ಮಂಗಳೂರು ಜೈಲೊಳಗೆ ಆಯುಧಗಳು ಬಂದಿದ್ದು ಹೇಗೆ?
ಮಂಗಳೂರು, ನವೆಂಬರ್ 04 : 'ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ಅವಳಿ ಕೊಲೆಯು ವ್ಯವಸ್ಥಿತ ಸಂಚು. ಐವರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದು, ಹೊರಗಿನವರೂ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಇಬ್ಬರು ಕೈದಿಗಳನ್ನು ಕೊಲೆ ಮಾಡಲು ಚಾಕುವಿನಂತಹ ಹರಿತವಾದ ಆಯುಧಗಳನ್ನು ಬಳಸಲಾಗಿದೆ. ಆಯುಧಗಳನ್ನು ಜೈಲಿನ ಹೊರಭಾಗದಿಂದ ಎಸೆದಿರುವ ಸಾಧ್ಯತೆ ಇದೆ. ಜೈಲಿನ ಆವರಣದಲ್ಲಿ ಸಂಪೂರ್ಣ ಹುಡುಕಾಟ ನಡೆಯುತ್ತಿದೆ. ಆಯುಧಗಳು ಇನ್ನೂ ಪತ್ತೆಯಾಗಿಲ್ಲ' ಎಂದು ಅವರು ತಿಳಿಸಿದರು. [ಮಂಗಳೂರು ಜೈಲಲ್ಲಿ ಜೋಡಿ ಕೊಲೆ]

'ಮಂಗಳೂರು ಕಮಿಷನರ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆಯ ಎಸಿಪಿ ನೇತೃತ್ವದಲ್ಲಿ ಮತ್ತು ಬಂಧಿಖಾನೆ ಇಲಾಖೆಯ ಮತ್ತೊಂದು ತಂಡ ಜೈಲಿನಲ್ಲಿ ನಡೆದ ಹತ್ಯೆಯ ಬಗ್ಗೆ ತನಿಖೆ ನಡೆಸಲಿದೆ' ಎಂದು ಅಲೋಕ್ ಮೋಹನ್ ಮಾಹಿತಿ ನೀಡಿದರು. [ಮಂಗಳೂರು ಜೈಲಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ]
40 ಇರಿತದ ಗಾಯಗಳಿವೆ : 'ಕೊಲೆಯಾದ ಮಾಡೂರು ಯೂಸೂಫ್ ಮೃತದೇಹದಲ್ಲಿ 40 ಬಾರಿ ಇರಿತದ ಗಾಯಗಳು ಕಂಡುಬಂದಿವೆ. ಮತ್ತೊಬ್ಬ ಕೈದಿ ಗಣೇಶ್ ಶೆಟ್ಟಿ ಅವರ ಮುಖ ಮತ್ತು ತಲೆಗೆ ರೀಪಿನಂತಹ ವಸ್ತುವಿನಿಂದ ಹೊಡೆಯಲಾಗಿದೆ' ಎಂದರು.
ಇಬ್ಬರ ಹತ್ಯೆ ನಡೆದಿತ್ತು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು.
ಹತ್ಯೆ ಮಾಡಿಸಿದ್ದು ನಾನೇ : 'ಮಂಗಳೂರು ಜೈಲಿನಲ್ಲಿ ನಡೆದ ಹತ್ಯೆಗೆ ನಾನೇ ಕಾರಣ. ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಯೂಸುಫ್ ಕೊಲೆಗೆ ನಾನು ಹೊಣೆ. ನನ್ನ ಸಹಚರರು ಆತನನ್ನು ಮುಗಿಸಿದ್ದಾರೆ' ಎಂದು ಭೂಗತ ವಿಕ್ಕಿ ಶೆಟ್ಟಿ ಹೇಳಿಕೊಂಡಿದ್ದಾನೆ.












Click it and Unblock the Notifications