ತುಂಬೆ ಡ್ಯಾಂ ಮುಳುಗಡೆ ಪ್ರದೇಶದ ಸಮೀಕ್ಷೆ
ಮಂಗಳೂರು, ಮೇ 17 : 'ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅಣೆಕಟ್ಟಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಣೆಕಟ್ಟಿನಲ್ಲಿ 7 ಮೀ ವರೆಗೆ ನೀರು ಸಂಗ್ರಹಿಸಲು ಅವಕಾಶವಿದೆ. ಇದಕ್ಕಾಗಿ ಮುಳುಗಡೆ ಪ್ರದೇಶದ ಭೂಸ್ವಾಧೀನದ ಸಮೀಕ್ಷೆಗೆ ಸರ್ಕಾರ' ಅಧಿಕೃತ ಆದೇಶ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಸಚಿವರು, 'ಹಿಂದಿನ ಸರ್ಕಾರವಿದ್ದಾಗ ತುಂಬೆ ಅಣೆಕಟ್ಟಿನ ಕಾಮಗಾರಿ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಮಗಾರಿಗೆ ವೇಗ ಸಿಕ್ಕಿ ಹಣ ಬಿಡುಗಡೆಯಾಗಿದ್ದು ಶೇ .95 ಕಾಮಗಾರಿ ಮುಗಿದಿದೆ' ಎಂದು ರಮಾನಾಥ ರೈ ಹೇಳಿದರು. [ದಕ್ಷಿಣ ಕನ್ನಡದಲ್ಲಿ ಕಾವೇರಿದ ಎತ್ತಿನಹೊಳೆ ವಿರೋಧಿ ಹೋರಾಟ]

'ಜೂನ್ ಅಂತ್ಯದೊಳಗೆ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಹಂತ-ಹಂತವಾಗಿ ಮುಳುಗಡೆ ಪ್ರದೇಶ ಭೂಸ್ವಾಧೀನ ಕಾರ್ಯ ನಡೆಯಲಿದೆ. ಸೂಕ್ತ ಪರಿಹಾರ ನೀಡುವಂತೆಯೂ ಸರ್ಕಾರದಿಂದ ಆದೇಶವಾಗಿದೆ' ಎಂದರು. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ತಾಲೂಕು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮಂಗಳೂರು ನಗರಕ್ಕೆ ನೀರಿನ ಕೊರತೆ ಉಂಟಾದರೆ ಕುದುರೆಮುಖದ ಲಕ್ಯಾ ಡ್ಯಾಂ ನೀರು ತರಲಾಗುತ್ತದೆ' ಎಂದು ಸಚಿವರು ಹೇಳಿದರು.
ಎಂಆರ್ಪಿಎಲ್ ನಿಂದ ಮತ್ತು ಸ್ಥಳೀಯರ ವಿರೋಧದ ನಡುವೆಯೂ ಭೂಸ್ವಾಧೀನ ಕಾರ್ಯ ನಡೆಸುತ್ತಿರುವ ಕುರಿತ ಆರೋಪ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, 'ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ರೈತರು ಒಪ್ಪಿದರೆ ಮಾತ್ರ ಭೂಸ್ವಾಧೀನ ಮಾಡಲಾಗುತ್ತದೆ' ಎಂದರು.











Click it and Unblock the Notifications