ಮುದ್ರಾಧಾರಣೆ ನಿಷೇಧಿಸಿದ ಸರ್ಕಾರ: ಆದೇಶ ವಾಪಸ್ ಪಡೆಯುವಂತೆ ಶಾಸಕ ರಘುಪತಿ ಭಟ್ ಆಗ್ರಹ
ಮಂಗಳೂರು, ನವೆಂಬರ್ 10: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆಗೆ ಅವಕಾಶವಿಲ್ಲ ಎಂಬ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಹೊಸ ವಿವಾದವನ್ನು ಸೃಷ್ಟಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಆದೇಶಕ್ಕೆ ಮಾಧ್ವ ಸಂಪ್ರದಾಯ ಅನುಯಾಯಿಗಳು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ಆದೇಶ ಸಮಾಜದಲ್ಲಿ ಬಿರುಕನ್ನು ಮೂಡಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದನ್ನು ಇಲಾಖೆ ನಿಷೇಧಿಸಿದೆ. ಕರಾವಳಿ ಭಾಗದ ದೇವಸ್ಥಾನಗಳಲ್ಲಿ ಈ ಆದೇಶದಿಂದ ಸಮಸ್ಯೆ ಉಂಟಾಗಿದೆ.
ಮಳಲಿ ಮಸೀದಿ ವಿವಾದ: ವಿಎಚ್ಪಿ ಪರ ವಕೀಲ ಹೇಳಿದ್ದೇನು?
ಕರಾವಳಿ ಭಾಗದ ದೇವಾಲಯಗಳಲ್ಲಿ ಮಾಧ್ವರಿಂದ ಪೂಜೆ ಮಾಡಲಾಗುತ್ತಿದ್ದು, ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ. ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು ತಪ್ಪು. ಚಾಲ್ತಿಯಲ್ಲಿರುವ ಸಂಪ್ರದಾಯಗಳ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವಂತಿಲ್ಲ. ಮುದ್ರಾಧಾರಣೆಗೆ ಅವಕಾಶವಿಲ್ಲ ಎಂಬ ಮುಜರಾಯಿ ಇಲಾಖೆ ಆದೇಶಕ್ಕೆ ವೈಷ್ಣವ ಸಂಪ್ರದಾಯದ ಮಾಧ್ವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಷ್ಣವ ಸಂಪ್ರದಾಯದ ಮಾಧ್ವರ ಆಕ್ರೋಶ
ಈ ಬಗ್ಗೆ ಮಾಧ್ವ ತತ್ವ ಅನುಯಾಯಿ ಜಿ.ವಾಸುದೇವ ಭಟ್ ಪ್ರತಿಕ್ರಿಯೆ ನೀಡಿದ್ದು, "ಸರ್ಕಾರದ ಆದೇಶ ಅಸಂಗತವಾಗಿದೆ. ಇಲಾಖೆಯ ಒಳಗಿನ ಅಧಿಕಾರಿಗಳ ಕುಮ್ಮಕ್ಕಿನಿಂದ ಹೀಗಾಗಿದೆ. ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕು ಮಾಡುವ ಪಿತೂರಿ ಇದೆ. ಸರಕಾರ ವಾಸ್ತವಂಶ ಗಮನಿಸಬೇಕು. ಮಂತ್ರಿಗಳ ಗಮನಕ್ಕೆ ಬಾರದೆ ಅಧಿಕಾರಿಗಳಿಂದ ಈ ಕೆಲಸ ಆಗಿರಬಹುದು. ಶತಮಾನಗಳಿಂದ ನಡೆದು ಬಂದಿರುವ ಆಗಮೋಕ್ತ ಸಂಪ್ರದಾಯದಂತೆ ಪೂಜೆ ನಡೆಯುತ್ತದೆ. ದೇವಾಲಯದ ಚಾವಡಿಗಳಲ್ಲಿ ಪ್ರಾತಃಸ್ಮರಣೀಯ ಆಚಾರ್ಯರ ಜಯಂತಿ ಆಚರಿಸಿದರೇ ತಪ್ಪೇನು? "ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮುದ್ರಾಧಾರಣೆಯನ್ನು ಒಪ್ಪುವವರಿಗೆ ಮಾತ್ರ ಮಾಡಲಾಗುತ್ತದೆ
"ಮಧ್ವಾಚಾರ್ಯರನ್ನು ಗುರುಗಳು ಎಂದು ಸ್ವೀಕರಿಸಿರುವ ದೊಡ್ಡ ಸಮುದಾಯವೇ ಇದೆ. ದೇವಸ್ಥಾನದ ಚಾವಡಿಗಳಲ್ಲಿ ಮುದ್ರಾಧಾರಣೆ ಅನೇಕ ಸಮಯದಿಂದ ನಡೆಸಲಾಗುತ್ತಿದೆ. ಇದು ಭಕ್ತರ ಅನುಕೂಲಕ್ಕೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಬಗ್ಗೆ ಯಾರೂ ದೂರು ಕೊಟ್ಟಿದ್ದಾರೆ ಗೊತ್ತಿಲ್ಲ. ಮುದ್ರಾಧಾರಣೆ ನಡೆಸುವುದರಿಂದ ದೇವಾಲಯದ ಪದ್ಧತಿಯ ಮೇಲೆ ಯಾವುದೇ ಸವಾರಿ ನಡೆಯುವುದಿಲ್ಲ. ಯಾರಿಗೂ ಬಲವಂತವಾಗಿ ಮುದ್ರಾಧಾರಣೆ ಮಾಡುವುದಿಲ್ಲ. ಮುದ್ರಾಧಾರಣೆಯನ್ನು ಒಪ್ಪುವವರಿಗೆ ಮಾತ್ರ ಮಾಡಲಾಗುತ್ತದೆ. ಇಲ್ಲಿ ಯಾವುದೇ ಪೂರ್ವಗ್ರಹ ದೃಷ್ಟಿಕೋನಗಳಿಲ್ಲ. ಈ ಸುತ್ತೋಲೆಯನ್ನು ತಕ್ಷಣ ವಾಪಾಸ್ ಪಡೆಯಬೇಕು. ಸನಾತನಿಯಾಗಿ ಇದು ನಮ್ಮ ಆಗ್ರಹ" ಎಂದು ವಾಸುದೇವ ಭಟ್ ಸರ್ಕಾರದ ಆದೇಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದ ಶಾಸಕರು
ಸರ್ಕಾರದ ಆದೇಶಕ್ಕೆ ಶಾಸಕ ರಘುಪತಿ ಭಟ್ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಧಾರ್ಮಿಕ ದತ್ತಿ ಇಲಾಖೆ ಸಚಿವರ ಜೊತೆಗೂ ಮಾತನಾಡುತ್ತೇನೆ. ಆಯಾ ಮತಗಳಿಗೆ ಸಂಬಂಧಪಟ್ಟ ಕೆಲವು ಆಚರಣೆಗಳು ಇರುತ್ತದೆ. ಇದೆಲ್ಲಾ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಮಾಧ್ವ ಪರಂಪರೆ ಇರುವ ದೇವಸ್ಥಾನಗಳಲ್ಲಿ, ಕರಾವಳಿಯಲ್ಲಿ ಮುದ್ರಾಧಾರಣೆ ಮಾಡಲಾಗುತ್ತದೆ. ಸ್ವಾಮೀಜಿಗಳು ಭಕ್ತರಿಗೆ ಮುದ್ರಾಧಾರಣೆ ಮಾಡುತ್ತಾರೆ. ಧಾರ್ಮಿಕ ಪರಿಷತ್ತಿನ ನಿರ್ಧಾರ ವಿಮರ್ಶೆ ಮಾಡಬೇಕು. ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಶಾಸಕನಾಗಿ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಮಾಧ್ವರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಅನಿಸಲ್ಲ
ಇನ್ನು ಮದ್ರಾಧಾರಣೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಯಾರು ಹೇಳಿಲ್ಲ. ಇದೊಂದು ಆಚರಣೆಯಾಗಿದೆ. ದೇವಸ್ಥಾನಕ್ಕೆ ಬಂದವರೆಲ್ಲಾ ಮುದ್ರಾಧಾರಣೆ ಮಾಡಿಸಿಕೊಳ್ಳಿ ಎಂದು ಹೇಳುವುದಿಲ್ಲ. ಮುದ್ರಾಧಾರಣೆ ಮಾಡಿಸಿಕೊಳ್ಳಲು ಬಯಸುವವರಿಗೆ ದೇವಸ್ಥಾನಗಳಲ್ಲಿ ಮಾಡಲಾಗುತ್ತದೆ. ಇದು ತಪ್ಪು ಅಭಿಪ್ರಾಯದಿಂದ ಆಗಿರುವ ಆದೇಶ. ತಕ್ಷಣ ಆದೇಶವನ್ನು ವಾಪಸ್ ಪಡೆಯಬೇಕು.
ಯಾವುದೋ ಒಂದು ಅರ್ಜಿ ಬಂದು ಚರ್ಚೆಯಾಗಿ ಈ ನಿರ್ಧಾರಕ್ಕೆ ಬಂದಿರಬಹುದು. ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಅಥವಾ ಮಾಧ್ವರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಬ್ರಾಹ್ಮಣರೆಲ್ಲ ಒಂದಾಗಿದ್ದೇವೆ ಯಾವುದೇ ಷಡ್ಯಂತ್ರ ಇಲ್ಲ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.