ಮಂಗಳೂರಿನ ಕಿನ್ಯದಲ್ಲಿ ಬಾಲಕನ ಅಪಹರಣಕ್ಕೆ ಯತ್ನ
ಮಂಗಳೂರು, ನವೆಂಬರ್. 19 : ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಇಬ್ಬರು ಯುವಕರಿಗೆ ಚೂರಿ ಇರಿದ ಬೆನ್ನಲ್ಲಿಯೇ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಶಾಲಾ ಬಾಲಕನನ್ನು ಅಪಹರಿಸಲು ಯತ್ನಿಸಿದ ಘಟನೆ ಕೊಣಾಜೆಯ ನಾಟೆಕಲ್ ಸಮೀಪದ ಕಿನ್ಯದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ದೇರಳಕಟ್ಟೆ ನೇತಾಜಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ನಾಟೆಕಲ್ ಸಂಕೇಶದ ಮುಹಮ್ಮದ್ ಸಹದ್(12) ಎನ್ನುವ ವಿದ್ಯಾರ್ಥಿಯನ್ನು ಕಪ್ಪು ಬಣ್ಣದ ಓಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿನ್ಯ ಗ್ರಾಪಂ ಕಚೇರಿ ಎದುರು ತಡೆದು ಬಾಯಿಗೆ ಬಟ್ಟೆ ಕಟ್ಟಿ ಕಾರಿನೊಳಗೆ ತಳ್ಳಿ ಅಪಹರಿಸಲು ಯತ್ನಿಸಿದ್ದಾರೆ. [ಮಂಗಳೂರಿನಲ್ಲಿ ಚೂರಿ ಇರಿತ, ಇಬ್ಬರಿಗೆ ಗಾಯ]
ಅಷ್ಟರಲ್ಲಿ ದೂರದಲ್ಲಿ ಬೈಕೊಂದು ಬರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಲಕನ ಕೈಗೆ ಬ್ಲೇಡ್ನಿಂದ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಗಾಯಾಳು ಬಾಲಕನನ್ನು ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ನ.14ರಂದು ಕೂಡ ಮಂಜನಾಡಿಯಲ್ಲಿ ಮದ್ರಸ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಲಾಗಿತ್ತು.
ಅದಕ್ಕೂ ಮೊದಲು ಇದೇ ಪರಿಸರದಲ್ಲಿ ಇಬ್ಬರು ಯುವಕರ ಮೇಲೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕೂಡ ನಡೆದಿತ್ತು. ಆದರೆ, ಪೊಲೀಸರು ಮಾತ್ರ ಇನ್ನೂ ಯಾವ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.
ಇನ್ನೂ ಸ್ಥಳೀಯರು ಮನೆಯ ಹೊರಗೆ ತಮ್ಮ ಮಕ್ಕಳನ್ನು ಕಳುಹಿಸಲು ಆತಂಕಕ್ಕೊಳಗಾಗಿದ್ದಾರೆ. ಪೊಲೀಸ್ ಇಲಾಖೆ ಬಿಗಿ ಭದ್ರತೆ ನೀಡಿದ್ದರೂ ಕೂಡ ಇಂತಹ ಆಘಾತಕಾರಿ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಸ್ಥಳೀಯರು ಭಯದಿಂದ ಹೊಡಾಡುವ ಪರಿಸ್ಥಿತಿ ಉಧ್ಭವಗೊಂಡಿದೆ.