ಫೋನ್ ಕದ್ದಾಲಿಕೆ ಬಗ್ಗೆ ತನಿಖೆಯಾಗಲಿ- ಶಾಸಕ ಕಾಮತ್
ಮಂಗಳೂರು ಆಗಸ್ಟ್ 16: "ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಬರುತ್ತಿವೆ. ಕಳೆದ ದೋಸ್ತಿ ಸರಕಾರದ ಅತೀ ದೊಡ್ಡ ಸಾಧನೆ ಎಂದರೆ ಫೋನ್ ಕದ್ದಾಲಿಕೆ ಮಾಡಿರುವುದು ಎಂಬುದು ಸ್ಪಷ್ಟವಾಗಿದೆ" ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಒಂದು ವರ್ಷ ಎರಡು ತಿಂಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ಮಾಡಿದ್ದು ಇಷ್ಟೇ ಎನ್ನುವುದು ಗೊತ್ತಾಗುತ್ತಿದೆ" ಎಂದು ವ್ಯಂಗ್ಯವಾಡಿದರು.
"ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬಳಸಿ ಕುಮಾರಸ್ವಾಮಿಯವರು ಮಾಡಿದ್ದರೆನ್ನಲಾದ ಫೋನ್ ಕದ್ದಾಲಿಕೆಯ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಆದರೆ ನೈಜ ವಿಷಯ ಬೆಳಕಿಗೆ ಬರುತ್ತದೆ. ಆಗ ತಪ್ಪಿತಸ್ಥರು ಯಾರು ಎಂದು ಗೊತ್ತಾಗುವುದರಿಂದ ಅವರಿಗೆ ಸೂಕ್ತ ಶಿಕ್ಷೆ ಕೂಡ ಕಾನೂನಿನ ಅಡಿಯಲ್ಲಿ ಸಿಗಬಹುದು" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು, ದೇಶದ್ರೋಹ ಕೃತ್ಯ ಮಾಡುವ ವ್ಯಕ್ತಿಗಳ ಫೋನ್ ಕದ್ದಾಲಿಸುವುದನ್ನು ಬಿಟ್ಟು ಬೇರೆ ಯಾವುದೇ ಗೌರವಾನ್ವಿತ ನಾಗರಿಕರ ಫೋನ್ ಕದ್ದಾಲಿಸುವುದು ಘೋರ ತಪ್ಪು. ಇದಕ್ಕೆಲ್ಲ ಅಂತ್ಯ ಸಿಗಬೇಕಾದರೆ ಸೂಕ್ತ ತನಿಖೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಮಾತ್ರ ಪರಿಹಾರ ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications