ಮಂಗಳೂರಿನಲ್ಲಿ ಪಿಲಿ ಪರ್ಬ ಅಬ್ಬರ- ಪೊಳಲಿ ಟೈಗರ್ಸ್ ಗೆ ಪಿಲಿ ಕಿರೀಟ
ಮಂಗಳೂರು, ಅ.03: ದಸರಾ ಬಂತು ಅಂದ್ರೆ ಕರಾವಳಿಯಲ್ಲಿ ಎಲ್ಲಿ ನೋಡಿದರೂ ಹುಲಿಗಳದ್ದೇ ಸದ್ದು...ಅದು ಅಂತಿತಾ ಹುಲಿಗಳಲ್ಲ ಒಂದಕ್ಕಿಂತ ಒಂದು ಮೀರಿಸುವ ಹುಲಿಗಳು. ಆದ್ರೆ ಆ ಎಲ್ಲಾ ಹುಲಿಗಳು ಒಂದೇ ಕಡೆ ಸೇರುವ ಮೂಲಕ ಜನರಿಗೆ ಸಕತ್ ಮನರಂಜನೆ ನೀಡಿತ್ತು.
ಜಗಮಗಿಸುವ ಲೈಟ್ಗಳು. ನಡುವಿನಲ್ಲಿ ಇರೋ ರಿಂಗ್... ರಿಂಗ್ ಮೇಲೆ ತಾಳಕ್ಕೆ ಲಯಬದ್ಧವಾಗಿ ನಲಿತಾ ಇರೋ ಹುಲಿಗಳು. ಹೌದು ಇದು ಮಂಗಳೂರಿನಲ್ಲಿ ದಸರಾ ಪ್ರಯುಕ್ತ ನಡೆದ ಪಿಲಿ ಪರ್ಬದ ದೃಶ್ಯಗಳು. ಪಿಲಿ ಪರ್ಬ ಅಂದ್ರೆ ಹುಲಿಗಳ ಹಬ್ಬ.. ಮಂಗಳೂರಿನ ಜನರಿಗೆ ಮೈ ರೋಮಾಂಚನಗೊಳಿಸುವ ಅನುಭವ ನೀಡಿದೆ. ಕುಡ್ಲಾ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಹುಲಿ ಕುಣಿತ ಕರಾವಳಿಯ ಜಾನಪದ ಹಾಗೂ ಸಾಂಪ್ರದಾಯಿಕ ಕುಣಿತವಾಗಿದ್ದು. ಇದು ಈಗ ವಿಶ್ವದ ಗಮನ ಸೆಳೆಯುತ್ತಿದೆ. ಹುಲಿ ವೇಷದ ಬ್ಯಾಂಡ್ ದೇಶ ವಿದೇಶದಲ್ಲೂ ಫೇಮಸ್ ಆಗಿದೆ. ಮದುವೆ ಇರಲಿ ಪಾರ್ಟಿ ಇರಲಿ ಎಲ್ಲಾ ಕಡೆಯಲ್ಲೂ ಹುಲಿ ಕುಣಿತ ಬಳಕೆಯಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚು ಪ್ರಸಿದ್ಧಿಗೆ ತರಲು ಹಾಗೂ ಜಿಲ್ಲೆಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಪಿಲಿ ಪರ್ಬವನ್ನು ಆಯೋಜಿಸಿದ್ದಾರೆ.

ಹುಲಿ ಕುಣಿತದ ತಾಳಕ್ಕೆ ಹೆಜ್ಜೆ ಹಾಕಿದ ಪುಟಾಣಿಗಳು
ಕರಾವಳಿಯಲ್ಲಿ ಹುಲಿ ಕುಣಿತದಲ್ಲಿ ಹಲವು ಪ್ರಕಾರಗಳಿದ್ದು ಅದು ಪ್ರದೇಶದಿಂದ ಪ್ರದೇಶಕ್ಕೆ ವಿಬಿನ್ನವಾಗಿದೆ. ಆದರೆ ಮಂಗಳೂರಿನ ಹುಲಿ ತಂಡಗಳು ಕುಣಿತದ ಜೊತೆ ಮಾಡುವ ಸಾಹಸಗಳು ಮೈ ರೋಮಾಂಚನಗೊಳಿಸುತ್ತದೆ.
ಇನ್ನು ಹುಲಿ ಬ್ಯಾಂಡ್ಗೆ ಎಂತಹವರೂ ಕೂಡಾ ಎದ್ದು ಕುಣಿಯಲು ಮುಂದಾಗುತ್ತಾರೆ ಅನ್ನುವುದಕ್ಕೆ ಇದೇ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಹಾಕಿದ ಸ್ಟೆಪ್ಗಳೇ ಸಾಕ್ಷಿಯಾಗಿದೆ.

