಚಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ದೇವಸ್ಥಾನ ಪ್ರಬಲ ಜಾತಿ ಮುಖಂಡರ ಭೇಟಿಗೆ ಹೆಚ್ಚಿನ ಆದ್ಯತೆ ಕೊಡಿದೆ. ಇದು ಮತಗಳಾಗಿ ಪರಿವರ್ತನೆ ಆಗಲಿದೆ ಎಂದು ಕಾಂಗ್ರೆಸ್ ನಂಬಿಕೆ . ಕಾಂಗ್ರೆಸ್ ನಲ್ಲಾಗುತ್ತಿರುವ ಈ ಬದಲಾವಣೆ ಕಾಂಗ್ರೆಸ್ ನ ಮತ ಬ್ಯಾಂಕ್ ಆಗಿರುವ ಅಲ್ಪ ಸಂಖ್ಯಾತರ ಒಂದು ವರ್ಗವನ್ನು ಕೆರಳಿಸಿದೆ ಎಂದು ಹೇಳಲಾಗುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಂತ್ರಗಾರಿಕೆಗೆ ಏಪ್ರಿಲ್ 18 ರಂದು ಮತದಾರ ಪ್ರಭು ಯಾವ ರೀತಿ ಸ್ಪಂದಿಸಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.











Click it and Unblock the Notifications