ಚುನಾವಣಾ ಅಕ್ರಮಗಳಿಗೆ ಹರಿದಾರಿಯಾದ ಮಂಗಳೂರಿನ ಚೆಕ್ ಪೋಸ್ಟ್ ಗಳು
ಮಂಗಳೂರು, ಮಾರ್ಚ್ 31:ಲೋಕಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಸರತ್ತಿನಲ್ಲಿದ್ದರೆ, ಇನ್ನೊಂದೆಡೆ ಚುನಾವಣಾ ಆಯೋಗ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಸಜ್ಜಾಗಿ ನಿಂತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹಣ ಹಾಗೂ ಸರಕು ಸಾಗಾಟ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಂತಾರಾಜ್ಯ ಗಡಿ ಪ್ರದೇಶದಲ್ಲಿ ತೀವ್ರ ಕಣ್ಗಾವಲು ಇಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶದಲ್ಲಿ ಸುಮಾರು 12 ಅಂತಾರಾಜ್ಯ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಇಲ್ಲಿ ಉಭಯ ರಾಜ್ಯಗಳ ಪೊಲೀಸರು ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಕೇರಳದ ಗಡಿ ಪ್ರದೇಶವನ್ನು ಹೊಂದಿಕೊಂಡಿರುವ 12ಕಡೆಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ. ಹವಾಲಾ ಹಣ ಸಾಗಾಟ ನಿಯಂತ್ರಿಸುವುದು ಕೂಡ ಇದರ ಮುಖ್ಯ ಉದ್ದೇಶವಾಗಿದೆ.ಆದರೆ ವಾಸ್ತವದಲ್ಲಿ ದಕ್ಷಿಣ ಕನ್ನಡದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಅಕ್ರಮ ಎಸಗುವವರಿಗೆ ಮಾತ್ರ ತಪಾಸಣೆಯ ಭಯವಿಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಯಾಕೆಂದರೆ ವಾಹನ ತಪಾಸಣೆ ಮಾಡಬೇಕಾದ ಅಧಿಕಾರಿಗಳು ಚೆಕ್ ಪೋಸ್ಟ್ ಗಳ ಕುರ್ಚಿ ಬಿಟ್ಟು ಕದಲುತ್ತಿಲ್ಲ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಣ ರಂಗೇರ ತೊಡಗಿದೆ. ಕ್ಷೇತ್ರದ ಒಂದೆಡೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ ಇನ್ನೊಂದೆಡೆ ಚುನಾವಣಾ ಆಯೋಗ ಅಕ್ರಮಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಜಿಲ್ಲೆಯ ಆಯಕಟ್ಟಿನ ಜಾಗಗಳಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನಗಳ ತಪಾಸಣೆ ನಡೆಸಯುತ್ತಿದೆ. ಅದರೆ ಮಂಗಳೂರಿನಲ್ಲಿ ಮಾತ್ರ ತಪಾಸಣೆಯ ಯಾವ ಭಯವೂ ಇಲ್ಲ.ಅಕ್ರಮ ಹಣ,ಮದ್ಯ ಸಾಗಾಟಕ್ಕೆ ಪೊಲೀಸರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಭಾಸವಾಗುತ್ತಿದೆ.
ಚೆಕ್ ಪೋಸ್ಟ್ ಗಳಿದ್ದರೂ ತಪಾಸಣೆ ಮಾಡಬೇಕಾದ ಸಿಬ್ಬಂದಿ ತಂಪಾಗಿ ಫ್ಯಾನ್ ಅಡಿಗೆ ಖರ್ಚಿಗೆ ಅಂಟಿಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿಯ ಆಲಸ್ಯತನ ಬಟಾಬಯಲಾಗಿದೆ. ಮುಂದೆ ಓದಿ...