ಹುಲಿ ಕುಣಿತದಲ್ಲಿ ಗೆದ್ದವರಿಗೆ ಐದು ಲಕ್ಷ ಬಹುಮಾನ
ಇನ್ನು ಇಲ್ಲಿ ಆಯೋಜನೆ ಮಾಡಿರೋದು ಕೇವಲ ಕುಣಿತ ಮಾತ್ರವಾಗಿರದೆ ಇದೊಂದು ಸ್ಪರ್ಧೆಯಾಗಿತ್ತು. ಸುಮಾರು ಹನ್ನೆರಡು ತಂಡಗಳು ಭಾಗವಹಿಸಿರೋ ಈ ಕಾರ್ಯಕ್ರಮದಲ್ಲಿ ಗೆಲ್ಲುವ ತಂಡಕ್ಕೆ ಐದು ಲಕ್ಷ ಬಹುಮಾನವನ್ನೂ ನೀಡಲಾಗುತ್ತದೆ. ಭಾಗವಹಿಸುವ ಪ್ರತಿ ತಂಡಕ್ಕೂ 50 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಇದಲ್ಲದೆ ವೈಯಕ್ತಿಕ ಬಹುಮಾನಗಳೂ ಇದ್ದು ಗೆಲ್ಲುವ ತಂಡಕ್ಕೆ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನೂ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆದ ಹುಲಿವೇಷ ಸ್ಪರ್ಧಾಕೂಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಒಂದೊಂದು ತಂಡದಲ್ಲಿ ಒಟ್ಟು 15 ಹುಲಿವೇಷಧಾರಿಗಳಿದ್ದರು. ಸಾಂಪ್ರದಾಯಿಕ ಶೈಲಿಯ ನೆಲೆಯಲ್ಲಿಯೇ ಸ್ಪರ್ಧೆ ಆಯೋಜನೆಗೊಂಡಿತ್ತು.

ಪ್ರೇಕ್ಷಕರಿಗಾಗಿ ಸುತ್ತಲೂ ಗ್ಯಾಲರಿ ವ್ಯವಸ್ಥೆ
ಬಾಯಿಯಲ್ಲಿ ಅಕ್ಕಿ ಮುಡಿ ಎತ್ತುವುದು, ಪಲ್ಟಿ ಹೊಡೆಯುದು, ಟೈಮಿಂಗ್, ಶಿಸ್ತು, ವಿಶಿಷ್ಟ ಸ್ಟೆಪ್ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ರತಿ ತಂಡಕ್ಕೂ ಪ್ರದರ್ಶನ ನೀಡಲು 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.
ಇನ್ನು ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಹುಲಿವೇಷ ಕುಣಿತಕ್ಕೆ ಎತ್ತರದ ಸ್ಟೇಜ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಕಾಣುವಂತೆ ಪ್ರೇಕ್ಷಕರಿಗೆ ಸುತ್ತಲೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.

ಕಾಳಿಚರಣ್ ಫ್ರೆಂಡ್ಸ್ ಬೋಳೂರಿಗೆ ದ್ವಿತೀಯ ಸ್ಥಾನ
ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು 'ಪೊಳಲಿ ಟೈಗರ್ಸ್' ಪ್ರಥಮ ಸ್ಥಾನ ಗಳಿಸಿದರೆ, ಕಾಳಿಚರಣ್ ಫ್ರೆಂಡ್ಸ್ ಬೋಳೂರು ದ್ವಿತೀಯ, ನಂದಿಗುಡ್ಡೆ ಫ್ರೆಂಡ್ಸ್ ಹುಲಿ ಬಾಬುಗುಡ್ಡೆ ತಂಡ ತೃತೀಯ ಸ್ಥಾನ ಗಳಿಸಿತು. ವೈಯಕ್ತಿಕ ನೆಲೆಯಲ್ಲಿ ಕೋಡಿಕಲ್ ವಿಶಾಲ್ ಟೈಗರ್ಸ್ ಬ್ಲಾಕ್ ಟೈಗರ್, ತುಳುವೆರ್ ಕುಡ್ಲದ ಪರ್ಬದ ಪಿಲಿ, ಎಮ್ಮೆಕೆರೆ ಮರಿ ಹುಲಿ ಬಹುಮಾನ ಗಳಿಸಿತು.
ಬಣ್ಣಗಾರಿಕೆಯಲ್ಲಿ ಕಾಳಿಚರಣ್ ಬಹುಮಾನ ಬಳಿಸಿದರೆ, ಧರಣಿ ಮಂಡಲ ಹಾಡಿಗೆ ಪೊಳಲಿ ತಂಡ ಬಹುಮಾನ ಗಳಿಸಿತು. ಮುಡಿ ಹಾರಿಸುವುದರಲ್ಲಿ ನಂದಿಗುಡ್ಡೆ ಫ್ರೆಂಡ್ಸ್ ಹುಲಿ (ಕೌಶಿಕ್ ಪೂಜಾರಿ), ತಾಸೆಯಲ್ಲಿ ಕೊಡಿಯಾಲಬೈಲ್ ಫ್ರೆಂಡ್ಸ್, ಶಿಸ್ತಿನ ತಂಡವಾಗಿ ಜೈ ಶಾರದಾಂಬ ಪೇಜಾವರ ಪೊರ್ಕೋಡಿ ವೈಯಕ್ತಿಕ ಬಹುಮಾನ ಗಳಿಸಿವೆ.
ದಸರಾದಲ್ಲಿ ಹುಲಿವೇಷ ಹಾಕಿ ನಲಿಯೋದು ಕರಾವಳಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಣ್ಣ ಹಾಗೂ ಬ್ಯಾಂಡ್ಗಳು ದುಬಾರಿಯಾದ ಕಾರಣ ಕೆಲವೊಂದು ತಂಡಗಳು ಹುಲಿ ವೇಷ ಹಾಕೋದನ್ನೇ ನಿಲ್ಲಿಸಿವೆ. ಹೀಗಾಗಿ ಇದು ನಿಲ್ಲಬಾರದು ಅನ್ನೋ ಕಾರಣಕ್ಕೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅನ್ನೋ ಸಂಸ್ಥೆಯ ಮೂಲಕ ಈ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.












Click it and Unblock the Notifications