ಮಂಗಳೂರಿಗೆ ಪ್ರಧಾನಿ ಮೋದಿ ಬಂದು ಹೋದ್ಮೇಲೆ ಈ 'Audio' ವೈರಲ್!
ಪುತ್ತೂರು, ಸೆಪ್ಟೆಂಬರ್ 03: ಮಂಗಳೂರಿನಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಲಕ್ಷ ಲಕ್ಷ ಮಂದಿ ಸೇರಿದ್ದರು. ಕರಾವಳಿ ಜಿಲ್ಲೆಯಲ್ಲಿ ಕೇಸರಿ ಕಲರವ ಜೋರಾಯಿತು. ಬಿಜೆಪಿಗೆ ಜೈಕಾರ ಕೂಗುವ ಲಕ್ಷಾಂತರ ಮಂದಿಯ ಬಗ್ಗೆ ಬಿಜೆಪಿಗರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಕರಾವಳಿಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಜನಸ್ತೋಮದ ಹಿಂದಿನ ಸೀಕ್ರೆಟ್ ಇದೇನಾ ಅನ್ನುವಂತಾ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ಸುದ್ದಿ ಆಗುತ್ತಿದೆ.
ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 3,800 ಕೋಟಿ ರೂಪಾಯಿಗಳ ಮೊತ್ತದ ಹಲವು ಯೋಜನೆಗಳ ಲೋಕಾರ್ಪಣೆ ಮಾಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಕ್ಷಾಂತರ ಜನರಲ್ಲಿ ಹಲವು ಗುತ್ತಿಗೆ ನೌಕರರಿಗೆ ಬೆದರಿಕೆ ಹಾಕಿ ಕಾರ್ಯಕ್ರಮಕ್ಕಾಗಿ ಸೇರಿಸಲಾಗಿದೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಏನಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ವೈರಲ್ ಆಗಿರುವ ಆಡಿಯೋದಲ್ಲಿ ಏನಿದೆ?:
"ಪುತ್ತೂರು ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರೂ ಕೂಡಾ ನಾಳೆಯ ಕಾರ್ಯಕ್ರಮಕ್ಕೆ, ಅಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಹೋಗಬೇಕು. ನಿಮ್ಮ ನಿಮ್ಮ ಪಂಚಾಯತ್ ಬಳಿ ಸರಿಯಾಗಿ ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಎಲ್ಲರೂ ಯೂನಿಫಾರ್ಮ್ ಹಾಕಬೇಕು, ಯಾರೂ ಕೂಡಾ ಚೂಡಿದಾರ ಅಥವಾ ಬೇರೆ ಡ್ರೆಸ್ ಹಾಕಿಕೊಳ್ಳುವಂತಿಲ್ಲ. ಪ್ರತಿಯೊಬ್ಬರೂ ಸೀರೆಯಟ್ಟು ಐಡಿ ಕಾರ್ಡ್ ಹಾಕಿಕೊಂಡು ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯೂ ಹೋಗಬೇಕು. ಇಲ್ಲಿ ಯಾವುದೇ ಕಾರಣವನ್ನು ಹೇಳುವಂತಿಲ್ಲ. ಬೆಳಗ್ಗೆ 6 ರಿಂದ 6.30ರ ಹೊತ್ತಿಗೆ ನಿಮ್ಮ ಪಂಚಾಯತ್ ನಿಂದ ಬಸ್ ಹೊರಡುತ್ತದೆ. ಸಂಜೆ ಹೊತ್ತಿಗೆ ಅದೇ ಬಸ್ಸಿನಲ್ಲಿ ನಿಮ್ಮ ಮನೆ ಅಥವಾ ಪಂಚಾಯತ್ ತಲುಪುವುದಕ್ಕೆ ಸಾಧ್ಯವಿದೆ. ಬೇಗವೂ ಕಾರ್ಯಕ್ರಮವನ್ನು ಮುಗಿಸಲಾಗುತ್ತದೆ. ಬೇಗ ಸ್ಟಾರ್ಟ್ ಮಾಡ್ತಾರೆ, ಬೇಗ ಮುಗಿಸ್ತಾರೆ. ಬೆಳಗ್ಗೆ 11 ಗಂಟೆಗೆ ಪ್ರತಿಯೊಬ್ಬರು ಕೂಡ ಮಂಗಳೂರಿನಲ್ಲಿ ಸ್ಕ್ರೀನಿಂಗ್ ಆಗಿ, ಸಭಾಂಗಣದ ಒಳಗಡೆ ಇರಬೇಕು. ಅಲ್ಲಿ ನಿಮಗಾಗಿ ಹಾಕಿರುವ ಕುರ್ಚಿಗಳಲ್ಲಿ ಕುಳಿತುಕೊಂಡಿರಬೇಕು. 12 ಗಂಟೆ ವೇಳೆಗೆ ಕಾರ್ಯಕ್ರಮ ಸ್ಟಾರ್ಟ್ ಆಗುತ್ತೆ, 2 ಗಂಟೆಗೆ ಪ್ರೊಗ್ರಾಂ ಮುಗಿಯುತ್ತೆ, ಸಂಜೆ 4 ರಿಂದ 5 ಗಂಟೆಗೆ ನಿಮ್ಮ ಪಂಚಾಯತ್ ಅಥವಾ ಮನೆಗೆ ತಲುಪಬಹುದು. ಆದ್ದರಿಂದ ಈಗ ತಾನೇ ಡಿಎಹೆಚ್ಓ ಹೇಳಿದ್ದಾರೆ. ಡಿಎಚ್ಓ ಜೂಮ್ ಮೀಟಿಂಗ್ ಆಗುತ್ತಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಹೋಗಬೇಕು. ಹೋಗದಿರುವ ಆಶಾ ಕಾರ್ಯಕರ್ತೆಯರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆದರೆ, ನಾನು ಜವಾಬ್ದಾರಿ ಅಲ್ಲ. ನೀವು ನೀವೇ ಜವಾಬ್ದಾರಿ ಆಗಿರುತ್ತೀರಿ. ನನಗೆ ಹೇಳಬೇಡಿ, ನಾನು ಜವಾಬ್ದಾರಿ ಆಗುವುದಿಲ್ಲ. ದಯವಿಟ್ಟು ಪ್ರತಿಯೊಬ್ಬರು ನಾಳೆ ಕಾರ್ಯಕ್ರಮಕ್ಕೆ ಹೋಗಬೇಕು," ಎಂದು ವೈರಲ್ ಆಗಿರುವ ಆಡಿಯೋದಲ್ಲಿ ಹೇಳಲಾಗಿದೆ.