ರೌಡಿಗಳಿಗೆ ಹೊಸ ಆಫರ್ ನೀಡಿದ ಮಂಗಳೂರು ಪೊಲೀಸ್ ಕಮಿಷನರ್
ಮಂಗಳೂರು, ಆಗಸ್ಟ್ 28: ರೌಡಿ ಶೀಟರ್ ಗಳ ವ್ಯಕ್ತಿತ್ವ ಸುಧಾರಣೆ ಮೂಲಕ ಮಂಗಳೂರನ್ನು ಅಪರಾಧಮುಕ್ತ ನಗರವಾಗಿ ಬದಲಾಯಿಸಲು ಹೊಸ ಆಫರ್ ನೀಡಿದ್ದಾರೆ ಮಂಗಳೂರು ನೂತನ ಪೊಲೀಸ್ ಕಮಿಷನರ್ ಡಾ.ಹರ್ಷ.
ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆ
ಪೋಲೀಸ್ ಮಾತು ಕೇಳಿದಲ್ಲಿ ಆಫರ್, ಇಲ್ಲದೇ ಹೋದಲ್ಲಿ ಮತ್ತೆ ಲಾಕಪ್ ಎನ್ನುವ ಆಯ್ಕೆಯನ್ನೂ ರೌಡಿಗಳಿಗೆ ನೀಡಿದ್ದಾರೆ. ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳಲ್ಲಿ ರೌಡಿಶೀಟರ್ ಗಳಿಗೆ ಹೊಸ ಆಫರ್ ನೀಡುವ ಮೂಲಕ ಈ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ.
ಈ ಹಿಂದೆ ಇದ್ದ ಎಲ್ಲಾ ಅಪರಾಧ ಕೃತ್ಯಗಳಿಂದ ಮುಕ್ತರಾಗಿ, ಮುಖ್ಯವಾಹಿನಿಗೆ ಬರುವ ರೌಡಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಉದ್ಯೋಗ ಒದಗಿಸಿಕೊಡುವ ಭರವಸೆಯ ಅವಕಾಶ ನೀಡಲಾಗಿದೆ. ರೌಡಿಶೀಟರ್ ಹೊಂದಿರುವ ವ್ಯಕ್ತಿಯು ಪ್ರತೀ ಸೋಮವಾರ ಸ್ಥಳೀಯ ಪೋಲೀಸ್ ಠಾಣೆಗೆ ತೆರಳಿ ತನ್ನ ಚಟುವಟಿಕೆಗಳ ಬಗ್ಗೆ ನಿಖರ ಮಾಹಿತಿ ನೀಡಬೇಕಿದೆ. ಈ ರೀತಿ ಆರು ತಿಂಗಳ ಕಾಲ ನಿರಂತರವಾಗಿ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳದೆ ಸನ್ನಡತೆ ತೋರಿದ ರೌಡಿಗಳು ಈ ಆಫರ್ ನ ಫಲಾನುಭವಿಗಳಾಗುತ್ತಾರೆ.
ಇಂಥ ಸನ್ನಡತೆ ತೋರಿದ ರೌಡಿಗಳು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ಬಯಸಿದಲ್ಲಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ನೀಡಲಾಗುವ ಯೋಜನೆಯನ್ನು ಇವರಿಗೆ ದೊರಕಿಸಿಕೊಡುವ ಪ್ರಯತ್ನವನ್ನು ಮಂಗಳೂರು ಪೋಲೀಸ್ ಕಮಿಷನರ್ ಮಾಡಲಿದ್ದಾರೆ.
ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಸುಮಾರು 355 ರೌಡಿಗಳ ಪೆರೇಡ್ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ, "ಈ ಅವಕಾಶದಿಂದ ಸಮಾಜದಲ್ಲಿ ಮುಂದೆ ಬರಲು ಅವರಿಗೆ ಅವಕಾಶವಾಗಲಿದೆ. ಯಾವುದೋ ಘಳಿಗೆಯಲ್ಲಿ ನಡೆದ ಅಪರಾಧಗಳಿಂದ ರೌಡಿ ಪಟ್ಟ ಕಟ್ಟಿಕೊಂಡವರಿಗೂ ಇದು ಸಹಾಯವಾಗುತ್ತದೆ" ಎಂದಿದ್ದಾರೆ. ಅಪರಾಧ ಕೃತ್ಯಗಳಿಂದ ಹಿಂದೆ ಸರಿಯುವವರಿಗೆ ಈ ಯೋಜನೆಯ ಲಾಭ ಪಡೆಯುವಂತೆ ಮನವಿಯನ್ನೂ ಪೋಲೀಸ್ ಕಮಿಷನರ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಮುಂದುವರಿದರೆ ಕಾನೂನಿನ ಮೂಲಕ ಕಡಿವಾಣ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಂಗಳೂರು ಪೊಲೀಸರ ಈ ನಡೆ ಅಪರಾಧ ಕೃತ್ಯಗಳಿಂದ ದೂರ ಸರಿಯಲು ಇಷ್ಟಪಟ್ಟವರಿಗೆ ಉತ್ತಮ ಅವಕಾಶವಾಗಿದೆ. ಹುಟ್ಟಿದಾಗ ಯಾರೂ ಅಪರಾಧಿಯಾಗಿ ಹುಟ್ಟುವುದಿಲ್ಲ, ಪರಿಸ್ಥಿತಿ ಅಪರಾಧಿಯನ್ನಾಗಿ ಮಾಡುತ್ತದೆ ಎನ್ನುವ ಸತ್ಯವನ್ನು ಅರಿತಿರುವ ಮಂಗಳೂರು ಪೋಲೀಸರ ಈ ನಡೆ ಜನ ಮನ್ನಣೆಗೂ ಪಾತ್ರವಾಗಿದೆ.