ಮಂಗಳೂರಿನಲ್ಲಿ ಕೊರೊನಾ ಲಸಿಕೆ ಪಡೆಯಲು ಮುಗಿಬಿದ್ದ ಜನರು
ಮಂಗಳೂರು, ಏಪ್ರಿಲ್ 29: ಕರಾವಳಿ ನಗರಿ ಮಂಗಳೂರಿನಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಜನರು ಮುಗಿಬಿದ್ದ ಘಟನೆ ಗುರುವಾರ ನಡೆದಿದೆ.
ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಆಯುಷ್ ಮಲ್ಟಿ ಸ್ಪೆಷಾಲಿಟಿ ವಿಭಾಗದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಗುರುವಾರ ಬೆಳಗ್ಗಿನಿಂದಲೇ ನೂರಾರು ಜನ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ಹಿರಿಯ ನಾಗರಿಕರು ಸೇರಿದಂತೆ 45 ವರ್ಷ ಮೇಲ್ಪಟ್ಟವರು ಕ್ಯೂ ನಿಂತಿದ್ದು, ಉರಿ ಬಿಸಿಲಿನಲ್ಲೂ ವೃದ್ಧರು ಲಸಿಕೆಗಾಗಿ ಕಾಯುತ್ತಿದ್ದಾರೆ. ಕೊರೊನಾ ಲಸಿಕೆಗಾಗಿ ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ ಜನ ನಿಂತಿದ್ದು, ಕೊರೊನಾ ನಿಯಮ ಉಲ್ಲಂಘನೆಯಾಗಿದೆ.
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಾವು, ಶೇ.20ರಷ್ಟು ಏಪ್ರಿಲ್ನಲ್ಲಿ ಸಂಭವಿಸಿದೆ
ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಜಿಲ್ಲಾಡಳಿತದಲ್ಲಿ ಸಂವಹನದ ಕೊರತೆ ಇದೆ. ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ ಮೇಲೆ ಈಗ ಕೋವಾಕ್ಸಿನ್ ಲಸಿಕೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಕೋವಿಶೀಲ್ಡ್ ಲಸಿಕೆ ಸೀಮಿತ ಸಂಖ್ಯೆಯಲ್ಲಿದ್ದು, ಸಂಜೆ ವೇಳೆ ಬರುವಂತೆ ಹೇಳಿದ್ದಾರೆ.
ಮೊದಲು ಲಸಿಕೆ ಪಡೆಯುವವರಿಗೆ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕವಷ್ಟೇ ನೀಡಲಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ವೃದ್ಧರು, ವಿವಿಧ ಕಾಯಿಲೆ ಇದ್ದವರು ಬಿಸಿಲಿನ ಬೇಗೆಯ ನಡುವೆಯೂ ಸರತಿ ಸಾಲಿನಲ್ಲಿ ನಿಂತಿದ್ದು, ತಲೆ ಸುತ್ತಿ ಬೀಳುವಂತಾಗಿದೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದಲ್ಲಿ ಲಸಿಕೆಗಳ ಅಲಭ್ಯತೆ ಇರುವುದರಿಂದ ಅಧಿಕಾರಿಗಳೂ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಜನ ಎಲ್ಲಾ ಕಡೆಗಳಲ್ಲಿ ಲಸಿಕೆಗೆ ಮುಗಿ ಬೀಳುತ್ತಿರೋದ್ರಿಂದ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ.
ವ್ಯಾಕ್ಸಿನ್ ಕೊರತೆಯ ನಡುವೆಯೂ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸರ್ಕಾರ ಸೂಚಿಸಿದ್ದು, 45 ವರ್ಷ ಮೇಲ್ಪಟ್ಟವರಿಗೇ ಲಸಿಕೆ ಸಿಗದೆ ಗೊಂದಲವಾಗಿದ್ದು, ಮೇ 1 ರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಗಳಿವೆ.