"ಮೈತ್ರಿ ಸರಕಾರ ಉರುಳಿಸಲು ಅತೃಪ್ತರಿಗೆ 1 ಸಾವಿರ ಕೋಟಿ ಆಮಿಷ"
Recommended Video
ಮಂಗಳೂರು, ಜುಲೈ 24: ಮೈತ್ರಿ ಸರಕಾರದ ಪತನದ ಹಿಂದೆ ಅತೃಪ್ತ ಶಾಸಕರಿಗೆ ನೀಡಲಾದ 1 ಸಾವಿರ ಕೋಟಿ ರೂಪಾಯಿ ಆಮಿಷದ ಬೃಹತ್ ಹಗರಣವಿದೆ ಎಂದು ಶಾಸಕ ಯು.ಟಿ. ಖಾದರ್ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, "ಮುಂಬೈಯಲ್ಲಿ ಠಿಕಾಣಿ ಹೂಡಿರುವ ಪ್ರತಿಯೊಬ್ಬ ಅತೃಪ್ತರಿಗೂ 60 ರಿಂದ 70 ಕೋಟಿ ರುಪಾಯಿ ನೀಡುವ ಆಮಿಷ ಒಡ್ಡಲಾಗಿದೆ. ಈ ಕರಿತು ಖಚಿತ ಮಾಹಿತಿ ಇದೆ" ಎಂದು ಅವರು ಹೇಳಿದರು.
"ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಆಯ್ಕೆಯಾದ ಸರಕಾರವನ್ನು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಶಾಸಕರನ್ನು ಕೂಡಿಟ್ಟು, ವಾಮಮಾರ್ಗದಿಂದ ಮೈತ್ರಿ ಸರಕಾರವನ್ನು ಬಿಜೆಪಿ ನಾಯಕರು ಉರುಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ" ಎಂದು ಅವರು ಕಿಡಿ ಕಾರಿದರು.
ನೂತನ ಬಿಜೆಪಿ ಸರ್ಕಾರದಲ್ಲಿ ದಕ್ಷಿಣ ಕನ್ನಡದ ಯಾರಿಗೆ ಒಲಿಯುತ್ತೆ ಸಚಿವ ಸ್ಥಾನ?
"ನಾವು ಕ್ಷೇತ್ರದ ಜನರ ಕೆಲಸಕ್ಕಾಗಿ ಇರುವವರು. ನಾನು ಇದೆಲ್ಲಕ್ಕಿಂತ ಮೊದಲೇ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದೇನೆ. ರಾಜಭವನದಲ್ಲಿ ಅಧಿಕಾರ ಸ್ವೀಕರಿಸುವಾಗ, ಪ್ರಮಾಣವಚನ ಮಾಡಿ, ಸಹಿ ಹಾಕುವಾಗ ಎಷ್ಟು ಸಂತೋಷವಾಗಿತ್ತೋ, ಅಷ್ಟೇ ಸಂತೋಷ ಪಕ್ಷಕ್ಕಾಗಿ ರಾಜೀನಾಮೆ ನೀಡುವಾಗ ಆಗಿದೆ. ಜನರ ಆಶೀರ್ವಾದವಿದ್ದರೆ ಮಂತ್ರಿ ಸ್ಥಾನ ಯಾವಾಗಲೂ ಸಿಗಬಹುದು" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದು, ಬಿಜೆಪಿ ಸರಕಾರವನ್ನು ಸಮರ್ಥವಾಗಿ ಎದುರಿಸುತ್ತೇವೆ. ನನ್ನ ಈ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ರಸ್ತೆಗಳಿಗೆ ಅನುದಾನ, ಸಂಪೂರ್ಣ ಕ್ಷೇತ್ರದ ಕುಡಿಯುವ ನೀರಿನ ಯೋಜನೆ, ಯುಜಿಡಿ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದೇನೆ" ಎಂದು ಅವರು ಹೇಳಿದರು.