ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಮೇಲೆ ದಾಳಿಗೆ ಯತ್ನ?
ಮಂಗಳೂರು, ಮಾರ್ಚ್. 16 : ಮಂಗಳೂರಿನಲ್ಲಿ ವಿಚಾರವಾದಿ, ಪ್ರಗತಿಪರ ಹೋರಾಟಗಾರ ನರೇಂದ್ರ ನಾಯಕ್ ಅವರ ಮೇಲೆ ದಾಳಿಗೆ ಯತ್ನ ನಡೆದಿದೆ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ನರೇಂದ್ರ ನಾಯಕ್ ಅವರು ನಗರದ ಲಾಲ್ ಬಾಗ್ ಕಡೆಯಿಂದ ಲೇಡಿಹಿಲ್ ಕಡೆಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿ ದಾಳಿಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ.
ಮನೆಯಿಂದ ಬರುವ ವೇಳೆಗೆ ಕಾರಿನ ಟಯರ್ ಸರಿಯಾಗಿಯೇ ಇರುವುದನ್ನು ಗಮನಿಸಿದ್ದ ನಾಯಕ್ ಅವರು ಅನುಮಾನಗೊಂಡು ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.
ನಾಯಕ್ ಮೇಲೆ ದಾಳಿ ನಡೆಸಲು ಬಂದವರು ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಆರೋಪಿಗಳು ಎನ್ನುವ ಸಂಶಯ ವ್ಯಕ್ತವಾಗಿದೆ.
ಮೃತ ವಿನಾಯಕ ಬಾಳಿಗಾ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಹೋರಾಟ ನಡೆಸುತ್ತಿರುವ ನರೇಂದ್ರ ನಾಯಕ್ ಅವರಿಗೆ ಕೊಲೆ ಬೆದರಿಕೆ ಇದೆ. ಈ ಹಿನ್ನಲೆಯಲ್ಲಿ ನರೇಂದ್ರ ನಾಯಕ್ ಅವರಿಗೆ ಗನ್ ಮ್ಯಾನ್ ನೀಡಲಾಗಿತ್ತು.
ಬುಧವಾರ ಬೆಳಗ್ಗೆ ಗನ್ ಮ್ಯಾನ್ ಇಲ್ಲದೆ ಇರೋದನ್ನು ಗಮನಿಸಿರುವ ದುಷ್ಕರ್ಮಿಗಳು ದಾಳಿ ನಡೆಸಲು ಹೊಂಚು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.