ಪ್ರಮೋದ್ ಮಧ್ವರಾಜ್ ಬಿಜೆಪಿಗೆ, ಕಟೀಲ್ ಕೊಟ್ಟ ಸುಳಿವು!
Recommended Video

ಮಂಗಳೂರು, ನವೆಂಬರ್ 16 : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಲಿದ್ದಾರೆ?. ಹಲವು ದಿನಗಳ ಹಿಂದೆ ಹಬ್ಬಿದ್ದ ಈ ಸುದ್ದಿಗೆ ಮತ್ತೆ ಜೀವ ಬಂದಿದೆ. ಸಂಸದ ನಳೀನ್ ಕುಮಾರ್ ಕಟೀಲ್ ಈ ಕುರಿತು ಸುಳಿವು ಕೊಟ್ಟಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ಸಹಕಾರ ಸಪ್ತಾಹದ ಬಹಿರಂಗ ಸಭೆ ನಡೆಯಿತು. ಸಚಿವರಾದ ಪ್ರಮೋದ್ ಮಧ್ವರಾಜ್, ರಮಾನಾಥ ರೈ, ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರು ಭಾಷಣ ಮಾಡುವಾಗ, 'ಇನ್ನು ಕೆಲವೇ ದಿನಗಳಲ್ಲಿ ನೀವು (ಪ್ರಮೋದ್ ಮಧ್ವರಾಜ್) ನಮ್ಮೊಟ್ಟಿಗೆ ಬರಲಿದ್ದೀರಿ' ಎಂದು ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿದ್ದರು. ನಂತರ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.....

ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು?
ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, 'ಸಹಕಾರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇಷ್ಟೊಂದು ಪ್ರಗತಿ ಸಾಧಿಸಲು ಉಡುಪಿ ಜಿಲ್ಲೆಯ ಪಾತ್ರವೂ ಹೆಚ್ಚಿದೆ' ಎಂದು ಪ್ರಮೋದ್ ಮಧ್ವರಾಜ್ ಅವರಿಗೆ ಹೇಳಿದರು.

ನಮ್ಮೊಟ್ಟಿಗೆ ಬರಲಿದ್ದೀರಿ
'ಇನ್ನು ಕೆಲವೇ ದಿನಗಳಲ್ಲಿ ನೀವು (ಪ್ರಮೋದ್ ಮಧ್ವರಾಜ್) ನಮ್ಮೊಟ್ಟಿಗೆ ಬರಲಿದ್ದೀರಿ. ಸಹಕಾರ ಕ್ಷೇತ್ರಕ್ಕೆ ನೀಡಿರುವ ಸಹಕಾರ ನಮಗೂ ನೀಡಿ' ಎಂದು ಹೇಳುವ ಮೂಲಕ ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದರು.

ಉಭಯ ನಾಯಕರ ಹಸ್ತಲಾಘವ
ಮಾತು ಮುಗಿಸಿ ಆಸೀನರಾದ ನಳೀನ್ ಕುಮಾರ್ ಕಟೀಲ್ ಜೊತೆ ಸಚಿವ ಪ್ರಮೋದ್ ಮಧ್ವರಾಜ್ ಹಸ್ತಲಾಘವ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಳೀನ್ ಸ್ವಾಗತಿಸಿದ ಮಧ್ವರಾಜ್
ಸಚಿವ ಪ್ರಮೋದ್ ಮಧ್ವರಾಜ್ ಅವರು ಸಭೆಯಲ್ಲಿ ಮಾತನಾಡುತ್ತಿರುವಾಗಲೇ ನಳೀನ್ ಕುಮಾರ್ ಕಟೀಲ್ ಆಗಮಿಸಿದರು. ತಮ್ಮ ಭಾಷಣ ನಿಲ್ಲಿಸಿದ ಪ್ರಮೋದ್ ಮಧ್ವರಾಜ್ ಅವರು ಸಂಸದರನ್ನು ಸ್ವಾಗತಿಸಿದರು.

ಅಕ್ಟೋಬರ್ 16ರಂದು ಭೇಟಿ
ಅಕ್ಟೋಬರ್ 16ರಂದು ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿದ್ದರು. ನಂತರ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

'ಬಿಜೆಪಿ ಸೇರುತ್ತಿಲ್ಲ' ಎಂದು ಹೇಳಿದ್ದರು
'ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿ ಸುಳ್ಳು. ಪಕ್ಷಾಂತರ ಮಾಡುತ್ತಿಲ್ಲ, ಉಡುಪಿಯ ಐಬಿಗೆ ಅನಂತ್ ಕುಮಾರ್ ಭೇಟಿ ಮಾಡಲು ಹೋಗಿರಲಿಲ್ಲ. ಅಲ್ಲಿಗೆ ಹೋದಾಗ ಅನಂತ್ ಕುಮಾರ್ ಅವರನ್ನು ಭೇಟಿ ಮಾಡಿದೆ' ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ಕೊಟ್ಟಿದ್ದರು.












Click it and Unblock the Notifications