ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಕೊಟ್ಟು ಮೋಸ ಹೋದ ಜನರು
ಮಂಗಳೂರು, ಜುಲೈ 3: ರಸ್ತೆ ಅಭಿವೃದ್ಧಿಗೆ ಭೂಮಿ ಕೊಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜನರು ಪರಿಹಾರಕ್ಕಾಗಿ ಪರದಾಡುವಂತಾಗಿದೆ.
ಮಂಗಳೂರು- ಕಡೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್- ಚಾರ್ಮಾಡಿ ರಸ್ತೆ ಅಗಲೀಕರಣಕ್ಕೆ ಭೂಮಿ ಕೊಟ್ಟ ಜನರು ಈಗ ಪರಿಹಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಅಲೆದಾಡುವಂತಾಗಿದೆ. ಭೂಸ್ವಾಧಿನವಾಗಿ ಮೂರು ವರ್ಷ ಕಳೆದರೂ ಇನ್ನೂ ಪರಿಹಾರ ಸಿಗದೆ ಜನರು ಕಂಗಲಾಗಿದ್ದಾರೆ.
ಬಿ.ಸಿ ರೋಡ್- ಪೂಂಜಾಲಕಟ್ಟೆಯ ಸುಮಾರು 19 ಕಿಲೋಮೀಟರ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ಸರ್ಕಾರ 100 ಎಕರೆಗಿಂತ ಹೆಚ್ಚು ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿತ್ತು. ಇದೀಗ ರಸ್ತೆ ಕಾಮಗಾರಿ ಪೂರ್ಣವಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಮಾತ್ರ ಪರಿಹಾರ ನೀಡಿ ಇಲಾಖೆ ಕೈ ತೊಳೆದುಕೊಂಡಿದೆ.

ಕೃಷಿ ಭೂಮಿ ಸೇರಿದಂತೆ ಇತರ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೇವಲ ಪರಿಹಾರದ ಪತ್ರ ನೀಡಿ ಸಮಾಧಾನಪಡಿಸುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದೆ.

ಸುಮಾರು 200ಕ್ಕೂ ಹೆಚ್ಚು ಜನರ ಭೂಮಿಯನ್ನು ಇಲಾಖೆ ಸ್ವಾಧೀನ ಪಡಿಸಿದೆ. ಭೂಮಿ ಕಳೆದುಕೊಂಡು ಮೂರು ವರ್ಷಗಳೇ ಕಳೆದರೂ, ಈಗ ಅಧಿಕಾರಿಗಳು ಪರಿಹಾರ ಕೇಳಿದರೆ ಕೋವಿಡ್ ನೆಪ ಹೇಳುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟ ನಡೆಸಲು ಭೂಮಿ ಕಳೆದುಕೊಂಡ ಸಂತ್ರಸ್ತರು ನಿರ್ಧರಿಸಿದ್ದು, ಪರಿಹಾರ ನೀಡದಿದ್ದರೆ ರಸ್ತೆಗೆ ಬೇಲಿ ಹಾಕಲು ತೀರ್ಮಾನ ಮಾಡಿದ್ದಾರೆ.












Click it and Unblock the Notifications