ಪೊಲೀಸರು ತಪಾಸಣೆಗೆ ಮುಂದಾಗುತ್ತಿಲ್ಲ
ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಚುನಾವಣಾ ನಿಮಿತ್ತ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಹೆದ್ದಾರಿ ಆದ್ಮೇಲೆ ಅಲರ್ಟ್ ಆಗಿರಬೇಕಾದ ಪೊಲೀಸರು ಚೆಕ್ ಪೋಸ್ಟ್ ಒಳಗೆ ಎರಡು ಕುರ್ಚಿ ಹಾಕಿ ಕೂತಿರುವ ದೃಶ್ಯ ಕಂಡು ಬಂದಿದೆ. ಆಗೊಮ್ಮೆ ಈಗೊಮ್ಮೆ ಹೋಗುವ ಮರಳು ಸಾಗಾಟದ ಲಾರಿಯನ್ನು ಹಿಡಿದು ಪೊಲೀಸರು ಫೈನ್ ವಿಧಿಸುತ್ತಿದ್ದಾರೆ. ಅನ್ಯ ರಾಜ್ಯದ ಕಾರ್ ಸೇರಿದಂತೆ ವಾಹನಗಳು ರಸ್ತೆಯಲ್ಲಿ ಸಾಗಿ ಬಂದರೂ ತಪಾಸಣೆಗೆ ಮುಂದಾಗುತ್ತಿಲ್ಲ.

ಸರಾಗವಾಗಿ ಸಂಚರಿಸುವ ಕೇರಳದ ವಾಹನಗಳು
ಇನ್ನೊಂದು ಚೆಕ್ ಪೋಸ್ಟ್ ಕೇರಳದಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಈ ರಸ್ತೆಯಲ್ಲಿ ಕೇರಳದಿಂದ ಅಕ್ರಮವಾಗಿ ಹಣ, ಮದ್ಯ ಸಾಗಾಟದ ಬಗ್ಗೆ ಈ ಹಿಂದೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ . ಈ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ಬಿಗಿ ಭಧ್ರತೆಯಿರಬಹುದು, ಭಾರೀ ತಪಾಸಣೆ ನಡೆಯಬಹುದು ಎಂದು ಊಹಿಸಿದರೆ ಚೆಕ್ ಪೋಸ್ಟ್ ನಲ್ಲೂ ಪೊಲೀಸರ ಸುಳಿವೇ ಇಲ್ಲ. ರಸ್ತೆಯಲ್ಲಿ ಕೇರಳದ ವಾಹನಗಳು ಸರಾಗವಾಗಿ ಸಂಚರಿಸುವ ದೃಶ್ಯ ಸಾಮಾನ್ಯ ವಾಗಿದೆ.

ಚುನಾವಣಾ ಸಿಬ್ಬಂದಿಯ ಕರ್ತವ್ಯ ಲೋಪ
ಮಂಗಳೂರು ನಗರ ಪ್ರವೇಶಿಸುವ ಹಾಗೂ ಹೊರಹೋಗುವ ರಸ್ತೆಗಳಲ್ಲಿ ವಾಹನಗಳ ತಪಾಸಣೆಗೆ ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದೆ. ಆದರೆ ಇಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರೇ ಇಲ್ಲಿ ಗಡದ್ದಾಗಿ ನಿದ್ದೆಗೆ ಜಾರಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ ರಾತ್ರಿ ಪೊಲೀಸರ ತಪಾಸಣೆ ಬಿಗಿಯಾಗಿರೋದ್ರಿಂದ ಕಳ್ಳಸಾಗಾಟಗಳೆಲ್ಲಾ ಮಧ್ಯಾಹ್ನವೇ ನಡೆಯುತ್ತಿದ್ದು, ಪೊಲೀಸ್ ಮತ್ತು ಚುನಾವಣಾ ಸಿಬ್ಬಂದಿಯ ಕರ್ತವ್ಯ ಲೋಪ ಅಕ್ರಮಗಳಿಗೆ ವರದಾನವಾಗಿದೆ ಎಂದು ಆರೋಪಿಸಲಾಗಿದೆ.

ಅಕ್ರಮಗಳು ನಡೆದರೂ ತಡೆಯದ ಅಧಿಕಾರಿಗಳು
ಚುನಾವಣೆ ಸಂದರ್ಭದಲ್ಲಿ ಮಂಗಳೂರು ನಗರದೊಳಗೆ ಸಣ್ಣ ಕಾರ್ಯಕ್ರಮ ನಡೆಸಬೇಕಾದರೂ ಅನುಮತಿ ಪತ್ರಕ್ಕಾಗಿ ಕಚೇರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ನೀತಿ ಸಂಹಿತೆ ನೆಪ ಒಡ್ಡಿ ಕಾರ್ಯಕ್ರಮಗಳೇ ರದ್ದಾದ ಪ್ರಸಂಗಗಳಿವೆ. ಆದರೆ ಕಣ್ಣೆದುರೇ ಅಕ್ರಮಗಳು ನಡೆದರೂ ತಡೆಯದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.












Click it and Unblock the Notifications