ಕಳ್ಳರಿಗೆ ಕೈ ಕೊಟ್ಟ ಗ್ಯಾಸ್ ಕಟರ್, ಇತರ ಮಂಗಳೂರು ಸುದ್ದಿ
ಮಂಗಳೂರು, ನ.24 : ಚಿನ್ನಾಭರಣ ದೋಚುವ ಯೋಜನೆ ಹಾಕಿಕೊಂಡು ಕದ್ರಿಯಲ್ಲಿರುವ ಶಿಲ್ಪಾ ಜ್ಯುವೆಲ್ಲರ್ಸ್ಗೆ ನುಗ್ಗಿದ್ದ ಕಳ್ಳರಿಗೆ ನಿರಾಸೆಯಾಗಿದೆ. ಸೇಫ್ ಲಾಕರ್ ಒಡೆಯಲು ತಂದಿದ್ದ ಗ್ಯಾಸ್ ಕಟ್ಟರ್ ಕೈಕೊಟ್ಟ ಕಾರಣ ಕಳ್ಳರ ದರೋಡೆ ಸಂಚು ವಿಫಲಗೊಂಡಿದ್ದು, ಕೈಗೆ ಸಿಕ್ಕಿ ಸ್ಪಲ್ಪ ಚಿನ್ನ ದೋಚಿ, ಗ್ಯಾಸ್ ಕಟ್ಟರ್ ಅಲ್ಲೇ ಬಿಟ್ಟು ಅವರು ಪರಾರಿಯಾಗಿದ್ದಾರೆ.
ಶಿಲ್ಪಾ ಜ್ಯುವೆಲ್ಲರ್ಸ್ ಮಳಿಗೆಯ ಪಕ್ಕದ ಲೈಫ್ ಸ್ಟೈಲ್ ಮೆನ್ಸ್ ಬ್ಯೂಟಿ ಪಾರ್ಲರ್ ಗೋಡೆಯ ಮೂಲಕ ದೊಡ್ಡದಾದ ಕನ್ನ ಕೊರೆದು ಜ್ಯುವೆಲ್ಲರ್ಸ್ ಒಳಪ್ರವೇಶಿಸಿದ ಕಳ್ಳರು ಸೇಫ್ ಲಾಕರ್ ಮುರಿಯಲು ಯತ್ನಿಸಿದ್ದಾರೆ. ಸೇಫ್ ಲಾಕರ್ ಕೆಳಭಾಗ ಕೊರೆಯುವಷ್ಟರಲ್ಲಿ ಗ್ಯಾಸ್ ಕಟ್ಟರ್ ಕೈ ಕೊಟ್ಟು, ಲಾಕರ್ ಒಡೆಯುವ ಪ್ರಯತ್ನ ವಿಫಲಗೊಂಡಿದೆ.
ಜ್ಯುವೆಲ್ಲರ್ಸ್ ಮಾಲೀಕ ನಾರಾಯಣ ಆಚಾರ್ಯ ಅವರು ಘಟನೆ ಕುರಿತು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ಇನ್ನೂ ತಿಳಿದುಬರಬೇಕಾಗಿದೆ. ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ಮುಂದುವರೆದಿದೆ.

ಕೋಳಿ ಅಂಕ ನಡೆಸಿ ಸಿಕ್ಕಿಬಿದ್ದರು : ಕುಕ್ಕುಂದೂರು ಸಮೀಪದ ನಕ್ರೆಪದವು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸಿ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ಆರೋಪಿಗಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಿಯ್ಯಾರು ಜೋಡುಕಟ್ಟೆ ಕಾರೊಲ್ಗುಡ್ಡೆಯ ಕೂಕ್ರ (65), ವರಂಗ ಮುನಿಯಾಲ್ ಚಟ್ಕಲ್ ಪಾದೆಯ ಭೋಜ ಪೂಜಾರಿ (70), ಕಾರ್ಕಳ ಬಂಗ್ಲೆಗುಡ್ಡೆಯ ಉದಯ (23), ನಿಟ್ಟೆ ದೊಡ್ಡಮನೆ ಕೃಷ್ಣ ಶೆಟ್ಟಿ(62), ಕಲ್ಯಾ ಮಿತ್ತಬೆಟ್ಟು ವಸಂತ(40), ರೆಂಜಾಳ ಪ್ರಶಾಂತ(30), ಕಲ್ಯಾ ಕೈರಬೆಟ್ಟು ಉದಯ(38), ಕಲ್ಯಾ ಗರಡಿ ಬಳಿಯ ಜಗದೀಶ್ (44) ರೆಂಜಾಳದ ಗಣೇಶ್ (44) ಎಂದು ಗುರುತಿಸಲಾಗಿದ್ದು, 6 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆತ್ತವರ ಜೊತೆ ಹೋಗುತ್ತಿದ್ದಾಗ ಬಂತು ಸಾವು : ಪೋಷಕರ ಜೊತೆ ಸ್ಕೂಟರಿನಲ್ಲಿ ತೆರಳುತ್ತಿದ್ದ 8 ವರ್ಷದ ಬಾಲಕಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಕೂಟರ್ ಸ್ಕಿಡ್ ಆದಾಗ ರಸ್ತೆಗೆ ಬಿದ್ದ ಬಾಲಕಿ ಮೇಲೆ ಲಾರಿ ಹತ್ತಿದ್ದರಿಮದ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಮಣ್ಣಗುಡ್ಡ ನಿವಾಸಿ ರಮಾನಂದ ಪೈ ಪುತ್ರಿ ರಚನಾ ಪೈ ಎಂದು ಗುರುತಿಸಲಾಗಿದೆ.

ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ : ಒಂದೂವರೆ ವರ್ಷದ ಹಿಂದೆ ಕುಪ್ಪೆಪದವು ಸಮೀಪದ ಕೆಲಿಂಜಾರು ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ವಿಕಲಚೇತನ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು, ಸುಂದರ (50) ತಪ್ಪಿತಸ್ಥ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.[ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications