ಮಂಗಳೂರು; ದೇವಸ್ಥಾನದ ಒಳಗಡೆ ಶರ್ಟ್ ತೆಗೆದು ಹೋಗುವುದರಿಂದ ಚರ್ಮ ರೋಗ ಹರಡುತ್ತದೆ; ಶಶಿಧರ್ ಶೆಟ್ಟಿ
ಮಂಗಳೂರು, ಸೆಪ್ಟೆಂಬರ್, 23: ದೇವಸ್ಥಾನದ ಒಳಗೆ ಜನರು ಶರ್ಟ್ ತೆಗೆದು ಹೋಗುವ ಪದ್ಧತಿಗೆ ವಿರೋಧ ಕೇಳಿಬಂದಿದೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಅವರು ಈ ಬಗ್ಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
"ಶರ್ಟ್, ಬನಿಯನ್ ತೆಗೆದು ದೇವಸ್ಥಾನದ ಒಳಗೆ ಹೋಗಬೇಕು ಎನ್ನುವುದು ಅವೈಜ್ಞಾನಿಕ ಪದ್ಧತಿ ಆಗಿದೆ. ಈ ಕುರಿತು ಹಿಂದೂ ಧರ್ಮದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಅವಾಸ್ತವಿಕ ಮತ್ತು ಅನಗತ್ಯ ಪದ್ಧತಿಯನ್ನು ಭಕ್ತರ ಮೇಲೆ ಹೇರಲಾಗುತ್ತಿದೆ. ಶರ್ಟ್ ತೆಗೆದು ಒಳಗೆ ಹೋಗುದರಿಂದ ಒಬ್ಬರ ಮೈ ಇನ್ನೊಬ್ಬರಿಗೆ ತಾಗಿ ಚರ್ಮ ರೋಗ ಬರುತ್ತದೆ. ಅಂಗವಿಕಲರಿಗೆ ಈ ಪದ್ಧತಿಯಿಂದ ಮುಜುಗರವಾಗುತ್ತದೆ. ದೇವಸ್ಥಾನಗಳಲ್ಲಿ ಈ ಕುರಿತು ಹಾಕಿರುವ ಬೋರ್ಡ್ ತೆರವು ಮಾಡಬೇಕು," ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಆಗ್ರಹಿಸಿದ್ದಾರೆ.
ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯಡಿ ಬರುವ ಕೆಲವೊಂದು ದೇವಸ್ಥಾನಗಳಲ್ಲಿ ಭಕ್ತರು ಶರ್ಟ್, ಬನಿಯನ್ ತೆಗೆದು ಒಳಗೆ ಬಿಡುತ್ತಿದ್ದಾರೆ. ಹೀಗೆ ಅವೈಜ್ಞಾನಿಕ ಪದ್ಧತಿ ಅನುಸರಿಸಲಾಗುತ್ತಿದ್ದು,ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ತಡೆ ಹಾಕಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ.

"ಅನಗತ್ಯ ಪದ್ಧತಿಯಿಂದ ಗೊಂದಲ ಸೃಷ್ಟಿ"
ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದ ಒಕ್ಕೂಟ, ಹಿಂದೂ ಧರ್ಮ ಗ್ರಂಥಗಳಲ್ಲಿ ಈ ಕುರಿತು ಉಲ್ಲೇಖಗಳಿಲ್ಲ. ಇಲಾಖೆಯೂ ಈ ರೀತಿಯ ಆದೇಶ ಹೊರಡಿಸಿಲ್ಲ. ಅವಾಸ್ತವಿಕ ಮತ್ತು ಅನಗತ್ಯ ಪದ್ಧತಿ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಶರ್ಟ್, ಬನಿಯನ್ ತೆಗೆದು ಒಳಗೆ ಪ್ರವೇಶಿಸುವುದರಿಂದ ಒಬ್ಬರ ಮೈಗೆ ಇನ್ನೊಬ್ಬರಿಗೆ ತಾಗುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಒಬ್ಬರ ಮೈ ಇನ್ನೊಬ್ಬರಿಗೆ ಸ್ಪರ್ಶ ಆಗುವುದರಿಂದ ಚರ್ಮ ರೋಗಗಳು ಹರಡುವ ಸಾಧ್ಯತೆಗಳಿವೆ. ಅಂಗವಿಕಲರು ಅರೆನಗ್ನ ಸ್ಥಿತಿಯಲ್ಲಿ ಹೋಗಿ ಮುಜುಗರಕ್ಕೆ ಒಳಗಾಗಬೇಕಾಗುತ್ತಿದೆ. ಆದ್ದರಿಂದ ಈ ನಿಯಮಬಾಹಿರ ಆಚರಣೆಗೆ ಅಂತ್ಯ ಹಾಡಬೇಕು. ದೇವಾಲಯಗಳಲ್ಲಿ ಈ ಬಗ್ಗೆ ಅಳವಡಿಸಲಾಗಿರುವ ಬೋರ್ಡ್ಗಳನ್ನು ತೆರವು ಮಾಡಬೇಕು ಎಂದು ಪರಿಸರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.

ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಪ್ರತಿಕ್ರಿಯೆ
ಈ ಬಗ್ಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿ, "ದೇವಸ್ಥಾನದ ಒಳಗೆ ಹೊಲಿದ ಬಟ್ಟೆ ಹಾಕಬಾರದು ಅಂತಾ ನಿಯಮ ಇದೆ. ಮೈಯನ್ನು ಶರ್ಟ್ನಿಂದ ಮುಚ್ಚಬಾರದು ಅಂತಲೂ ನಿಯಮ ಇದೆ. ಹಾಗಾಗಿ ಕೇರಳ ಹಾಗೂ ತುಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಈ ಸಂಪ್ರದಾಯ ಇದೆ. ಶಾಸ್ತ್ರಕ್ಕೂ, ಸಮಾಜಕ್ಕೂ ವಿರೋಧ ಬಾರದ ಹಾಗೆ ತೀರ್ಮಾನ ಮಾಡಬೇಕು. ನೇರ ಮಾತುಗಳಿಂದ ಸಾಮರಸ್ಯ ಕೆಡಬಾರದು. ನಾವು ಮೈ ತೆರೆದಿಟ್ಟು ಹೋಗಬೇಕು ಎಂದು ಹೇಳುವುದಿಲ್ಲ. ಮೇಲ್ವಸ್ತ್ರವನ್ನು ಹಾಕದೇ ಇರುವುದರಿಂದ ಈ ಸಮಸ್ಯೆ ಆಗಿದೆ. ಎಲ್ಲರೂ ಕುಳಿತು ಯಾವುದಕ್ಕೂ ಅಪಚಾರ ಆಗದ ರೀತಿಯಲ್ಲಿ ತೀರ್ಮಾನ ಮಾಡಬೇಕು," ಎಂದಿದ್ದಾರೆ.












Click it and Unblock the Notifications