ಬೆಳ್ತಂಗಡಿಯಲ್ಲಿ ಸ್ಯಾಟಲೈಟ್ ಫೋನ್ ಕರೆ; ತನಿಖೆ ಚುರುಕುಗೊಳಿಸಿದ ಎನ್ ಐಎ
ಮಂಗಳೂರು ಆಗಸ್ಟ್ 19: ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸ್ಯಾಟಲೈಟ್ ಫೋನ್ ಕರೆ ಸುದ್ದಿ ಜನರನ್ನು ಬೆಚ್ಚಿ ಬೀಳಿಸಿದೆ. ಸ್ಯಾಟಲೈಟ್ ಫೋನ್ ಕರೆ ಕುರಿತು ಗುಪ್ತಚರ ಇಲಾಖೆಗೆ ಬಂದ ಮಾಹಿತಿ ಆಧರಿಸಿ ಎನ್ ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಬೆಳ್ತಂಗಡಿಯ ನಿಡ್ಲೆ, ಗೋವಿಂದೂರಿನಲ್ಲಿ ಮೂವರು ಎನ್ ಐಎ ಅಧಿಕಾರಿಗಳ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಈ ನಡುವೆ ತುರಾಯ ಸ್ಯಾಟಲೈಟ್ ಫೋನ್ ನಿಂದ ಬಂದ ಕರೆಯೊಂದು ಟ್ರೇಸ್ ಆದ ಕಾರಣ ರಾಷ್ಟ್ರೀಯ ತನಿಖಾ ದಳ ಬೆಳ್ತಂಗಡಿಯ ನಿಡ್ಲೆ ಹಾಗೂ ಚಿಕ್ಕಮಗಳೂರಿನ ಕಳಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಎನ್ ಐಎ ಸಂಪರ್ಕದಲ್ಲಿದ್ದು ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದಾರೆ.

ತುರಾಯ ಸ್ಯಾಟಲೈಟ್ ಫೋನ್ ಅನ್ನು ಕೊಲ್ಲಿ ರಾಷ್ಟ್ರಗಳಲ್ಲಿರುವರು ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಸಮುದ್ರ ಯಾನ ಸಂದರ್ಭದಲ್ಲಿ ಈ ಸ್ಯಾಟಲೈಟ್ ಫೋನ್ ಬಳಸುತ್ತಾರೆ. ಮುಂಬೈ ದಾಳಿ ಸಂದರ್ಭದಲ್ಲಿ ಈ ತುರಾಯ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ತುರಾಯ ಉಪಗ್ರಹ ಆಧಾರಿತ ಫೋನ್ ಸೇವೆಯನ್ನು ನಿರ್ಬಂಧಿಸಲಾಗಿತ್ತು.
ಬೆಳ್ತಂಗಡಿಯ ಗೇರುಕಟ್ಟೆಯ ಸಮೀಪದ ಗೊವಿಂದೂರಿಗೆ ಇದೇ ತುರಾಯ ಸ್ಯಾಟಲೈಟ್ ಫೋನ್ ಮೂಲಕ ಕರೆ ಬಂದಿದೆ ಎಂದು ಹೇಳಲಾಗಿದೆ. ಆದರೆ ಎಲ್ಲಿಂದ ಈ ಕರೆ ಮಾಡಲಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಸಮುದ್ರ ಮಾರ್ಗದಿಂದ ಈ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಶಂಕಿತ ವ್ಯಕ್ತಿಯೊಬ್ಬನನ್ನು ಬೆಳ್ತಂಗಡಿಯಲ್ಲಿ ಎನ್ ಐಎ ತಂಡ ವಶಕ್ಕೆ ಪಡೆದಿದೆ ಎನ್ನುವ ಸುದ್ದಿಹರಿದಾಡುತ್ತಿತ್ತು. ಆದರೆ ಯಾರನ್ನೂ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿ ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications