ಟೋಲ್ ವಿವಾದವನ್ನು ತುಳುನಾಡು v/s ಬಿಜೆಪಿ ಹೋರಾಟ ಎಂಬಂತೆ ಬಿಂಬಿಸುತ್ತಿದ್ದಾರೆ: ಭರತ್ ಶೆಟ್ಟಿ
ಮಂಗಳೂರು, ನವೆಂಬರ್ 16: ''ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒಂದು ವರ್ಷದ ಹಿಂದೆಯೇ ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆದಿದ್ದೇನೆ. ಇದೀಗ ಹೆಜಮಾಡಿ ಟೋಲ್ನೊಂದಿಗೆ ವಿಲೀನಗೊಳಿಸಿ ಸರಕಾರ ಆದೇಶಿಸಿದೆ. ಒಂದು ವಾರದಲ್ಲಿ ಜಿಲ್ಲಾಧಿಕಾರಿಯವರು ನೋಟಿಫಿಕೇಷನ್ ನೀಡಲಿದ್ದಾರೆ. ಬಳಿಕ ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ನೊಂದಿಗೆ ವಿಲೀನವಾಗಲಿದೆ. ಮರ್ಜ್ ದರವೂ ಆ ಬಳಿಕವೇ ತಿಳಿಯಲಿದೆ" ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದ್ದಾರೆ.
''ಸುರತ್ಕಲ್ ಟೋಲ್ ತೆರವಿಗೆ ಕೆಲವರು ಪ್ರಾಮಾಣಿಕ ಹೋರಾಟ ಮಾಡಿದ್ದಾರೆ. ಅಂದು ಟೋಲ್ ಆರಂಭಿಸಿದವರು ಇಂದು ಟೋಲ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಟೋಲ್ ಹೋರಾಟಗಾರರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಟೋಲ್ ಗೇಟ್ ವಿವಾದವನ್ನು ತುಳುನಾಡು v/s ಬಿಜೆಪಿ ಹೋರಾಟ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ ಹಿಂದುತ್ವಕ್ಕೂ ಟೋಲ್ ಹೋರಾಟಕ್ಕೂ ಏನು ಸಂಬಂಧವಿದೆ'' ಎಂದು ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.
Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು
ಹೆಜಮಾಡಿ, ಸುರತ್ಕಲ್ ಟೋಲ್ ಗೇಟ್ ನೋಟಿಫಿಕೇಶನ್ ಜೂನ್ 13, 2013ರಲ್ಲಿ ಆಗಿದೆ. 2015ರಿಂದ ಟೋಲ್ ಕಲೆಕ್ಷನ್ ಆರಂಭವಾಗಿದೆ. ಟೋಲ್ ಆರಂಭವಾದ 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಎಲ್ಲರಿಗೂ ಟೋಲ್ ನಿಲ್ಲಿಸಲು ಅವಕಾಶವಿತ್ತು. ಆದರೆ ಯಾರೂ ಅದಕ್ಕೆ ಪ್ರಯತ್ನ ಪಟ್ಟಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ದ.ಕನ್ನಡ ಒಳಗೆ ಟೋಲ್ ಪಾವತಿಸದೆ ವಾಹನ ಸಂಚಾರಕ್ಕೆ ಅವಕಾಶ
ಮಾತು ಮುಂದುವರಿಸಿದ ಅವರು, ಟೋಲ್ ವಿಲೀನದ ಬಳಿಕ ಹೆಜಮಾಡಿ ಟೋಲ್ನಿಂದ ಆಚೆಗೆ 20 ಕಿ.ಮೀ. ಹಾಗೂ ಈಚೆಗೆ 20ಕಿ.ಮೀ. ವ್ಯಾಪ್ತಿಯಲ್ಲಿ ತಿಂಗಳಿಗೆ 315 ರೂಪಾಯಿ ಟೋಲ್ ಪಾಸ್ ಮಾಡಿಕೊಂಡಲ್ಲಿ, ಎಷ್ಟು ಬಾರಿಯೂ ಹೋಗಿ ಬರುವ ಅವಕಾಶವಿದೆ. ಟೋಲ್ ವಿಲೀನದ ಬಳಿಕ KA19 ನಂಬರ್ನ ವಾಹನಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಒಳಗೆ ಟೋಲ್ ಪಾವತಿಸದೆ ವಾಹನ ಸಂಚಾರಕ್ಕೆ ಅವಕಾಶವಿದೆ. ಮೊದಲು ಮಂಗಳೂರಿನಿಂದ ಮುಕ್ಕದವರೆಗೆ ಟೋಲ್ ದರ ಪಾವತಿಸಬೇಕಿತ್ತು. ಆದರೆ ಈಗ ಅದಿಲ್ಲ. ಹೆಜಮಾಡಿಯಲ್ಲಿ ಟೋಲ್ ದರ ಡಬಲ್ ಆಗುವುದಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರು ಅಂಚೇ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು
ಬಿಜೆಪಿ ಸಂಸದರ, ಶಾಸಕರು ವಿರುದ್ಧ ಹೋರಾಟಗಾರರ ಕಿಡಿ
ಸುರತ್ಕಲ್ ಟೋಲ್ ಗೇಟ್ ರದ್ದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದರೂ ಕೂಡ ಟೋಲ್ ವಿರೋಧಿ ಹೋರಾಟ ಸಮಿತಿಯ ಅನಿರ್ಧಿಷ್ಟಾವಧಿ ಧರಣಿ ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ "ಏಳು ವರ್ಷಗಳ ಕಾಲ ನಿಯಮ ಬಾಹಿರ ಟೋಲ್ನಿಂದ ಕೇಂದ್ರಕ್ಕೆ ನೂರಾರು ಕೋಟಿ ರೂಪಾಯಿ ಸಂಗ್ರಹಕ್ಕೆ ಅವಕಾಶ ಒದಗಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಈಗ ತರಾತುರಿಯಲ್ಲಿ ಪ್ರಧಾನಿ, ಹೆದ್ದಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಟೋಲ್ ಗೇಟ್ ಮುಚ್ಚಿದರ ಹಿರಿಮೆ ತನ್ನದಾಗಿಸಿಕೊಳ್ಳುವ ಆಸಕ್ತಿ ಅಕ್ರಮ ಟೋಲ್ ಗೇಟ್ ಮುಚ್ಚುವುದರಲ್ಲಿ ಬಿಜೆಪಿ ಸಂಸದ ಹಾಗೂ ಶಾಸಕರುಗಳಿಗೆ ಇಲ್ಲ," ಎಂದು ಕಿಡಿಕಾರಿದರು.
