ಮಂಗಳೂರು ದಕ್ಷಿಣ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದ ಆ 'ದೆಹಲಿ ಕರೆ'
ಈ ಬಾರಿ ಕಪ್ ನಮ್ಮದೇ ಎನ್ನುವ ಅದಮ್ಯ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಉಭಯ ಸಂಕಟ ಎದುರಾಗುತ್ತಿದೆ. ಪಕ್ಷದ ನಿಷ್ಟಾವಂತ ಮುಖಂಡರಾಗಿದ್ದರೂ ಕೂಡಾ ಗೆಲ್ಲುವ ವರ್ಚಸ್ಸು ಕಮ್ಮಿ ಇದ್ದ ಪಕ್ಷದಲ್ಲಿ ಹೊಸ ಮುಖಕ್ಕೆ ಮಣೆಹಾಕುವ ಅನಿವಾರ್ಯತೆ ಎದುರಾಗಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ 124 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕ್ಷೇತ್ರಗಳೂ ಸೇರಿವೆ. ಆದರೆ, ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿವೆ. ಅವೆಂದರೆ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಪುತ್ತೂರು ಕ್ಷೇತ್ರಗಳು. ಒಂದೋ ಈ ಕ್ಷೇತ್ರದಲ್ಲಿ ಟಿಕೆಟಿನ ಡಿಮಾಂಡ್ ಜೋರಾಗಿದೆ, ಇನ್ನೊಂದೋ ಪಕ್ಷಕ್ಕೆ ಹಿನ್ನಡೆಯಾಗುವ ಗ್ರೌಂಡ್ ರಿಪೋರ್ಟ್.

ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೆ ಯು.ಟಿ.ಖಾದರ್ ಅವರ ಹೆಸರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿಯಾಗಿದೆ. ಇನ್ನು, ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ ಎನ್ನುವುದು ಒಂದು ಕಡೆಯಾದರೆ, ಬಿಜೆಪಿಯನ್ನು ಎದುರಿಸಲು ಸಮರ್ಥ, ಯುವ ಅಥವಾ ಹೊಸ ಮುಖದ ಅವಶ್ಯಕತೆಯಿದೆ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಎಂದು ಹೇಳಲಾಗುತ್ತಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಯಾರಿಗೆ ಟಿಕೆಟ್ ಎನ್ನುವ ವಿಚಾರದಲ್ಲಿ ಹತ್ತು ಹಲವು ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಜೆಪಿಗೆ ಈ ವಿಚಾರದಲ್ಲಿ ಗೊಂದಲ ಇಲ್ಲದೇ ಇರುವುದು ಕಾಂಗ್ರೆಸ್ಸಿಗೆ ಆಗುತ್ತಿರುವ ಹಿನ್ನಡೆ. ಈ ಕ್ಷೇತ್ರದಿಂದ ಎಂಟು ಜನರು ತಮ್ಮ ಉಮೇದುವಾರಿಕೆ ಅರ್ಜಿಯನ್ನು ಸಲ್ಲಿಸಿರುವುದು ಕಾಂಗ್ರೆಸ್ಸಿಗಿರುವ ದೊಡ್ಡ ತಲೆನೋವು.
ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಜೆ.ಆರ್.ಲೋಬೋ, ವಿಧಾನಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಯುವ ಘಟಕದ ಅಧ್ಯಕ್ಷ ಆಶಿಶ್ ಪಿರೇರ ರೇಸಿನಲ್ಲಿರುವ ಪ್ರಮುಖರು ಎಂದೇ ಚರ್ಚೆಯಾಗುತ್ತಿತ್ತು. ಆದರೆ, ಬಿಲ್ಲವ ಸಮುದಾಯದ ಯುವ ನಾಯಕ ಮತ್ತು ವೃತ್ತಿಯಲ್ಲಿ ನ್ಯಾಯವಾದಿಯೂ ಆಗಿರುವ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಕಳುಹಿಸಿರುವುದು ಈಗಿನ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಹೊಡೆಯುವಂತೆ ಮಾಡಿದೆ.

