ಬಡವರಿಗೆ ಶಾಲೆ, ಆಸ್ಪತ್ರೆ ಕಟ್ಟುವ ಕನಸು ಹೊಂದಿದ್ದ ವ್ಯಕ್ತಿ: ಎಂಎಲ್ ಸಿ ಪ್ರಾಣೇಶ್
ಮಂಗಳೂರು, ಜುಲೈ 31: ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ಮೃತದೇಹ ಹೊಯಿಗ್ ಬಜಾರ್ ಎಂಬ ಪ್ರದೇಶದ ನದಿ ಭಾಗದಲ್ಲಿ ಪತ್ತೆಯಾಗಿದೆ. ಅವರು ಮರಳಿ ಬರಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಬಳಿಯೂ ಜನರು ಸಿದ್ಧಾರ್ಥ್ ಅವರ ಪಾರ್ಥಿವ ಶರೀರ ನೋಡಲು ಬರುತ್ತಿದ್ದಾರೆ. ಈ ನಡುವೆ, ಚಿಕ್ಕಮಗಳೂರಿನ ಎಂಎಲ್ ಸಿ ಪ್ರಾಣೇಶ್, ಸಿದ್ಧಾರ್ಥ್ ಅವರ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
"ಸಿದ್ದಾರ್ಥ್ ಅವರು ಕಾಫಿ ಬೆಳೆಯುವ ಭೂಮಿಯ ಒತ್ತುವರಿ ಸಮಸ್ಯೆ ಬಂದಾಗ ಆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಕಾಫಿ ಬೆಳೆಗಾರರ ಪರವಾಗಿ ನಿಂತಿದ್ದರು. ಇಷ್ಟೇ ಅಲ್ಲ, ಅನೇಕ ಸಮಾಜ ಸೇವೆಗಳನ್ನು ಮಾಡಿದ್ದಾರೆ. ಹಳ್ಳಿಯ ಯುವಕರಿಗೆ ಪೇಟೆಯಲ್ಲಿ ಉದ್ಯೋಗ ನೀಡಿದರು. ಕಾಫಿ ಡೇ ಯಲ್ಲಿ ಕೆಲಸ ಮಾಡುವ ಹುಡುಗರಿಗೆ ಭಾಷಾ ಸಂವಹನಕ್ಕಾಗಿ ವಿಶೇಷ ಶಾಲೆ ತೆರೆದು ಉಚಿತ ಶಿಕ್ಷಣ ನೀಡಿದವರು. ಅವರು ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಈ ಒಂದು ದುರ್ಘಟನೆ ಆಘಾತ ತಂದಿದೆ" ಎಂದು ಸಿದ್ಧಾರ್ಥ್ ಅವರ ಕಾರ್ಯಗಳನ್ನು ಸ್ಮರಿಸಿದರು ಪ್ರಾಣೇಶ್.

"ಕಾಫಿ ಡೇ ಯಲ್ಲಿ ಕೆಲಸ ಮಾಡುವ ಯುವಕರಿಗೆ ಬದುಕು ಕಟ್ಟಿಕೊಟ್ಟಿದ್ದರು. ಈಗ ಅವರ ಬದುಕೇ ಹೀಗೆ ಅಂತ್ಯವಾಯಿತು. ಬಡವರಿಗಾಗಿ ಶಾಲೆ, ಆಸ್ಪತ್ರೆ ಸ್ಥಾಪಿಸಬೇಕೆಂಬ ಕನಸನ್ನು ಹೊಂದಿದ್ದರು. ಅವರು ಮತ್ತೆ ಹುಟ್ಟಿ ಬರಲಿ, ಯುವ ಜನತೆಗೆ ಮಾರ್ಗದರ್ಶನ ನೀಡಲಿ" ಎಂದು ಭಾವುಕರಾದರು.












Click it and Unblock the Notifications