ಮಂಗಳೂರು ಪಾಲಿಕೆಯಲ್ಲಿ ಬಿಜೆಪಿ ಪ್ರತಿಭಟನೆ, ಮೇಯರ್ ಕಣ್ಣೀರು
ಮಂಗಳೂರು, ಅಕ್ಟೋಬರ್ 31: ಇಲ್ಲಿನ ಮಹಾನಗರಪಾಲಿಕೆಯು ಮಂಗಳವಾರ ಹೈಡ್ರಾಮಾಗೆ ಸಾಕ್ಷಿಯಾಯಿತು. ಮೇಯರ್ ಕವಿತಾ ಸನಿಲ್ ತಮ್ಮ ಮೇಲೆ ಬಂದಿರುವ ಹಲ್ಲೆ ಆರೋಪಕ್ಕೆ ಕಣ್ಣೀರಿಟ್ಟರು. ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಮಾಡಿದರು. ಇತ್ತ ವಿರೋಧ ಪಕ್ಷವಾದ ಬಿಜೆಪಿಯ ಸದಸ್ಯರು ಸಭೆ ನಡೆಯಲು ಅವಕಾಶ ನೀಡದಿದ್ದದ್ದು, ರಾಜೀನಾಮೆಗೆ ಆಗ್ರಹಿಸಿದ್ದು ಇಷ್ಟೆಲ್ಲ ಪ್ರಹಸನಕ್ಕೆ ಕಾರಣವಾಯಿತು.
ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಭೆ ನಿಗದಿಯಂತೆ ಶುರು ಆಗಲಿಲ್ಲ. ಮೇಯರ್ ವಿರುದ್ಧ ಧಿಕ್ಕಾರ ಕೂಗಲಾಯಿತು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಮೇಯರ್, ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ವಿರೋಧ ಪಕ್ಷದವರಿಗೆ ಸವಾಲು ಎಸೆದರು.

ಅಷ್ಟಕ್ಕೂ ಇಷ್ಟೆಲ್ಲ ಹೈ ಡ್ರಾಮಾಗೆ ಕಾರಣವಾಗಿದ್ದು ಮೇಯರ್ ಕವಿತಾ ಸನಿಲ್ ತಮ್ಮ ಫ್ಲ್ಯಾಟ್ ನ ವಾಚ್ ಮನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ. "ನನ್ನನ್ನು ಮೇಯರ್ ಅಂತ ನೋಡಬೇಡಿ. ಒಂದು ಮಗವಿನ ತಾಯಿ ಮನಸ್ಥಿತಿ ಹೇಗಿರುತ್ತದೆ ಅಂತ ಯೋಚಿಸಿ" ಎಂದು ಕವಿತಾ ಮನವಿ ಮಾಡಿದರು.

ಫ್ಲ್ಯಾಟ್ ನಲ್ಲಿನ ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಪರಿಶೀಲಿಸಿ. ಯಾರ ಮೇಲೂ ನಾನು ಹಲ್ಲೆ ಮಾಡಿಲ್ಲ ಎಂದು ಉತ್ತರ ನೀಡುತ್ತಲೇ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡಿದರು. ಪಾಲಿಕೆಯಲ್ಲಿ ಗೊಂದಲದ ವಾತಾವರಣ ಮೂಡಿತು.












Click it and Unblock the Notifications