ಮಣ್ಣಿನಡಿಯಿಂದ ಹುಟ್ಟಿ ಬಂದ ಭೂತ ಸಂಪಿಗೆ ಮರ: ಇದು ನುಡಿದಂತೆ ನಡೆದ ಕೊರಗಜ್ಜನ ಪವಾಡ
ಮಂಗಳೂರು, ಡಿಸೆಂಬರ್ 27: ಪರಶುರಾಮನ ಸೃಷ್ಟಿ ತುಳುನಾಡು ದೈವ-ದೇವರ ನಾಡು, ಜೊತೆಗೆ ಪವಾಡಗಳ ಕ್ಷೇತ್ರ ಕೂಡ ಆಗಿದೆ. ತುಳುನಾಡಿನಲ್ಲಿ ಅತೀ ಹೆಚ್ಚು ಜನ ಪೂಜಿಸುವ ದೈವಗಳಲ್ಲಿ ಕೊರಗಜ್ಜ ದೈವವೂ ಒಂದು.
ಕಳೆದುಹೋದ ಯಾವುದಾದರೂ ವಸ್ತುವನ್ನು ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮೊದಲ ತುಳುನಾಡಿನ ಜನ ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ. ಅಜ್ಜನನ್ನು ನಂಬಿದರೆ ಆತ ಎಂದಿಗೂ ಕೈ ಬಿಡಲ್ಲ ಅನ್ನೋದು ಭಕ್ತರ ಅಚಲವಾದ ನಂಬಿಕೆ.

ಹಲವು ಬಾರಿ ಕೊರಗಜ್ಜ ತನ್ನ ಇರುವಿಕೆಯನ್ನು ಪ್ರಕಟಿಸಿ ಉದಾಹರಣೆಗಳು ನಮ್ಮ ಮುಂದಿದ್ದು, ಇಂಥಹದ್ದೇ ಪವಾಡವೊಂದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲಿರುವ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನಡೆದಿದೆ. ಈ ದೈವಸ್ಥಾನದಲ್ಲಿ ಕಳೆದ ಮೂರು ವರ್ಷದ ಹಿಂದೆ ಕ್ಷೇತ್ರದ ಪುನಃ ಪ್ರತಿಷ್ಠಾ ಕಲಶೋತ್ಸವ ನಡೆದು ನೇಮೋತ್ಸವ ನಡೆದಿತ್ತು.
ಕೊರಗಜ್ಜನ ನೇಮೋತ್ಸವದ ದಿನ, ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ) ನೆಡುವ ಬಗ್ಗೆ ಕೊರಗಜ್ಜ ದೈವ ಇಲ್ಲಿಯ ಆಡಳಿತ ಸಮಿತಿಯವರಲ್ಲಿ ಕೇಳಿದಾಗ, "ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ) ಕಟ್ಟೆಯ ಪಕ್ಕ ನೆಟ್ಟು ಬೆಳೆಸಿದರೆ, ಅಜ್ಜನ ಕಟ್ಟೆಗೆ ಮರದ ಬೇರು ಹೋಗಿ ಬಿರುಕು ತೊಂದರೆ ಆಗಬಹುದು. ಹಾಗಾಗಿ ನಾವು ನೆಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಕೊರಗಜ್ಜ "ನಾನೇ ನನಗೆ ಬೇಕಾದ ಹಾಲು ಬರುವ ಮರವನ್ನು, ನನ್ನ ಕಟ್ಟೆಗೆ ಒಡಕು ಬಾರದ ಹಾಗೆ, ಹುಟ್ಟಿಸಿದರೆ ನಿಮಗೆ ಸಂತೋಷನಾ?" ಎಂದು ಕೇಳಿದ್ದಾರೆ. ದೈವದ ಮಾತನ್ನು ಎಲ್ಲರೂ ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಇದೀಗ ಪ್ರತಿಷ್ಠೆ ನಡೆದು 3 ವರ್ಷ ಆಗುತ್ತಿದ್ದು, 3 ನೇ ವರ್ಷದ ನೇಮೋತ್ಸವಕ್ಕೆ ದೈವಸ್ಥಾನ ವಠಾರವನ್ನು ಸ್ವಚ್ಛ ಮಾಡುವಾಗ ಕೆಲಸ ಸಾಗುತ್ತಿದೆ.
ಆ ಸಂದರ್ಭದಲ್ಲಿ ಕೊರಗಜ್ಜನ ಕಟ್ಟೆಯ ಹಿಂಭಾಗದಲ್ಲಿ ದೈವಸ್ಥಾನದ ಮಾಜಿ ಅಧ್ಯಕ್ಷ ತೇಜೇಶ್ ಹಾಗೂ ದೈವಸ್ಥಾನದ ಪೂಜಾರಿ ಈಶ್ವರ ಕಡೆಪಾಲ ಸ್ವಚ್ಛಗೊಳಿಸುತ್ತಿದ್ದಾಗ ಹುಲ್ಲಿನ ನಡುವೆ ಸ್ವಾಮಿ ಕೊರಗಜ್ಜ ಹೇಳಿದ "ಭೂತ ಸಂಪಿಗೆ ಮರದ ಗಿಡ ಮಣ್ಣಿನಡಿಯಿಂದ ಹುಟ್ಟಿ ಬಂದಿರೋದು ಕಂಡಿದೆ. ಪ್ರತಿಷ್ಠೆ ನಡೆದು 2 ವರ್ಷ ಮುಗಿದು, 3ನೇ ವರ್ಷದ ನೇಮೋತ್ಸವಕ್ಕೆ ತಯಾರಾಗುತ್ತಿರುವಾಗಲೇ, ಕೊರಗಜ್ಜ ದೈವ ಅಂದು ದೈವ ನರ್ತನದಂದು ನುಡಿದ ಅಭಯದ ನುಡಿಯಂತೆ 2 ವರ್ಷದ ಬಳಿಕ, ಕಟ್ಟೆಯ ಪಕ್ಕದಲ್ಲಿಯೇ, ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ )ಹುಟ್ಟಿಸಿ ಪವಾಡವನ್ನೇ ಮಾಡಿದ್ದಾರೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.












Click it and Unblock the Notifications