ನಳೀನ್ ಕುಮಾರ್ ಕಟೀಲ್ ದತ್ತು ಪಡೆದ ಬಳ್ಪ ಗ್ರಾಮದ ಪರಿಚಯ
ಮಂಗಳೂರು, ಜ.20 : ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ದೇವಾಲಯಗಳ ಊರು ಎಂದೇ ಪ್ರಸಿದ್ಧಿ ಪಡೆದಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಜನರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಬಳ್ಪ ಗ್ರಾಮದ ಅಭಿವದ್ಧಿಯ ಬಗ್ಗೆ ಹಾಗೂ ಪ್ರತಿ ಮನೆಯ ಮೂಲ ಸಮಸ್ಯೆಗಳ ಬಗ್ಗೆ ಜನರೊಂದಿಗೆ ಚರ್ಚೆ ನಡೆಸಿದ ನಳೀನ್ ಕುಮಾರ್ ಕಟೀಲ್ ಅವರು, ಜತೆಗಿದ್ದ ಆಧಿಕಾರಿಗಳಿಗೆ ಅಭಿವೃದ್ಧಿ ರೂಪುರೇಷೆಯನ್ನು ಒಂದು ವಾರದೊಳಗೆ ತಯಾರಿಸಿ ನೀಡುವಂತೆ ಸೂಚನೆ ನೀಡಿದ್ದಾರೆ. [ಕರ್ನಾಟಕದ ಸಂಸದರು ಆಯ್ಕೆಮಾಡಿಕೊಂಡ ಗ್ರಾಮಗಳು]
ಅಭಿವೃದ್ಧಿ ಅಗತ್ಯವಿರುವ ಗ್ರಾಮ : ಜನಪದ ಇತಿಹಾಸವನ್ನು ತನ್ನ ಒಡಲಲ್ಲಿ ತುಂಬಿರುವ ಬಳ್ಪ ಗ್ರಾಮ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಿಗುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಗ್ರಾಮ ಅಭಿವೃದ್ಧಿಯಾಗಬೇಕಿದೆ. ಬಳ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಳ್ಪ ಮತ್ತು ಕೇನ್ಯ ಎಂಬ ಎರಡು ಕಂದಾಯ ಗ್ರಾಮಗಳಿವೆ. [ಕರ್ನಾಟಕದ ಸಂಸದರ ಪಟ್ಟಿ ಇಲ್ಲಿದೆ]

ಅಭಿವೃದ್ಧಿ ಕಾಣದ ರಸ್ತೆಗಳು : ರಾಜ್ಯ ಹೆದ್ದಾರಿ ಗ್ರಾಮದ ಒಂದು ಬದಿಯಲ್ಲಿ ಹಾದು ಹೋಗಿದ್ದರೂ ಗ್ರಾಮದ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಗ್ರಾಮದಲ್ಲಿ 12 ಕಿಲೋ ಮೀಟರ್ ಜಿಲ್ಲಾ ಪಂಚಾಯಿತಿ ರಸ್ತೆ ಮತ್ತು ಸುಮಾರು 15 ಕಿಲೋಮಿಟರ್ ಗ್ರಾಮ ಪಂಚಾಯಿತಿ ರಸ್ತೆಗಳಿದ್ದು, ಹೊಂಡಗುಂಡಿಗಳಿಂದ ಕೂಡಿವೆ.
ಗ್ರಾಮವನ್ನು ಪೂರ್ತಿಯಾಗಿ ಸುತ್ತುವರಿಯುವ ರಿಂಗ್ ರಸ್ತೆಯಾದ ಅಡ್ಡಬೈಲು-ಕೇನ್ಯ-ಬೀದಿಗುಡ್ಡೆ-ಕೊನ್ನಡ್ಕ-ಎಣ್ಣೆಮಜಲು-ಬಳ್ಪ ಸಂಪರ್ಕದ 12 ಕಿ.ಮೀ. ಜಿಲ್ಲಾ ಪಂಚಾಯಿತಿ ರಸ್ತೆ ಅಭಿವದ್ಧಿಯಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. [ತಮ್ಮಾಡಿಹಳ್ಳಿ ದತ್ತು ಪಡೆದ ಆಯನೂರು ಮಂಜುನಾಥ್]
ಗ್ರಾಮದಲ್ಲಿ ಬಡ, ಮಧ್ಯಮ ವರ್ಗದ ಮತ್ತು ಕೂಲಿ ಕಾರ್ಮಿಕರೇ ಹೆಚ್ಚಾಗಿರುವುದರಿಂದ ಜನರಿಗೆ ಮನೆ ನಿರ್ಮಾಣದ ಬೇಡಿಕೆಗಳು ಹೆಚ್ಚಾಗಿದೆ. ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಸುಸಜ್ಜಿತವಾದ ಮನೆ ನಿರ್ಮಾಣ ವಾಗಬೇಕಾಗಿದೆ. ಹಲವು ಮನೆಗಳ ಜಾಗಗಳಿಗೆ ಹಕ್ಕುಪತ್ರಗಳೂ ಇಲ್ಲ.
ನೀರಿನ ಸಮಸ್ಯೆ : ಗ್ರಾಮದಲ್ಲಿ ಕಡು ಬೇಸಿಗೆಯಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೃಷಿಗೆ ನೀರಿನ ಕೊರತೆ ಉಂಟಾಗುತ್ತಿದೆ. ರಾಜರ ಕಾಲದಲ್ಲಿಯೇ ನಿರ್ಮಾಣವಾದ ಸುಮಾರು 1 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಬೋಗಾಯನ ಕೆರೆ ಬಳ್ಪದ ಐತಿಹಾಸಿಕ ಪರಂಪರೆಯ ಹೆಗ್ಗುರುತು. ಈ ಕೆರೆಯ ಹೂಳನ್ನು ಎತ್ತಿ ಅಭಿವದ್ಧಿ ಪಡಿಸಿದರೆ ಈ ನೀರನ್ನು ಕೃಷಿಗೆ ಉಪಯೋಗಿಸಿಕೊಳ್ಳಬಹುದು.

