ನೋಡಬನ್ನಿ ಮಂಗಳೂರು ದಸರಾ ವೈಭವ: ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ
ಮಂಗಳೂರು, ಅಕ್ಟೋಬರ್ 7: ಮೈಸೂರು ದಸರಾ ಬಳಿಕ ರಾಜ್ಯದಲ್ಲೇ ಅತೀ ಪ್ರಸಿದ್ಧಿ ಪಡೆದ ಮಂಗಳೂರು ದಸರಾಗೆ ಚಾಲನೆ ದೊರೆತಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ.
ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹತ್ತು ದಿನಗಳ ಕಾಲ ನಡೆಯುವ ಮಂಗಳೂರು ದಸರಾಗೆ ಚಾಲನೆ ಸಿಕ್ಕಿದ್ದು, ಈ ಬಾರಿ ನಮ್ಮ ದಸರಾ- ನಮ್ಮ ಸುರಕ್ಷತೆ ಎಂಬ ಧ್ಯೇಯ ವಾಕ್ಯದಡಿ ವೈಭವದ ದಸರಾ ನಡೆಯಲಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಟಪದಲ್ಲಿ ಶಾರದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಪ್ರತಿಷ್ಠಾಪಿಸಲಾಗಿದೆ. ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಅ.16ರವರೆಗೆ ಮಂಗಳೂರು ದಸರಾ ಉತ್ಸವ ನಡೆಯಲಿದ್ದು, ಅ.16ರಂದು ಸಂಜೆ ಪೂಜೆ ಸಂಪನ್ನಗೊಂಡ ಬಳಿಕ ರಾತ್ರಿ ಶ್ರೀಶಾರದಾ ಮಾತೆ, ಶ್ರೀಮಹಾಗಣಪತಿ ದೇವರ ಸಹಿತ ನವದುರ್ಗೆಯವರ ಮೂರ್ತಿಯನ್ನು ದೇವಳಕ್ಕೆ ಒಂದು ಸುತ್ತು ಪ್ರದಕ್ಷಿಣೆ ಮಾಡಿ, ದೇವಳದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಗುತ್ತದೆ.
ಕೊರೊನಾ ಕಾರಣದಿಂದ ನವದುರ್ಗೆಯರನ್ನು ದೇವಳಕ್ಕೆ ಪ್ರದಕ್ಷಿಣೆ ಹಾಕಿ, ನವದುರ್ಗೆಯರ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಈ ಹಿಂದೆ ಇಡೀ ಮಂಗಳೂರು ನಗರದಲ್ಲಿ ಟ್ಯಾಬ್ಲೋ, ನವದುರ್ಗೆಯ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತಿತ್ತು. ರಾತ್ರಿಯಿಂದ ಬೆಳಗ್ಗಿನವರೆಗೆ ಮೆರವಣಿಗೆ ನಡೆದು ಮುಂಜಾನೆ ವೇಳೆಗೆ ಕ್ಷೇತ್ರದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಗುತಿತ್ತು. ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ.
ಮಂಗಳೂರು ದಸರಾ ಹಿನ್ನಲೆಯಲ್ಲಿ ಮಂಗಳೂರಿನ ರಾಜಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಸಿಂಗಾರವಾಗಿದೆ. ಮಂಗಳೂರು ದಸರಾದ ಪ್ರಮುಖ ಆಕರ್ಷಣೆ ವಿದ್ಯುತ್ ದೀಪಾಲಂಕಾರ. ಕಳೆದ ವರ್ಷ ಕೇವಲ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ಇಡೀ ಮಂಗಳೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ಮಂಗಳೂರು ಮಹಾನಗರ ಪಾಲಿಕೆಯ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಕ್ಷೇತ್ರದ ಶಾರದಾ ಮಾತೆ, ಗಣಪತಿ ಮತ್ತು ನವದುರ್ಯೆಯರ ಮೂರ್ತಿಯನ್ನು ನೋಡಲೆಂದೇ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಶಾರದೆಯ ಮಂದಸ್ಮಿತ ಮೂರ್ತಿಯನ್ನು ನೋಡುವುದಕ್ಕೆ ಸಾವಿರಾರು ಮಂದಿ ಕಾತುರದಿಂದ ಕಾಯುತ್ತಾರೆ. ಶಿವಮೊಗ್ಗದ 11 ಮಂದಿ ಕಲಾವಿದರ ತಂಡ ಈ ಮೂರ್ತಿಯನ್ನು ಮಾಡಿದ್ದು, 25 ದಿನಗಳ ಕಲಾವಿದರ ಪರಿಶ್ರಮದಿಂದ ನವದುರ್ಗೆಯರ ಸುಂದರ ಮೂರ್ತಿ ವಿರಾಜಮಾನವಾಗಿದೆ.
ಈ ಬಾರಿ ಕುದ್ರೋಳಿ ಕ್ಷೇತ್ರದಲ್ಲಿ ಕೊರೊನಾ ಲಸಿಕೆ ಕೌಂಟರ್ ತೆರೆಯಲಾಗಿದ್ದು, ಲಸಿಕೆಯಾಗದ ಭಕ್ತರಿಗೆ ಉಪಯೋಗಕಾರಿಯಾಗಲಿದೆ. ದೇವಳದ ಆವರಣದಲ್ಲಿ ಎಲ್ಇಡಿ ಸ್ಕ್ರೀನ್ ಹಾಕಲಾಗಿದ್ದು, ಆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ.
ಒಟ್ಟಿನಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಪರಿಕಲ್ಪನೆಯಿಂದ ಮಂಗಳೂರು ದಸರಾ ವಿಶ್ವವಿಖ್ಯಾತಿಯನ್ನು ಪಡೆದಿದ್ದು, ಕೊರೊನಾ ಕಾರಣದಿಂದ ಸರಳ ಹಾಗೂ ಸುಂದರವಾಗಿ ನಡೆಯಲಿದೆ.