ಬಿಜೆಪಿಯ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ:ಯುಟಿ ಖಾದರ್
ಮಂಗಳೂರು, ಫೆಬ್ರವರಿ 04: ಹಿಂದೂ ಮಹಾಸಭಾದಿಂದ ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡಿಕ್ಕಿ ವಿಕೃತಿ ಮೆರೆದು ಅವಮಾನಿಸಿದ ವಿಚಾರದ ಕುರಿತು ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ಒಂದ್ಕಡೆ ಗಾಂಧೀಜಿಗೆ ನಮನ ಸಲ್ಲಿಸುತ್ತಾರೆ. ಆದರೆ ಇನ್ನೊಂದೆಡೆ ಬಿಜೆಪಿಯದ್ದೇ ಅಂಗಸಂಸ್ಥೆ ಹಿಂದೂ ಮಾಹಾಸಭಾ ಮುಖಂಡರು ಗಾಂಧೀಜಿ ಪ್ರತಿಕೃತಿಗೆ ಶೂಟ್ ಮಾಡುತ್ತಾರೆ. ಇಂಥ ದೇಶದ್ರೋಹಿಗಳನ್ನು ಸರಕಾರ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಆಪರೇಷನ್ ಕಮಲದ ಕುರಿತು ಪ್ರತಿಕ್ರಯಿಸಿದ ಅವರು, ನಮಗೆ ಯಾವುದೇ ಆಪರೇಷನ್ ಭೀತಿ ಇಲ್ಲ . ಎಂಟು ತಿಂಗಳಿಂದ ಅವರು ಅಂಥ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲ ವಿಫಲವಾಗಿವೆ. ಮೈತ್ರಿ ಸರ್ಕಾರ ಐದು ವರ್ಷ ಪೂರ್ತಿ ಅಧಿಕಾರದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಪತ್ತೆಯಾದವರು ಕಾಂಗ್ರೆಸ್ ನ ಹಿರಿಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ನಮಗೆ ಯಾವುದೇ ಸಮಸ್ಯೆ ಇಲ್ಲ. ಜೊತೆಗೆ ಬಿಜೆಪಿಯ ಶಾಸಕರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಯಾರ್ಯಾರು ಇದ್ದಾರೆ ಅನ್ನುವುದನ್ನು ಈಗ ಹೇಳೋಕೆ ಆಗಲ್ಲ ಎಂದು ಯುಟಿ ಖಾದರ್ ಮಾರ್ಮಿಕವಾಗಿ ನುಡಿದರು.











Click it and Unblock the Notifications