ವಿಮಾನ ರನ್ ವೇಯಿಂದ ಜಾರಿದ ಪ್ರಕರಣ; ಪೈಲೆಟ್ ಲೈಸೆನ್ಸ್ ರದ್ದು
ಮಂಗಳೂರು, ಜುಲೈ 24: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ವಿಮಾನ ಜಾರಿದ ಪ್ರಕರಣವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ ಎಸಗಿದ ವಿಮಾನದ ಪೈಲೆಟ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ.
ಇದೇ ಜೂನ್ 30ರಂದು ಸಂಜೆ ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ರನ್ ವೇಯಿಂದ ಜಾರಿ ಚರಂಡಿ ದಾಟಿ ನಿಂತಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 183 ಪ್ರಯಾಣಿಕರು ಘೋರ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು.
ಆ ಸಂದರ್ಭದಲ್ಲಿ ವಿಮಾನದ ಪೈಲಟ್ ಕ್ಯಾಪ್ಟನ್ ಆಗಿದ್ದ ಪ್ರವೀಣ್, ಲ್ಯಾಂಡಿಂಗ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೇ ನಿರ್ಲಕ್ಷ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಪೈಲಟ್ ಕ್ಯಾಪ್ಟನ್ ಆಗಿದ್ದ ಪ್ರವೀಣ್ ಅವರ ಪರವಾನಗಿಯನ್ನು ಒಂದು ವರ್ಷದವರೆಗೆ ಅಮಾನತು ಮಾಡಿ ಕ್ರಮ ಕೈಗೊಂಡಿದೆ. ವಿಮಾನ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಅತೀ ವೇಗವನ್ನು ಹೊಂದಿತ್ತು ಹಾಗೂ ವಿಳಂಬವಾಗಿ ನೆಲಕ್ಕೆ ಮುಟ್ಟಿತ್ತು. ಹೀಗಾಗಿ ವಿಮಾನಕ್ಕೆ ಹಾನಿಯಾಗಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications