ಮಂಗಳೂರು; ದೇವಾಲಯದ ಹುಂಡಿಗೆ ಕಾಂಡೋಮ್ ಹಾಕಿದ ದುಷ್ಕರ್ಮಿಗಳು
ಮಂಗಳೂರು, ಜನವರಿ 20: ಮಂಗಳೂರಿನಲ್ಲಿ ದೈವ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯ ಕ್ಷೇತ್ರದ ಹುಂಡಿಯಲ್ಲಿನ ಕಾಂಡೋಮ್ ಮತ್ತು ಆಕ್ಷೇಪಾರ್ಹ ಬರಹಗಳು ಪತ್ತೆಯಾಗಿವೆ. ನಗರ ಪೊಲೀಸ್ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಂಗಳೂರು ಸಮೀಪದ ಉಳ್ಳಾಲದ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯ ಕ್ಷೇತ್ರದ ಹುಂಡಿಯಲ್ಲಿ ಕಾಂಡೋಮ್ ಸಿಕ್ಕಿದೆ. ಸಂಕ್ರಮಣ ಮುಗಿದ ಬಳಿಕ ಹುಂಡಿ ಎಣಿಕೆಯನ್ನು ಬುಧವಾರ ಕೈಗೊಳ್ಳಲಾಗಿದ್ದು, ಆಗ ಪ್ರಕರಣ ಬೆಳಕಿಗೆ ಬಂದಿದೆ.
ಉಳ್ಳಾಲ ಬಸ್ ನಿಲ್ದಾಣದ ಸಮೀಪವೇ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯ ಕ್ಷೇತ್ರದ ದೇವಾಲಯವಿದೆ. ಕೊರಗಜ್ಜ ತುಳುನಾಡಿನ ಜನರ ಆರಾಧ್ಯ ದೈವವಾಗಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಗಜ್ಜನೇ ಅವರಿಗೆ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಬಿಜೆಪಿ ನಾಯಕರ ಚಿತ್ರ; ಕಾಂಡೋಮ್ಗಳು ಮಾತ್ರವಲ್ಲಿ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ವಿರೂಪಗೊಳಿಸಿರುವ ಪೋಸ್ಟರ್ನಲ್ಲಿ ಆಕ್ಷೇಪಾರ್ಹ ಬರಹಳನ್ನು ಬರೆಯಲಾಗಿದೆ. ಪೋಸ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕತ ಚಿತ್ರಗಳಿವೆ.

ಪೋಸ್ಟರ್ನಲ್ಲಿ "ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು", "ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದ್ದು ಜನರು ಸಿದ್ಧರಾಗಬೇಕು" ಎಂದು ಪ್ರಚೋದನಾಕಾರಿ ಬರಹಗಳನ್ನು ಬರೆಯಲಾಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ದೇವಾಲಯದ ಆಡಳಿತ ಮಂಡಳು ಆಕ್ರೋಶ ವ್ಯಕ್ತಪಡಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.
ಕೆಲವು ದಿನಗಳ ಹಿಂದೆ ಕೊಟ್ಟಾರದ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿ ಸಹ ಅವಹೇಳನಕಾರಿ ಬರಹಗಳು ಪತ್ತೆಯಾಗಿದ್ದವು. ಇದೇ ತಂಡ ಇಲ್ಲಿಯೂ ಕಾಣಿಕೆ ಹುಂಡಿಗೆ ಪತ್ರ ಹಾಕಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications