ಭೂಮಿ ಪಡೆದವರಲ್ಲಿ ದ.ಕನ್ನಡದವರೇ ಹೆಚ್ಚು: ರಮಾನಾಥ ರೈ
ಮಂಗಳೂರು, ಫೆಬ್ರವರಿ 4 : ಭೂ ಮಸೂದೆ ಕಾಯ್ದೆ, ಬಗರ್ ಹುಕುಂ ಕಾಯ್ದೆಯಡಿ ದೇಶದಲ್ಲಿ ಹೆಚ್ಚು ಭೂಮಿ ಪಡೆದು ಕೃಷಿ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಇದು ಹೆಮ್ಮೆಯ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂತಸ ವ್ಯಕ್ತಪಡಿಸಿದರು.
ಅವರು ಶನಿವಾರ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಲಾದ ರೈತ ಸಭಾಭವನ ಹಾಗೂ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಮಾತನಾಡಿ.ಸಾಮಾಜಿಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಜಿಲ್ಲೆ ನಮ್ಮದು ಎಂದರು.

ಮಧ್ಯವರ್ತಿಗಳನ್ನು ದೂರ ಮಾಡಬೇಕೆಂಬ ದೃಷ್ಟಿಯಿಂದ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲಾಗುತ್ತಿದ್ದು, ಪುತ್ತೂರು, ಸುಳ್ಯ ಮತ್ತು ಬಂಟ್ವಾಳದಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಕಾಣಬಹುದು. ಆದರೆ ಮಂಗಳೂರಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿದ ಎಪಿಎಂಸಿ ಪ್ರಾಂಗಣಕ್ಕೆ ತೆರಳಲು ಅಲ್ಲಿನ ಮಂದಿ ಒಪ್ಪದ ಕಾರಣ ವ್ಯಾಪಾರ ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದರು.
ಅತಿಥಿ ಗೃಹ ಉದ್ಘಾಟನೆ
ಇದೇ ವೇಳೆ ನೂತನವಾಗಿ ನಿರ್ಮಿಸಲಾಗಿರುವ ಅತಿಥಿಗೃಹವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಪ್ರಗತಿ ಪರ ಕೃಷಿಕರಾದ ರೆಂಜಲಾಡಿ ಕೂಡಿಗೆಮನೆ ವಸಂತ, ಸರ್ವೆಯ ಅಣ್ಣು ಪೂಜಾರಿ, ಕರ್ನೂರು ಗುತ್ತು ಸತೀಶ್ ರೈ, ಮುಂಡೂರು ಪಜಿಮಣ್ಣು ತಿಮ್ಮಪ್ಪಗೌಡ, ಪಡ್ಡಮೆ ದಯಾನಂದ ಗೌಡ, ಕುಮಾರ್ ಪೆರ್ನಾಜೆ, ಬಜತ್ತೂರು ಕೋಡಿಮನೆ ಲಿಂಗಪ್ಪಗೌಡ, ಕರ್ನೂರು ನೇರೋಲ್ತಡ್ಕ ಎನ್.ಮೂಸನ್, ಶಾಂತಿಗೋಡಿನ ಮಜಲುಮನೆ ರುಕ್ಮಯ ಗೌಡ, ಅರಿಯಡ್ಕದ ಗುಂಡ್ಯಡ್ಕ ವಾಸು ಪೂಜಾರಿ, ಉಪ್ಪಿನಂಗಡಿಯ ನೆಕ್ಕರೆ ರಾಮಣ್ಣ ಗೌಡ, ಬನ್ನೂರಿನ ಕುಂಟ್ಯಾನ ಧರ್ಣಪ್ಪ ಗೌಡ, ಕುರಿಯ ಬಳ್ಳಮಜಲಿನ ರವೀಂದ್ರನಾಥ ರೈ ಮತ್ತು ಹಿರಿಯ ವರ್ತಕ ಯುನಿಟಿ ಪಿ.ಬಿ.ಹಸನ್ ಹಾಜಿಯವರನ್ನು ಸನ್ಮಾನಿಸಲಾಯಿತು.












Click it and Unblock the Notifications