ಗ್ರಾಮದ ಸಮಸ್ಯೆಗಳು : ಬಳ್ಪ ಗ್ರಾಮದಲ್ಲಿ ಯಾವುದೇ ಬ್ಯಾಂಕ್ಗಳಿಲ್ಲ, ರಾಷ್ಟ್ರೀಕತ ಬ್ಯಾಂಕ್ನ ಶಾಖೆ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಹಲವಾರು ಕ್ರೀಡಾಪಟುಗಳನ್ನು ನಾಡಿಗೆ ಕೊಟ್ಟ ಗ್ರಾಮಕ್ಕೆ ಸುಸಜ್ಜಿತ ಕ್ರೀಡಾಂಗಣಬೇಕಾಗಿದೆ. ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು, ರೈತ ಸಂಪರ್ಕ ಕೇಂದ್ರ ಸ್ಥಾಪನೆಯಾಗಬೇಕು. ಪಶುಪಾಲನಾ ಕೇಂದ್ರದ ಅಗತ್ಯವಿದೆ ಹೀಗೆ ಬಳ್ಪ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ.
ದೇವಾಲಯಗಳ ಗ್ರಾಮ : ದೇವಾಲಯಗಳ ಗ್ರಾಮ ಎಂದು ಕರೆಲಾಗುವ ಬಳ್ಪ ಗ್ರಾಮವು 3835.49 ಎಕರೆ ಭೂ ಪ್ರದೇಶವನ್ನು ಹೊಂದಿದೆ. 1,483 ಗಂಡು ಮತ್ತು 1,490 ಮಹಿಳೆಯರು ಸೇರಿ 2,973 ಜನಸಂಖ್ಯೆ ಗ್ರಾಮದಲ್ಲಿದೆ. 781 ಕುಟುಂಬಗಳಿದ್ದು 2,301 ಮತದಾರರಿದ್ದಾರೆ.
ದೇವಾಲಯಗಳ ಗ್ರಾಮ ಎಂದೇ ಕರೆಯಲ್ಪಡುವ ಬಳ್ಪ ಗ್ರಾಮದಲ್ಲಿ ಎಂಟು ದೇವಸ್ಥಾನಗಳಿವೆ. ಸಂಪೂರ್ಣ ಶಿಲಾಮಯವಾಗಿರುವ ಇತಿಹಾಸ ಪ್ರಸಿದ್ಧ ಬಳ್ಪ ತ್ರಿಶೂಲಿನಿ ದೆವಾಲಯ ಇದರಲ್ಲಿ ಪ್ರಮುಖವಾದದ್ದು. ಕಾಂಜಿ ದುರ್ಗಾ ಪರಮೇಶ್ವರಿ ದೇವಸ್ಥಾನ, ಅರ್ಗುಡಿ ಸದಾಶಿವ ದೇವಸ್ಥಾನ, ಕುಂಜತ್ತಾಡಿ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿವೆ.












Click it and Unblock the Notifications