ಮದುವೆಗೆ ಮುನ್ನ ಪರಾರಿಯಾಗಿದ್ದ ಮಂಗಳೂರು ಯುವತಿ ಮುಂಬೈನಲ್ಲಿ ಪತ್ತೆ
ಮಂಗಳೂರು, ಡಿಸೆಂಬರ್ 23: ಮದುವೆಗೆ ಎರಡು ದಿನ ಇರುವಾಗ ಪ್ರಿಯಕರನ ಜೊತೆ ಪರಾರಿಯಾಗಿದ್ದ ಮೂಡುಬಿದರೆಯ ಯುವತಿಯನ್ನು ಪೊಲೀಸರು ಮುಂಬೈಯಲ್ಲಿ ಪತ್ತೆ ಹಚ್ಚಿ, ಮಂಗಳೂರಿಗೆ ಕರೆತಂದಿದ್ದಾರೆ.
ಡಿಸೆಂಬರ್ 11ರಂದು ಹಸೆಮಣೆ ಏರಬೇಕಿದ್ದ ಯುವತಿ ಮನೆಯಿಂದ ಪರಾರಿಯಾಗಿ ಆತಂಕ ಸೃಷ್ಟಿಯಾಗಿತ್ತು. ಆಕೆಗೆ ಡಿ. 9ರಂದು ಮೆಹೆಂದಿ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕಾಗಿ ಮನೆಯಲ್ಲಿ ಎಲ್ಲ ಸಿದ್ಧತೆ ಸಹ ನಡೆಯುತ್ತಿತ್ತು. ಆದರೆ ಮೆಹೆಂದಿ ಕಾರ್ಯಕ್ರಮದ ಹಿಂದಿನ ರಾತ್ರಿ ಯುವತಿ ಮನೆಯವರಿಗೆ ಜ್ಯೂಸ್ ನಲ್ಲಿ ಅಮಲು ಪದಾರ್ಥ ನೀಡಿ, ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಪರಾರಿಯಾಗಿದ್ದಳು.
ಇದು ಲವ್ ಜಿಹಾದ್ ಪ್ರಕರಣವಾಗಿ ತಿರುವು ಪಡೆದಿತ್ತು. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಯುವತಿಯ ಪೋಷಕರಿಗೆ ಸಾಂತ್ವನ ಹೇಳಿದ್ದರು. ಈ ಮಧ್ಯೆ ಯುವತಿಯನ್ನು ಪೊಲೀಸರು ಪತ್ತೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.

ಮನೆಯಿಂದ ಪರಾರಿಯಾಗುವ ಸಂದರ್ಭದಲ್ಲಿ ಯುವತಿ 10 ಪವನ್ ಚಿನ್ನಾಭರಣ, ಪಾಸ್ಪೋರ್ಟ್, ಆಧಾರ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಕೊಂಡೊಯ್ದಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮೂಡುಬಿದರೆ ಹಾಗೂ ಪಣಂಬೂರು ಪೊಲೀಸರು ಆಕೆಯನ್ನು ಮುಂಬೈಯಲ್ಲಿ ಮತ್ತೊಂದು ಕೋಮಿನ ಯುವಕನೊಂದಿಗೆ ವಶಕ್ಕೆ ಪಡೆದಿದ್ದಾರೆ.
ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರನ್ನೂ ಮಂಗಳೂರಿಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ.












Click it and Unblock the Notifications