ಮಂಗಳೂರು : ಯುವಕನ ಮೇಲೆ ಪೊಲೀಸರ ದೌರ್ಜನ್ಯ?
ಮಂಗಳೂರು, ಏಪ್ರಿಲ್ 25 : ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಯುವಕನ ಮೇಲೆ ಕಾವೂರು ಪೊಲೀಸ್ ನಿರೀಕ್ಷಕರು ಮತ್ತು ಸಿಸಿಬಿ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಯುವಕನನ್ನು ಕಾವೂರು ಶಾಂತಿನಗರ ನಿವಾಸಿ ಮಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಕ್ಬಾಲ್ ಕೈ ಮೂಳೆ ಮುರಿದಿದ್ದು, ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [ಸಿಸಿಬಿ ಪೊಲೀಸರನ್ನೇ ಅರೆಸ್ಟ್ ಮಾಡಿದ ಚೆನ್ನೈ ಪೊಲೀಸರು!]

ಘಟನೆ ವಿವರ : ಕಾವೂರು ಠಾಣೆಯಲ್ಲಿ ದಾಖಲಾಗಿರುವ ಕೊಲೆಗೆ ಸಂಚು ಪ್ರಕರಣದಲ್ಲಿ ಇಕ್ಬಾಲ್ನನ್ನು ಓರ್ವ ಆರೋಪಿ ಎಂದು ಪರಿಗಣಿಸಲಾಗಿದೆ. ತನ್ನನ್ನು ಪೊಲೀಸರು ಹುಡುಕುತ್ತಿರುವ ಬಗ್ಗೆ ಮಾಹಿತಿ ಪಡೆದ ಇಕ್ಬಾಲ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. [ಮಂಗಳೂರು ನಗರದ ರಸ್ತೆ ಮೇಲೆ ಸಿಸಿಟಿವಿ ಕಣ್ಗಾವಲು]
ಇಕ್ಬಾಲ್ಗೆ ನಿರೀಕ್ಷಣಾ ಜಾಮೀನು ಸಿಕ್ಕಿತ್ತು. ಅದನ್ನು ಕಾವೂರು ಠಾಣಾ ನಿರೀಕ್ಷಕರಿಗೆ ನೀಡಲು ಏಪ್ರಿಲ್ 19ರಂದು ಮಧ್ಯಾಹ್ನ ಠಾಣೆಗೆ ತೆರಳಿದ್ದರು. ವಿಚಾರಣೆ ನಡೆಸಿದ ನಂತರ ಪೊಲೀಸ್ ನಿರೀಕ್ಷಕ ನಟರಾಜ್, ತನ್ನನ್ನು ಅರೆನಗ್ನಗೊಳಿಸಿ ಸಂಜೆ 6ರವರೆಗೆ ಸೆಲ್ನಲ್ಲಿ ಕೂರಿಸಿದ್ದಾರೆ ಎಂದು ಇಕ್ಬಾಲ್ ಆರೋಪಿಸಿದ್ದಾರೆ.
ನಂತರ ನಟರಾಜ್ ಅವರು ಇಕ್ಬಾಲ್ನನ್ನು ಇಬ್ಬರು ಸಿಬ್ಬಂದಿ ಜೊತೆಗೆ ಸರ್ಕಾರಿ ವಾಹನದಲ್ಲಿ ಸಿಸಿಬಿ ಠಾಣೆಗೆ ಕಳುಹಿಸಿದರು. ಅಲ್ಲಿಯೂ ಆತನನ್ನು ಅರೆನಗ್ನಗೊಳಿಸಿದ್ದರು. ಸಿಸಿಬಿ ನಿರೀಕ್ಷಕರಾದ ವೆಲೆಂಟೈನ್ ಡಿಸೋಜಾ, ಸಿಸಿಬಿ ಸಿಬ್ಬಂದಿ ಸುನೀಲ್, ಇಶಾಕ್, ಚಂದ್ರಹಾಸ ಮತ್ತು ಇತರ 5 ಮಂದಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಕ್ಬಾಲ್ ದೂರಿದ್ದಾರೆ.
ಈ ಪ್ರಕರಣವು ಪೊಲೀಸ್ ದೌರ್ಜನ್ಯದ ಪ್ರಕರಣವಾಗಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಕ್ಬಾಲ್ ಮನವಿ ಮಾಡಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈದ್ಯರ ನಿರ್ಲಕ್ಷ್ಯ ಮಗು ಬಲಿ?: ಒಂದೂವರೆ ವರ್ಷದ ಮಗು ವೈದ್ಯರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿದೆ ಎಂದು ಆರೋಪಿಸಿ ಸಾರ್ವಜನಿಕರು ನಗರದ ಯುನಿಟಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ಜೋಕಟ್ಟೆ ನಿವಾಸಿಗಳಾದ ಶಕೀರ್ ಹಾಗೂ ಸಜರಾ ದಂಪತಿಯ ಮಗು ಶೈಮ್ಗೆ ಭಾನುವಾರ ಬೆಳಗ್ಗೆ ಮನೆಯ ಮೆಟ್ಟಿಲಿನಿಂದ ಬಿದ್ದು ಸಣ್ಣ ಪೆಟ್ಟಾಗಿತ್ತು. ಮಗುವಿನ ಅಜ್ಜ ತಕ್ಷಣ ಮಗುವನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದರು.

ಬೆಳಗ್ಗೆಯಿಂದಲೇ ಸುಮಾರು 8 ಸಾವಿರ ರೂ. ಔಷಧಿಗಳನ್ನು ವೈದ್ಯರು ತರಿಸಿಕೊಂಡಿದ್ದಾರೆ. ಆದರೆ, ಯಾವುದನ್ನೂ ಮಗುವಿಗೆ ಸರಿಯಾಗಿ ನೀಡಿರಲಿಲ್ಲ. ಇದರಿಂದ ಸಂಜೆ ಮಗು ಮೃತಪಟ್ಟಿದೆ ಎಂದು ಪೋಷರು ಆರೋಪಿಸಿದ್ದಾರೆ.












Click it and Unblock the Notifications