ಮಂಗಳೂರಲ್ಲಿಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಮೇಲೆ ದಾಳಿ
ಮಂಗಳೂರು, ಡಿಸೆಂಬರ್ 28: ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯ ಸಾಮಗ್ರಿಗಳ ಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಗೆ ಪೊಲೀಸರು ದಾಳಿ ನಡೆಸಿ ಲಾರಿ ಹಾಗೂ ಬಿಸಿಯೂಟ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಬಳಿಯ ಗೋಡೌನ್ ಗೆ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ದಂಬೇಲ್ ಗುರುಕೃಪಾ ಆಯಿಲ್ ಮಿಲ್ ನಲ್ಲಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಗಳ ಅನ್ವಯ ಒದಗಿಸಲಾಗುವ ಅಕ್ಕಿ, ತೊಗರಿಬೇಳೆ ಹಾಲಿನ ಹುಡಿ ಪ್ಯಾಕೆಟ್ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕುಸ್ಟಗಿ ನಿವಾಸಿ ಬಸವರಾಜು, ಮಂಗಳೂರು ಅಶೋಕ ನಗರ ನಿವಾಸಿ ಚಂದ್ರ ಕುಮಾರ್, ಚಿಲಿಂಬಿ ನಿವಾಸಿ ರಕ್ಷಿತ್ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 25 ಕೆಜಿ ನಂದಿನಿ ಹಾಲಿನ ಪುಡಿ, ಒಂದು ಕ್ವಿಂಟಾಲ್ ತೊಗರಿಬೇಳೆ, 2.5 ಕ್ವಿಂಟಾಲ್ ಅಕ್ಕಿ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 10.49 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.












Click it and Unblock the Notifications