ಹೆಜಮಾಡಿಯಲ್ಲಿ ದರ ಹೆಚ್ಚಿಸಿದರೆ ಹೋರಾಟ ಭುಗಿಲೇಳಲಿದೆ
ಇನ್ನು "ಅಧಿಸೂಚನೆ ಹೊರಟು ಮೂರು ದಿನ ಕಳೆದರೂ ಟೋಲ್ ಸಂಗ್ರಹ ಅಬಾಧಿತವಾಗಿ ನಡೆದಿದೆ. ಇದು ಬಿಜೆಪಿ ಮುಖಂಡತ್ವದ ನೈಜ ಮುಖ ಎಂದು ಆರೋಪಿಸಿದರು. ಟೋಲ್ ಕೇಂದ್ರ ಮುಚ್ಚದೆ ಹಗಲು ರಾತ್ರಿ ಧರಣಿ ಕೊನೆಗೊಳಿಸುವ ಪ್ರಶ್ನೆಯೇ ಇಲ್ಲ. ಅಧಿಸೂಚನೆ ಆಧಾರದಲ್ಲಿ ಜಿಲ್ಲಾಡಳಿತ ತಕ್ಷಣ ಟೋಲ್ ಸಂಗ್ರಹ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ವಿಲೀನದ ಹೆಸರಿನಲ್ಲಿ ಹೆಜಮಾಡಿಯ ನವಯುಗ್ ಟೋಲ್ ಪ್ಲಾಜಾದಲ್ಲಿ ಟೋಲ್ ದರವನ್ನು ವಿಪರೀತ ಹೆಚ್ಚಿಸಿ ಸುಲಿಗೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಅವಿಭಜಿತ ಜಿಲ್ಲೆಯಲ್ಲಿ ಜನರ ಹೋರಾಟ ಭುಗಿಲೇಳಲಿದೆ. ಅದಕ್ಕೆ ಬಿಜೆಪಿ ಶಾಸಕರುಗಳು ಅವಕಾಶ ಮಾಡಿಕೊಡ ಬಾರದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.
ಹೆಜಮಾಡಿ ಟೋಲ್ನಲ್ಲಿ ಸುಂಕ ಹೆಚ್ಚಳ ಮಾಡದಂತೆ ಆಗ್ರಹ
ಸುರತ್ಕಲ್ ಎನ್ಐಟಿಕೆ ಬಳಿ ಇರುವ ಟೋಲ್ಗೇಟ್ ಹೆಜಮಾಡಿ ಟೋಲ್ಗೇಟ್ ಜೊತೆ ವಿಲೀನ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಕೂಡ ಮಂಗಳವಾರ ಆರ್ಟಿಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಟೋಲ್ ವಿಲೀನ ಮಾಡುವುದರಿಂದ ಟ್ಯಾಕ್ಸಿ ಸೇರಿದಂತೆ ಸರಕು ಸಾಗಾಟದ ವಾಹನಗಳ ಚಾಲಕ ಮತ್ತು ಮಾಲಿಕರಿಗೆ ನಷ್ಟವುಂಟಾಗುತ್ತದೆ. ಮೊದಲೇ ಆರ್ಥಿಕವಾಗಿ ಜರ್ಜರಿತವಾಗಿರುವ ಸಂದರ್ಭದಲ್ಲಿ ಸರ್ಕಾರದ ಈ ನಿಯಮ ಬಡ ಜನರ ಮೇಲೆ ಬರೆ ಎಳೆದಂತೆ ಆಗಿದೆ. ಸರ್ಕಾರ ಹೆಜಮಾಡಿ ಟೋಲ್ನಲ್ಲಿ ಸುಂಕ ಹೆಚ್ಚಳ ಮಾಡಬಾರದು ಎಂದು ಅಸೋಸಿಯೇಷನ್ ಆಗ್ರಹಿಸಿದೆ.