ತುಳುನಾಡಲ್ಲಿ ಆಟಿ ಅಮಾವಾಸ್ಯೆಯ ಸಂಭ್ರಮ
ಮಂಗಳೂರು, ಆಗಸ್ಟ್, 14 : ತುಳುನಾಡಲ್ಲಿ ಆಟಿ ಅಮಾವಾಸ್ಯೆಯನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮನೆಮಂದಿ ಪಾಲೆ ಮರ ರಸ ಕುಡಿಯುವ ಮೂಲಕ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.
ಸಾವಿರಾರು ಔಷಧಿ ಗುಣವಿರುವ ಪಾಲೆ ಮರ ರಸ ಕುಡಿಯುವುದರಿಂದ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ತುಳುನಾಡಿನಲ್ಲಿದ್ದು, ಸಾರ್ವಜನಿಕರಿಗೂ ಹಂಚುವ ಮೂಲಕ ಸರ್ವಧರ್ಮೀಯತೆಯನ್ನು ಮೆರೆದರು.

ತುಳುನಾಡಿನಲ್ಲಿ ಒಂದು ವಿಶೇಷ ಸಂಪ್ರದಾಯವಿದೆ. ಸೂರ್ಯೋದಯಕ್ಕೆ ಮೊದಲು ಹಾಲೆ(ಪಾಲೆ) ಮರದ ತೊಗಟೆ ತೆಗೆದು ಕಲ್ಲಿನಿಂದ ಜಜ್ಜಿ ರಸವನ್ನು ತೆಗೆದು ಮೊದಲು ದೇವರ ಮುಂದೆ ಇರಿಸಿ ನಂತರ ಮನೆ ಮಂದಿಯೆಲ್ಲ ಖಾಲಿ ಹೊಟ್ಟೆಗೆ ಸೇವಿಸುತ್ತಾರೆ.
ಏನಿದು ಆಟಿ ಅಮವಾಸ್ಯೆ?
ಕರಾವಳಿಯಲ್ಲಿ ಆಷಾಢ ಅಮವಾಸ್ಯೆಯನ್ನು ತುಳುನಾಡಿನಲ್ಲಿ ಆಟಿ ಅಮವಾಸ್ಯೆ ಎನ್ನುತ್ತಾರೆ. ಸಾಮಾನ್ಯವಾಗಿ ಕನ್ನಡ ನಾಡಿನ ಭೀಮನ ಅಮವಾಸ್ಯೆಯೇ ಆಟಿ ಅಮವಾಸ್ಯೆಯಾಗಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಈ ಮಾಸದಲ್ಲಿ ಆಟಿ ಕಳಂಜ ದೈವ ಅಮವಾಸ್ಯೆಯಂದು ಅನೇಕ ಔಷಧಿ ಗುಣಗಳನ್ನು ತಂದು ಮರದಲ್ಲಿ ಇರಿಸುತ್ತದೆ. ಈ ಮರದ ರಸ ತುಂಬಾ ಕಹಿಯಾಗಿದ್ದು, ಯಾರು ಇದನ್ನು ನಂಬಿಕೆಯಿಂದ ಸೇವಿಸುತ್ತಾರೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ. ಸರ್ವರೋಗ ನಿವಾರಕ ಔಷಧಿ ಗುಣ ಸಮೃದ್ಧವಾಗಿರುವ ಇದರಿಂದ ಹೊಟ್ಟೆನೋವು, ಅತಿಸಾರ, ಸಂಧಿನೋವು, ಮಲೇರಿಯಾ, ಜ್ವರ, ಸ್ತ್ರೀರೋಗ, ಹುಣ್ಣು ನಿವಾರಣೆಯಾಗುತ್ತದೆ.












Click it and Unblock the Notifications