Guarantee Scheme: ಕರ್ನಾಟಕದಲ್ಲಿ ಗ್ಯಾರಂಟಿ ಅಪಸ್ವರ: ಕಾಂಗ್ರೆಸ್ ನಾಯಕ ಐವನ್ ಡಿಸೋಜ ಹೇಳಿದ್ದೇನು?
ಮಂಗಳೂರು, ಜೂನ್ 09: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮುಂದುವರಿಯುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆ ರಾಜ್ಯ ಚುನಾವಣೆಯಲ್ಲಿ ಜನರಿಗೆ ಕೊಟ್ಟ ವಾಗ್ದಾನ. ಇದನ್ನು ನಿಲ್ಲಿಸುವ ಪ್ರಶ್ನೆಯಿಲ್ಲ. ಯಾರಿಗೆ ಸಿಕ್ಕಿಲ್ಲವೂ ಅವರಿಗೆ ಹುಡುಕಿ ಕೊಡಲು ಗ್ಯಾರಂಟಿ ಸಮಿತಿ ರಚನೆ ಮಾಡಿದ್ದೇವೆ ಎಂದರು.

ಮುಂದೆ ಗ್ಯಾರಂಟಿ ಆಫೀಸ್ ಓಪನ್ ಆಗುತ್ತದೆ. ಅರ್ಹರಿದ್ದು ಸಿಗದವರು ದಕ್ಷಿಣ ಕನ್ನಡ ಜಿಲ್ಲೆಯ ಜಿ.ಪಂಚಾಯತ್ ಕಚೇರಿಯ ಗ್ಯಾರಂಟಿ ಆಫೀಸ್ಗೆ ಬರಬಹುದು. ಬೇಡಿಕೆ ತಂದುಕೊಟ್ಟರೇ ತಕ್ಷಣ ಮಾಡಿಕೊಡಲಾಗುತ್ತದೆ. ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರು ಚಾರ್ ಸೌ ಪಾರ್ ಹೇಳಿ ಓಡಿ ಹೋಗಿದ್ದಾರೆ. ಮೋದಿಯವರ ಕೈ ಕಾಲು ಹಿಡಿಯುವ ಸ್ಟೈಲು ಬದಲಾಗಿದೆ. ಇದುವರೆಗೆ ಮೋದಿ ಬಗ್ಗಿ ನೋಡಿರಲಿಲ್ಲ. ಈಗ ಏನು ಕರುಣೆ. ಸಂಕಟ ಕಾಲಕ್ಕೆ ವೆಂಕಟರಮಣ ಎಂಬಂತಾಗಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಕಾಲ ಬಂದಾಗ ಯಾರು ಹೇಗೆ ಬೇಕೊ ಹಾಗೆ ಮಾಡುತ್ತಾರೆ. ಇನ್ನೊಬ್ಬನ ಬಳಿ ಕೇಳಿ ಆಡಳಿತ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಇದು ಅವರ ಆಡಳಿತಕ್ಕೆ ಸರಿ ಹೊಂದುವುದಿಲ್ಲ. ಯಾವಾಗ ಕ್ಯಾಬಿನೆಟ್ ಮೀಟಿಂಗ್ ಕರೆಯುತ್ತಾರೋ ಎಂದು ಗೊತ್ತಿರಲಿಲ್ಲ.
ಕ್ಯಾಬಿನೆಟ್ನಲ್ಲಿ ಯಾವ ವಿಷಯ ಇರುತ್ತದೆ ಎಂದು ಗೊತ್ತಾಗುತ್ತಿರಲಿಲ್ಲ. ಯಾರು ಕ್ಯಾಬಿನೆಟ್ ಮಂತ್ರಿ ಎಂದು ಗೊತ್ತಾಗ್ತಿರಲಿಲ್ಲ. ಈಗ ಎಲ್ಲರ ಬಳಿ ಹೋಗಿ ಕೇಳಬೇಕಲ್ವಾ. ಮಂತ್ರಿಯಾಗಲು ನೀನು ಬಾ ಅಪ್ಪ ಎಂದು ಹೇಳಬೇಕಲ್ವಾ.ಇದು ಅವರಿಗೆ ಸೂಟ್ ಆಗುತ್ತಾ ಎಂದು ಪ್ರಶ್ನಿಸಿದರು.












Click it and Unblock the Notifications