ಗುರು ಬೆಳದಿಂಗಳು ಫೌಂಡೇಶನ್ ಸಂಸ್ಥಾಪಕ, ಬಿಲ್ಲವ ಸಮುದಾಯದ ಪದ್ಮರಾಜ್ ರಾಮಯ್ಯ ಅವರು ಬಿಜೆಪಿ ಸರಕಾರದ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ (ಕ್ರಿಶ್ಚಿಯನ್) ಮತವು ನಿರ್ಣಾಯಕ ಪಾತ್ರ ವಹಿಸುತ್ತದೆಯಾದರೂ, ಬಿಲ್ಲವ ಸಮುದಾಯ ಕೂಡಾ ಹೆಚ್ಚಿನ ಮತಬ್ಯಾಂಕ್ ಅನ್ನು ಹೊಂದಿದೆ.
ಟಿಕೆಟಿಗಾಗಿ ಕೆಪಿಸಿಸಿಗೆ ಪದ್ಮರಾಜ್ ಅರ್ಜಿ ಸಲ್ಲಿಸಲಿಲ್ಲ
ಪದ್ಮರಾಜ್ ಅವರು ಟಿಕೆಟಿಗಾಗಿ ಕೆಪಿಸಿಸಿಗೆ ಅರ್ಜಿಯನ್ನು ಸಲ್ಲಿಸಲಿಲ್ಲ. ಆದರೂ, ಭಾನುವಾರ (ಏ 2) ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದಾರೆ. ಮೊದಲ ಪ್ರಯತ್ನದಲ್ಲೇ ಜಯವನ್ನು ಕಂಡಿರುವ ಹಾಲೀ ಶಾಸಕ ವೇದವ್ಯಾಸ ಕಾಮತ್ ಕ್ಷೇತ್ರದಲ್ಲಿ ತಮ್ಮ ಕೆಲಸದ ಮೂಲಕ ಜನಪ್ರಿಯರಾಗಿದ್ದಾರೆ. ಅವರಿಗೆ ಸರಿಯಾದ ಪೈಪೋಟಿ ನೀಡಲು ಪದ್ಮರಾಜ್ ಅವರೇ ಸೂಕ್ತ ಎನ್ನುವ ಕಾರ್ಯಕರ್ತರ ಅಭಿಪ್ರಾಯದ ಧ್ವನಿಗೆ ಹೈಕಮಾಂಡ್ ಧ್ವನಿಗೂಡಿಸುವ ಸಾಧ್ಯತೆಯಿಲ್ಲದಿಲ್ಲ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರ
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯ ಪ್ರಾಮುಖ್ಯತೆಯನ್ನು ಹೊಂದಿದೆ. ಈಗಾಗಲೇ, ಬೆಳ್ತಂಗಡಿಯಿಂದ ಇದೇ ಸಮುದಾಯದ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ಘೋಷಿಸಿದೆ. ಇನ್ನು, ಮಂಗಳೂರು ದಕ್ಷಿಣದಿಂದಲೂ ಟಿಕೆಟ್ ನೀಡಿದರೆ ಜಾತಿ ಲೆಕ್ಕಾಚಾರ ಬ್ಯಾಲನ್ಸ್ ಮಾಡಿದ ಹಾಗಾಗುತ್ತದೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರವಾದರೂ ಆಗಬಹುದು.
ಬಿಜೆಪಿಯಿಂದ ಬಿಲ್ಲವರಿಗೆ ಆಗುತ್ತಿರುವ ಅನ್ಯಾಯ
ಕಣಕ್ಕಿಳಿಯುವ ವಿಚಾರದಲ್ಲಿ ಪದ್ಮರಾಜ್ ಅವರ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ. ಬಿಜೆಪಿಯಿಂದ ಬಿಲ್ಲವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನಂತೂ ಪದ್ಮರಾಜ್ ಮಾಡುತ್ತಿದ್ದಾರೆ. ಆದರೆ, ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಐವಾನ್ ಡಿಸೋಜ ಅವರು ಸಿದ್ದರಾಮಯ್ಯನವರಿಗೆ ಆಪ್ತರಾಗಿರುವುದರಿಂದ ಮಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲ ಮುಂದುವರಿದೆ.












Click it and Unblock the Notifications