ಸೋಮವಾರದ ಮಂಗಳೂರಿನ ಸುದ್ದಿಗಳು
ಮಂಗಳೂರು, ನ.10 : ಕರ್ನಾಟಕದಲ್ಲಿನ ಕಾನೂನು ಸುವ್ಯವಸ್ಥೆಗಳ ಕುರಿತಂತೆ ದೂರುಗಳು ಬಂದಿವೆ. ಆದರೆ, ತಕ್ಷಣಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆಗಳು ಹದಗೆಟ್ಟಿವೆ ಎಂಬ ಆರೋಪದ ಕುರಿತಂತೆ ನಿಗಾ ವಹಿಸಲಾಗಿದೆ. ಒಂದು ವೇಳೆ ಈ ಸಮಸ್ಯೆ ಜಟಿಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಕುರಿತಂತೆ ಸಮಾಲೋಚನೆ ನಡೆಸಲಾಗುವುದು ಎಂದರು.

ಶಾಲೆಗಳಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಗಣಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಲೋಪದೋಷಗಳ ಬಗ್ಗೆ ದೂರುಗಳು ಬರುತ್ತಿವೆ ಎಂದು ರಾಜ್ಯಪಾಲರು ಹೇಳಿದರು.
3 ಲಕ್ಷ ಮೌಲ್ಯದ ಚಿನ್ನ ವಶ : ನಗರದ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರೊಬ್ಬರಿಂದ 3 ಲಕ್ಷ ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಅಂಗಿಲ್ಲಾತ್ ಗ್ರಾಮದ ನಿವಾಸಿ ಶನಿದ್ ಅಂಗಿಲ್ಲಾತ್ (23) ಎಂದು ಗುರುತಿಸಲಾಗಿದೆ. ಈತ ಮೈಕ್ರೋಓವನ್ ಮೋಟಾರ್ ಒಳಗೆ ಚಿನ್ನದ ತುಂಡುಗಳನ್ನು ಇಟ್ಟುಕೊಂಡು ದುಬೈನಿಂದ ಆಗಮಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಉದ್ಯಮಿಗಳಿಗೆ ಬೆದರಿಕೆ ಕರೆ : ಭೂಗತ ಪಾತಕಿ ಕಲಿ ಯೋಗೀಶನ ಹೆಸರಿನಲ್ಲಿ ಪುತ್ತೂರಿನ ಇಬ್ಬರು ಖ್ಯಾತ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಿದೆ. ಚಿನ್ನಾಭರಣ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗೆ ದುಬೈಯಿಂದ ಕರೆ ಬಂದಿದ್ದು 'ಹಫ್ತಾ ನೀಡದಿದ್ದರೆ ಪ್ರಾಣ ತೆಗೆಯುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ. ಸ್ಥಳೀಯ ಯುವಕರು ಉದ್ಯಮಿಗಳ ನಂಬರ್ ಮತ್ತು ಉದ್ಯಮದ ಕುರಿತ ಮಾಹಿತಿಯನ್ನು ಯೋಗೀಶನಿಗೆ ಕಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೋವರ್ಕ್ರಾಫ್ಟ್ 196, 198 ಲೋಕಾರ್ಪಣೆ : ಕರ್ನಾಟಕ ಕರಾವಳಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೋವರ್ ಕ್ರಾಫ್ಟ್ 196, 198ಅನ್ನು ರಾಜ್ಯಪಾಲ ವಾಜುಭಾಯಿ ವಾಲಾ ಅವರು ಸೋಮವಾರ ಲೋಕಾರ್ಪಣೆಗೊಳಿಸಿದ್ದಾರೆ. ಭಯೋತ್ಪಾದಾಕರು ಜಲ ಮಾರ್ಗವಾಗಿ ಬಂದು ದೇಶದ ಭದ್ರತೆಗೆ ಆತಂಕವೊಡ್ಡುತ್ತಿದ್ದು, ಇಂತಹ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ನೌಕಾಪಡೆಯ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಚಿಂತನ ಮಂಥನ ಕಾರ್ಯಕ್ರಮ : ಸುರತ್ಕಲ್ ಬಂಟರ ಭವನದಲ್ಲಿ ಕಲಾವಿದರ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಪಡುಬಿದ್ರೆ ಬಂಟರ ಭವನದಲ್ಲಿ ನಡೆದ ತುಳುವನಡಕೆ ಸ್ಪರ್ಧೆಯಲ್ಲಿ ನವೀನ್ ಶೆಟ್ಟಿ ಅಳಕೆ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘವು ಪ್ರಥಮ ಪ್ರಶಸ್ತಿಯೊಂದಿಗೆ 50 ಸಾವಿರ ರೂ.ನಗದನ್ನು ಗಳಿಸಿಕೊಂಡಿತ್ತು. ಆ ಪ್ರಯುಕ್ತ ನಿರ್ದೇಶಕ ನವೀನ್ ಶೆಟ್ಟಿ ಅಳಕೆ ಅವರನ್ನು ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು.













Click it and Unblock the Notifications