ಬೇಸಿಗೆಯಲ್ಲಿ ಮಂಗಳೂರು ನಗರಕ್ಕೆ ನೀರಿನ ಕೊರತೆ ಇಲ್ಲ
ಮಂಗಳೂರು, ಫೆ.6 : ಮಂಗಳೂರು ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ತುಂಬಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 84,619 ನೀರಿನ ಸಂಪರ್ಕವಿವೆ.
ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟು ಪೂರ್ಣ ತುಂಬಿದೆ. ಹಾಗೆಯೇ ನಾಗಾರ್ಜುನದ 2 ಅಣೆಕಟ್ಟು, ಸಾಗರ್ ಪವರ್ ಪ್ರೊಜೆಕ್ಟ್, ನೀರಕಟ್ಟೆ, ಬರೂಕಾ, ದಿಶಾ, ಎಎಂಆರ್ ಪವರ್ ಯೋಜನೆಯ ಅಣೆಕಟ್ಟುಗಳಲ್ಲಿಯೂ ಸಾಕಷ್ಟು ನೀರಿನ ಸಂಗ್ರಹವಿದೆ. [ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ]

ತುಂಬೆ ಅಣೆಕಟ್ಟಿನ ಮೇಲಿನ ಪ್ರದೇಶಗಳಲ್ಲಿ ನೇತ್ರಾವತಿಗೆ ಅಡ್ಡಲಾಗಿ ಸುಮಾರು 8 ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ತುಂಬೆ ಅಣೆಕಟ್ಟುಗಳಲ್ಲಿ ನೀರಿನ ಸಮಸ್ಯೆ ಉಂಟಾದಾಗ ಈ ಅಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ, ನೀರು ಪೂರೈಕೆ ಮಾಡಲಾಗುತ್ತದೆ.
ಮಂಗಳೂರು ನಗರಕ್ಕೆ ಪ್ರತಿದಿನ 140ರಿಂದ 160 ಎಂಎಲ್ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆರಂಭದಲ್ಲಿ ಜಲಮಂಡಳಿ ನಿರ್ವಹಿಸುತ್ತಿದ್ದ 80 ಎಂಎಲ್ಡಿ ನೀರು ಸರಬರಾಜು ಯೋಜನೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. [ಬೆಂಗಳೂರು ನಗರಕ್ಕೆ ನೀರಿನ ಕೊರತೆ ಇಲ್ಲ]
ನೇತ್ರಾವತಿ ನದಿಗೆ ತುಂಬೆಯಲ್ಲಿ 1993ರಲ್ಲಿ ನಿರ್ಮಾಣ ಮಾಡಿರುವ ಅಣೆಕಟ್ಟಿನಲ್ಲಿ 13 ಅಡಿಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಇರುವ ನೀರನ್ನು ಸಮರ್ಪಕ ರೀತಿಯಲ್ಲಿ ವಿತರಣೆ ಮಾಡಲು ಪಾಲಿಕೆ ಕ್ರಮ ಕೈಗೊಂಡಿದ್ದು, ಬಹುತೇಕ ಸಾರ್ವಜನಿಕ ನಲ್ಲಿಗಳ ಸಂಪರ್ಕ ಕಡಿತಗೊಳಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 1485 ಸಾರ್ವಜನಿಕ ನಲ್ಲಿ ಸಂಪರ್ಕವಿತ್ತು. ಇದೀಗ ಬಹುತೇಕ ನಲ್ಲಿಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ನೀರಿನ ಸಂಪರ್ಕ ಪತ್ತೆ ಮಾಡಿ ಅವುಗಳ ಸಂಪರ್ಕ ಕಡಿತಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಪ್ರಸಕ್ತ ತುಂಬೆ ಅಣೆಕಟ್ಟು ಭರ್ತಿಯಾಗಿದ್ದು, ಹರಿದು ಹೋಗುತ್ತಿದೆ. ನೀರು ಕಡಿಮೆಯಾದರೆ, ಮೇಲಿರುವ ವಿದ್ಯುತ್ ಉತ್ಪಾದನಾ ಡ್ಯಾಮ್ಗಳಿಂದ ನೀರು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.












Click it and Unblock the Notifications